ಕೃಷ್ಣಾಪುರ ಮಠದ ಪರ್ಯಾಯ ಪೂರ್ವ ಅಕ್ಕಿ ಮುಹೂರ್ತ ಸಂಪನ್ನ
ಉಡುಪಿ, ಫೆಬ್ರವರಿ 18: ಮುಂದಿನ ಜನವರಿಯಲ್ಲಿ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಕೃಷ್ಣಮಠದ ರಥಬೀದಿಯಲ್ಲಿ ವೈಭವದ ಅಕ್ಕಿ ಮುಹೂರ್ತ ನಡೆಯಿತು.
ಅನ್ನಬ್ರಹ್ಮನ ಕ್ಷೇತ್ರ ಎಂದು ಕರೆಯಲ್ಪಡುವ ಕೃಷ್ಣಮಠದಲ್ಲಿ ಅನ್ನಪ್ರಸಾದಕ್ಕೆ ಹೆಚ್ಚಿನ ಮಹತ್ವವಿದ್ದು, ಈ ಹಿನ್ನೆಲೆಯಲ್ಲಿ ಪರ್ಯಾಯ ಪೀಠ ಅಲಂಕರಿಸುವ ಮಠಾಧೀಶರು ನಿತ್ಯ ಸಾವಿರಾರು ಭಕ್ತರಿಗೆ ಅನ್ನಪ್ರಸಾದ ನೀಡುತ್ತಾರೆ. ಹೀಗಾಗಿ ಪರ್ಯಾಯದ ಅವಧಿಯಲ್ಲಿ ಅನ್ನಪ್ರಸಾದ ಸಾಂಗವಾಗಿ ನೆರವೇರಲು, ಅಕ್ಕಿ ಮುಹೂರ್ತ ನಡೆಸುವುದು ವಾಡಿಕೆ.
"ರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ''
ಅದರಂತೆ 2022ರ ಜನವರಿಯಂದು ನಡೆಯಲಿರುವ ಕೃಷ್ಣಾಪುರ ಮಠದ ಕೃಷ್ಣನ ಪೂಜಾಧಿಕಾರಕ್ಕೆ ಮುನ್ನ ಐದು ಮಹೂರ್ತಗಳು ನೆರವೇರಲಿದ್ದು, ಅನ್ನ ಪ್ರಸಾದಕ್ಕೆ ಇಂದಿನಿಂದ ಅಕ್ಕಿ ಸಂಗ್ರಹ ನಡೆಯಲಿದೆ.
ಕೃಷ್ಣಾಪುರ ಮಠಾಧೀಶರ ನೇತೃತ್ವದಲ್ಲಿ ಅಕ್ಕಿ ಮುಹೂರ್ತ ಸಂಪನ್ನಗೊಂಡಿದ್ದು, ಅಕ್ಕಿಯ ಮುಡಿಗಳನ್ನು ವಿಶೇಷ ಮೆರವಣಿಗೆಯಲ್ಲಿ ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು. ಕೃಷ್ಣ ಮಠ- ಅನಂತೇಶ್ವರ- ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ಅಕ್ಕಿಮುಡಿಗೆ ಪೂಜೆ ಸಲ್ಲಿಸಿ, ನಂತರ ಮಠದೊಳಗೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಅಕ್ಕಿ ಮುಹೂರ್ತದಲ್ಲಿ ಅಷ್ಟ ಮಠಗಳ ಮಠಾಧೀಶರು ಪಾಲ್ಗೊಂಡರು. ಕೃಷ್ಣಾಪುರ ಮಠದಲ್ಲಿ ಎಲ್ಲಾ ಸ್ವಾಮೀಜಿಗಳಿಗೆ ಗೌರವ ಅರ್ಪಣೆ ನಡೆಯಿತು. ಈಗಾಗಲೇ ಬಾಳೆ ಮಹೂರ್ತ ಈ ಹಿಂದೆಯೇ ನೆರವೇರಿದ್ದು, ಮಠದ ಎಲ್ಲಾ ಜಮೀನು, ಗದ್ದೆಗಳಲ್ಲಿ ಬಾಳೆ ಬೆಳೆಯುತ್ತಿದೆ. ಮುಂದೆ ಕಟ್ಟಿಗೆ ಮತ್ತು ಚಪ್ಪರ ಮಹೂರ್ತಗಳು ನೆರವೇರಲಿವೆ.