ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿ ಸಾರ್ವಕಾಲಿಕ ದಾಖಲೆ
ಉಡುಪಿ, ಮೇ 12: ಜಿಲ್ಲೆಯ ಪುರಾಣ ಪ್ರಸಿದ್ದ ಕೊಲ್ಲೂರು ಶ್ರೀಮೂಕಾಂಬಿಕೆ ದೇವಾಲಯದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ಮುಗಿದಿದ್ದು, ದಾಖಲೆ ಮೊತ್ತದ ಹಣ ಸಂಗ್ರಹವಾಗಿದೆ. ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಧರ್ಮದಾಯ (ಮುಜರಾಯಿ) ಇಲಾಖೆಯ ಮೊದಲ ಐದು ಶ್ರೀಮಂತ ದೇವಾಲಯಗಳ ಪೈಕಿ ಕೊಲ್ಲೂರು ದೇವಾಲಯ ಕೂಡಾ ಒಂದು.
ಕೊರೊನಾ ನಂತರದ ನಿರ್ಬಂಧ ಸಡಿಲಿಕೆ, ಶಾಲಾ ಕಾಲೇಜುಗಳಿಗೆ ರಜೆ, ಸಾಲುಸಾಲು ಸರಕಾರೀ ರಜೆಯ ಕಾರಣಗಳಿಂದಾಗಿ, ಕಳೆದ ಕೆಲವು ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದಾರೆ.
ಕೊಲ್ಲೂರು ಸಲಾಂ ಮಂಗಳಾರತಿ ನಿಲ್ಲಿಸಿ; ಕಲ್ಲಡ್ಕ ಪ್ರಭಾಕರ್ ಭಟ್
ಕಾಣಿಕೆ ಹುಂಡಿ ಎಣಿಕೆ ಬುಧವಾರ (ಮೇ 11) ಬುಧವಾರ ಮುಗಿದಿದ್ದು, ದೇವಾಲಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾಣಿಕೆ ರೂಪದ ಹಣ 1.53 ಕೋಟಿ ಸಂಗ್ರಹವಾಗಿದೆ. ಇದುವರೆಗೆ, ನಾಲ್ಕು ತಿಂಗಳ ಕೆಳಗೆ 1.39 ಕೋಟಿ ಸಂಗ್ರಹವಾಗಿದ್ದೇ ಅತಿಹೆಚ್ಚಾಗಿತ್ತು.
ಬುಧವಾರ ಕಾಣಿಕೆ ರೂಪದಲ್ಲಿ 2.5 ಕೆಜಿ ಬಂಗಾರ ಮತ್ತು 4.2 ಕೆಜಿ ಬೆಳ್ಳಿವಸ್ತುಗಳೂ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ರಾಜ್ಯದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ನಂತರ, ಮುಜರಾಯಿ ಇಲಾಖೆಗೆ ಅತಿಹೆಚ್ಚು ಆದಾಯ ತಂದು ಕೊಡುವ ದೇವಾಲಯಗಳ ಪೈಕಿ ಕೊಲ್ಲೂರು ಮೂಕಾಂಬಿಕೆ ದೇವಾಲಯ ಕೂಡಾ ಒಂದು.
ಕೊಲ್ಲೂರು ಕ್ಷೇತ್ರಕ್ಕೆ ಸರಾಸರಿ ಹತ್ತು ಸಾವಿರ ಭಕ್ತರು ಆಗಮಿಸುತ್ತಿದ್ದಾರೆ. ಪ್ರಮುಖವಾಗಿ, ಕೇರಳದಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಈ ದೇವಾಲಯವಿದೆ.
Recommended Video
ಮಾರ್ಚ್ ತಿಂಗಳಲ್ಲಿ ನಡೆದ ದೇವಾಲಯದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ, ವ್ಯಾಪಾರ ನಡೆಸಲು ಹಿಂದೂಯೇತರರಿಗೆ ಅವಕಾಶ ನೀಡದೇ ಇದ್ದದ್ದು ಸುದ್ದಿಯಾಗಿತ್ತು. ಇದಾದ ನಂತರ, ಟಿಪ್ಪು ಸುಲ್ತಾನ್ ಹೆಸರಿನಲ್ಲಿ ನಡೆಸಲಾಗುವ ಸಲಾಂ ಮಂಗಳಾರತಿ ನಿಲ್ಲಿಸುವ ವಿಚಾರದಲ್ಲೂ ದೇವಾಲಯದ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕಾಗಿ ಬಂದಿತ್ತು.