ಜಾಗದ ತಕರಾರು: ಉಡುಪಿಯಲ್ಲಿ ನ್ಯಾಯಕ್ಕಾಗಿ ವಿಧವೆಯ ಅಳಲು
ಉಡುಪಿ, ಅಕ್ಟೋಬರ್ 24: ಮೂವತ್ತು ವರ್ಷಗಳಿಂದ ಉಡುಪಿ ಜಿಲ್ಲೆಯ ಹಳ್ಳಿಹೊಳೆ ಕೊಳೆಕೋಡು ಎಂಬಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ತಮ್ಮ ಮೇಲೆ ದುಷ್ಕರ್ಮಿಗಳು ದೌರ್ಜನ್ಯ ಮಾಡಿದ್ದಾಗಿ ವಿಧವೆ ಶೈಲ ಚಾತ್ರ ಅಳಲು ತೋಡಿಕೊಂಡಿದ್ದಾರೆ. ಮಾತ್ರವಲ್ಲ, ತಮಗಾದ ದೌರ್ಜನ್ಯದ ಕುರಿತು ದೂರು ನೀಡಲು ಹೋದರೂ ಪೊಲೀಸರು ದೂರು ಸ್ವೀಕರಿಸದೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡ ಈಕೆ ಗಂಡ ತನಗಾಗಿ ಬಿಟ್ಟು ಹೋದ ಕೃಷಿ ಭೂಮಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಗಂಡ ಸಾಯುವಾಗ ಬರಡಾಗಿದ್ದ ಭೂಮಿಯನ್ನು ಸಂಪದ್ಭರಿತ ಭೂಮಿಯಾಗಿ ಪರಿವರ್ತಿಸುವಲ್ಲಿ ಇವರ ಬೆವರಿನ ಹನಿ ಇದೆ. ಆದರೆ ಈಗ ಇವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮುಂದೆ ಓದಿ...
ನ್ಯಾಯಕ್ಕಾಗಿ ಮೊರೆಯಿಡುತ್ತಿರುವ ಮಹಿಳೆ
ಇದೇ ತಿಂಗಳ ಹತ್ತೊಂಬತ್ತರಂದು ಇವರ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಅಡಿಕೆ, ತೆಂಗು ಫಸಲನ್ನು ಮತ್ತು ಮರಗಳನ್ನು ನಿಷ್ಕರುಣೆಯಾಗಿ ಕಡಿದು ಸಾಗಿಸಿದ್ದಾರೆ. ಅದನ್ನು ಪ್ರಶ್ನಿಸಲು ಹೋದಾಗ ನಮ್ಮ ಮೇಲೆ ದೌರ್ಜನ್ಯ ಮಾಡಲಾಗಿದೆ. ನಮಗೆ ನ್ಯಾಯ ಬೇಕು ಎಂದು ಶೈಲ ಚಾತ್ರ ಹೇಳಿದ್ದಾರೆ.
ಮಹಿಳಾ ದೌರ್ಜನ್ಯ ತಡೆಯಲು ಎಲ್ಲ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ
1976ರಿಂದಲೂ ಜಮೀನಿನ ತಕರಾರು
ಶೈಲ ಚಾತ್ರ ಅವರಿಗೆ ಸೇರಿದ ಜಮೀನಿನ ತಕರಾರು 1976ರಿಂದಲೂ ನ್ಯಾಯಾಲಯದಲ್ಲಿದೆ. ಈ ಭೂಮಿಯ ಕಾಗದ ಪತ್ರದ ಬಗೆಗಿನ ಜಟಾಪಟಿ ಇನ್ನೂ ನಡೆಯುತ್ತಿದೆ. ಶೈಲ ಅವರ ಸ್ವಾಧೀನದಲ್ಲಿರುವ ಈ ಭೂಮಿಯ ಹಸ್ತಾಂತರ ಪ್ರಕ್ರಿಯೆ ಕಾನೂನಾತ್ಮಕವಾಗಿ ನಡೆದಿಲ್ಲ. ಇವರಿಗೆ ನ್ಯಾಯಾಲಯದಿಂದ ಯಾವುದೇ ನೋಟೀಸ್ ಕೂಡ ಸಿಕ್ಕಿರುವುದಿಲ್ಲ. ಹೀಗಿರುವಾಗಲೇ ಏಕಾಏಕಿ ಬಂದ ದುಷ್ಕರ್ಮಿಗಳು ದೌರ್ಜನ್ಯ ನಡೆಸಿದ್ದು, ಈ ಹೆಣ್ಣು ಮಗಳು ಆತಂಕದಿಂದ ಜೀವನ ಸಾಗಿಸುವಂತಾಗಿದೆ.
ತಹಶೀಲ್ದಾರ್ ಹೇಳುವುದೇನು?
ಶೈಲ ಚಾತ್ರ ಅವರ ಜಮೀನಿನ ತಕರಾರು ನ್ಯಾಯಾಲಯದಲ್ಲಿದೆ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಅವರ ಎದುರು ಪಾರ್ಟಿಯವರು ತಮಗೆ ರಕ್ಷಣೆ ಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅದರಂತೆ ರಕ್ಷಣೆ ನೀಡುವಂತೆ ಕೋರಿ ಅರ್ಜಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದೆ. ಪೊಲೀಸರ ಸಮಕ್ಷಮ ಎದುರು ಪಾರ್ಟಿಯವರು ಜಮೀನಿಗೆ ಹೋಗಿದ್ದಾರೆ. ಅಲ್ಲಿ ಏನು ನಡೆದಿದೆ ಎಂಬುದು ತನಗೆ ತಿಳಿದಿಲ್ಲ ಎಂದು ಸ್ಥಳೀಯ ತಹಶೀಲ್ದಾರ್ ಪ್ರತಿಕ್ರಿಯಿಸಿದ್ದಾರೆ.
ಒಂದು ವರ್ಷದಿಂದ ಶೌಚಾಲಯದಲ್ಲೇ ಬಂಧಿಯಾಗಿದ್ದ ಮಹಿಳೆಯ ರಕ್ಷಣೆ
Recommended Video
ದೌರ್ಜನ್ಯಕ್ಕೊಳಗಾದ ಮಹಿಳೆಯ ಮಾತು
ಸ್ಥಳೀಯರಾದ ಲಕ್ಷ್ಮೀನಾರಾಯಣ ಚಾತ್ರ ಮತ್ತು ಸುಬ್ರಹ್ಮಣ್ಯ ಚಾತ್ರ ಜೊತೆಗೆ 60 - 70 ಜನ ನಮ್ಮ ಜಮೀನಿಗೆ ಏಕಾಏಕಿ ನುಗ್ಗಿದರು. ಏನು ವಿಷಯ ಎಂದು ಹೇಳಿದ್ದಕ್ಕೆ ಈ ಜಾಗ ನಮಗೆ ಆಗಿದೆ ಎಂದು ಹೇಳಿದ್ದಾರೆ. ಆದೇಶ ಪ್ರತಿ ಕೇಳಿದರೆ ಅದನ್ನು ಕೊಟ್ಟಿಲ್ಲ. ಬಂದವರ ಕೈಯಲ್ಲಿ ಕತ್ತಿ ದೊಣ್ಣೆ, ಹಾರೆ, ಪಿಕಾಸಿ ಎಲ್ಲ ಇದ್ದವು. ನನ್ನ ಮಗಳು ಅವರ ದೌರ್ಜನ್ಯದ ವಿಡಿಯೋ ಮಾಡುತ್ತಿದ್ದಾಗ ಮೊಬೈಲ್ ಕಿತ್ತುಕೊಂಡು ಒಡೆದು ಹಾಕಿದ್ದಾರೆ. ಬೆಳಿಗ್ಗೆ ಬಂದವರು ಸಂಜೆ ತನಕ ತೋಟದ ಮರಗಳನ್ನು ಕಡಿದು ಹಾಕಿದ್ದಾರೆ. ಬೆಳೆಗಳನ್ನು ದೋಚಿದ್ದಾರೆ. ಕಾನೂನು ಪ್ರಕಾರ ಈ ಜಾಗ ಅವರಿಗೆ ಆಗಿದ್ದರೆ, ಕೋರ್ಟ್ ಆದೇಶ ಕೊಡಲಿ. ನಾನು ಬಿಟ್ಟುಕೊಡಲು ಸಿದ್ಧ ಎನ್ನುತ್ತಾರೆ ದೌರ್ಜನ್ಯಕ್ಕೊಳಗಾದ ಮಹಿಳೆ ಶೈಲಾ ಚಾತ್ರ.