ಉಡುಪಿ ಅಷ್ಟಮಠಗಳಲ್ಲಿ ಒಗ್ಗಟ್ಟು: ಎರಡೆರಡು ಜನ್ಮಾಷ್ಟಮಿಗೆ ಕೃಷ್ಣಾರ್ಪಣ
ಉಡುಪಿ, ಆಗಸ್ಟ್ 3: ಎರಡೆರಡು ಏಕಾದಶಿ, ಕೃಷ್ಣಜನ್ಮಾಷ್ಟಮಿ ಆಚರಿಸಿ ಭಕ್ತರಲ್ಲಿ ಗೊಂದಲ ಮೂಡಿಸುವ ಉಡುಪಿ ಅಷ್ಟಮಠಾಧೀಶರಿಗೆ ಶ್ರೀಕೃಷ್ಣ ಮುಖ್ಯಪ್ರಾಣನ ಪ್ರೇರಣೆಯಾದಂತಿದೆ. ಈ ಬಾರಿ ಅಂದರೆ ವಿಲಂಬ ಸಂವತ್ಸರದಲ್ಲಿ ಬರುವ ಕೃಷ್ಣಜನ್ಮಾಷ್ಟಮಿ ಹಬ್ಬವನ್ನು ಎಲ್ಲಾ ಮಠಗಳು ಒಂದೇ ದಿನ ಆಚರಿಸಲು ನಿರ್ಧರಿಸಿವೆ.
ಏಕಾದಶಿ ವ್ರತಾಚರಣೆ ಮತ್ತು ಕೃಷ್ಣಜನ್ಮಾಷ್ಟಮಿ ಆಚರಣೆ ವಿಚಾರದಲ್ಲಿ ನಾಲ್ಕು ಮಠಗಳು ಆರ್ಯಭಟ ಪಂಚಾಂಗ ಮತ್ತು ಇನ್ನು ನಾಲ್ಕು ಮಠಗಳು ದೃಗ್ಗುಣಿತ ಪಂಚಾಂಗವನ್ನು ಅನುಸರಿಸಿಕೊಂಡು ಬರುತ್ತಿರುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವಂತದ್ದು.
ಶ್ರೀಕೃಷ್ಣ ಜನ್ಮಾಷ್ಟಮಿ ಮಕ್ಕಳಿಗಾಗಿ ಸ್ಪರ್ಧೆ: ಕಥೆ ಹೇಳಿ ಬಹುಮಾನ ಗೆಲ್ಲಿ!
ಕಳೆದ ಬಾರಿಯೂ ನಾಲ್ಕು ಮಠಗಳು (ಶೀರೂರು, ಕಾಣಿಯೂರು, ಸೋದೆ, ಕೃಷ್ಣಾಪುರ) ಒಂದು ದಿನ ಮತ್ತು ಪೇಜಾವರ, ಪುತ್ತಿಗೆ, ಅದಮಾರು ಮತ್ತು ಪಲಿಮಾರು ಮಠಗಳು ಇನ್ನೊಂದು ದಿನದಂದು ಅರ್ಘ್ಯಪ್ರಧಾನ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.
ಆದರೆ, ಈ ಬಾರಿ ಎಲ್ಲಾ ಮಠಗಳು ಸೆಪ್ಟಂಬರ್ ಎರಡರಂದು (ಭಾನುವಾರ) ಮಧ್ಯರಾತ್ರಿ 11.48ಕ್ಕೆ ಅರ್ಘ್ಯಪ್ರಧಾನ ಮತ್ತು ಸೆ 3ರಂದು ವಿಟ್ಲಪಿಂಡಿ ಕಾರ್ಯಕ್ರಮ ನಡೆಸಲು ನಿರ್ಧರಿಸಿವೆ. ಸಿಂಹ ಮಾಸದ ಕೃಷ್ಣಪಕ್ಷ ರೋಹಿಣಿ ನಕ್ಷತ್ರದಂದು ಅರ್ಘ್ಯಪ್ರಧಾನ ಮಾಡುವ ಪದ್ದತಿಯನ್ನು ಆಚಾರ್ಯ ಮಧ್ವರ ಕಾಲದಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ.
ಆದರೆ, ಅಷ್ಟಮಠಗಳು ಬೇರೆ ಬೇರೆ ಪಂಚಾಂಗವನ್ನು ಅನುಸರಿಸಿಕೊಂಡು ಬರುತ್ತಿರುವುದರಿಂದ ತಿಥಿಯಲ್ಲಿ ವ್ಯತ್ಯಾಸ ಉಂಟಾದಾಗ, ಎರಡೆರಡು ಕೃಷ್ಣಜನ್ಮಾಷ್ಟಮಿ ಆಚರಿಸಲಾಗುತ್ತಿತ್ತು.
ಈ ಬಾರಿ ಚಂದ್ರೋದಯದ ವೇಳೆ ರೋಹಿಣಿ ನಕ್ಷತ್ರ ಪೂರ್ಣವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಎಲ್ಲಾ ಮಠಗಳು ಒಂದೇ ದಿನ ಜನ್ಮಾಷ್ಠಮಿ ಆಚರಿಸುವ ನಿರ್ಧಾರಕ್ಕೆ ಬಂದಿವೆ.