15ರೂ.ಗೆ ಊಟ ನೀಡುತ್ತಿದ್ದ 'ಅನ್ನದಾತೆ' ಅಜ್ಜಮ್ಮ ಇನ್ನಿಲ್ಲ
ಉಡುಪಿ ಎಂಜಿಎಂ ಕಾಲೇಜಿನ ಮುಂಭಾಗ ಹೊಟೇಲ್ ನಡೆಸಿಕೊಂಡು, ಅಪಾರ ಅಭಿಮಾನಿಗಳ ಪಾಲಿನ ಪ್ರೀತಿಯ 'ಅಜ್ಜಮ್ಮ' ಆಗಿದ್ದ ಕಮಲ ಮೆಂಡನ್ (90) ವಯೋ ಸಹಜ ಕಾಯಿಲೆಯಿಂದ ಶನಿವಾರ ನಿಧನರಾಗಿದ್ದಾರೆ.
ಉಡುಪಿ, ಎಪ್ರಿಲ್ 16: ಸಾಮಾನ್ಯರೊಳಗಡೆ ಅಸಾಮಾನ್ಯಳಾಗಿ ಬದುಕಿ, ಸ್ವಾವಲಂಬಿ ಜೀವನ ನಡೆಸುವ ಪಾಠ ಹೇಳಿಕೊಟ್ಟ 'ಅಜ್ಜಮ್ಮ' ಇಹಲೋಕ ತ್ಯಜಿಸಿದ್ದಾರೆ.
ಅಪಾರ ಅಭಿಮಾನಿಗಳ ಪಾಲಿನ ಪ್ರೀತಿಯ 'ಅಜ್ಜಮ್ಮ' ಆಗಿದ್ದ ಕಮಲ ಮೆಂಡನ್ (90) ವಯೋ ಸಹಜ ಕಾಯಿಲೆಯಿಂದ ಶನಿವಾರ ನಿಧನರಾಗಿದ್ದಾರೆ. ತಮ್ಮ ಸಾವಿನ ಕೊನೆಯ ದಿನಗಳವರೆಗೂ ಉಡುಪಿ 'ಮಹಾತ್ಮಾ ಗಾಂಧಿ ಮೆಮೋರಿಯಲ್' (ಎಂಜಿಎಂ) ಕಾಲೇಜಿನ ಮುಂಭಾಗ 'ಅಜ್ಜಮ್ಮ ಕೆಫೆ' ನಡೆಸಿಕೊಂಡು ಬರುತ್ತಿದ್ದ ಅಜ್ಜಮ್ಮ ಹಲವರಿಗೆ ಮಾದರಿಯಷ್ಟೇ ಅಲ್ಲ, ದಾರಿದೀಪವಾಗಿದ್ದಾರೆ.[ಉಡುಪಿಯಲ್ಲಿ ಪೇದೆ ಅಮಾನತು ಆದೇಶ ಹಿಂತೆಗೆತ]
ಅಜ್ಜಮ್ಮ ಓರ್ವ ಪುತ್ರ, ಆರು ಪುತ್ರಿಯರನ್ನ ಅಗಲಿದ್ದಾರೆ. ಜತೆಗೆ ಅಪಾರ ಪ್ರೀತಿ ಪಾತ್ರರನ್ನು ಬಿಟ್ಟು ಇಹಲೋಕದಿಂದ ಹೊರಟು ಹೋಗಿದ್ದಾರೆ. ಇವರ ಗಂಡ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು.
ಅಜ್ಜಮ್ಮ ಕೆಫೆ
ನೀವು ಉಡುಪಿ ಎಂಜಿಎಂ ಕಾಲೇಜು ಬಳಿ ಹೋಗುತ್ತಿದ್ದಂತೆ ಒಂದು ಮನೆ ಸಿಗುತ್ತದೆ. ಅಲ್ಲೇ ಚಿಕ್ಕದಾದ ಕ್ಯಾಂಟೀನ್ ಇದೆ. 70 ವರ್ಷಗಳ ಹಿಂದೆ ಇದೇ ಅಜ್ಜಮ್ಮ ಈ ಕ್ಯಾಂಟಿನ್ ಕಟ್ಟಿಸಿದ್ದು. ಇಂದು ಈ ಕ್ಯಾಂಟೀನ್ ಹೈಟೆಕ್ ಆಗಿದೆ. 2013 ರ ಜೂನ್ ನಲ್ಲಿ ಉದ್ಯಮಿ ವಿಲಾಸ್ ನಾಯಕ್ ಅವರ 'ದಾರಿದೀಪ' ಯೋಜನೆಯಡಿ ಅಜ್ಜಮ್ಮಳ ಚಿಕ್ಕ ಕ್ಯಾಂಟೀನ್ ಗೆ ಹೈಟೆಕ್ ಸ್ಪರ್ಶ ಸಿಕ್ಕಿತು.
15 ರೂಪಾಯಿಗೆ ಊಟ
ಇಲ್ಲಿ ಅಜ್ಜಮ್ಮ ಎಷ್ಟು ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದರು. ಕೇವಲ 15 ರೂಪಾಯಿಗೆ ಹೊಟ್ಟೆ ತುಂಬಾ ಊಟ ಮಾಡಬಹುದಾಗಿತ್ತು. ಬೆಲೆ ಏರಿಕೆಯಾದರೂ ಸಹ ದರ ಏರಿಸುತ್ತಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳ, ಸ್ಥಳೀಯರು ಇವರನ್ನ ಅಮ್ಮ, ಅಜ್ಜಿ, ಕಮಲಮ್ಮ, ಅಜ್ಜಮ್ಮ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.[ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ರಾಜೇಶ್ವರಿ ಜಾಮೀನು ಅರ್ಜಿ ತಿರಸ್ಕೃತ ]
ಸ್ವಾವಲಂಬಿ ಜೀವನದ ಪಾಠ
ವಯಸ್ಸು 90 ದಾಟಿದರೂ ಕಮಲಮ್ಮ ಎಂದೂ ಸುಮ್ಮನೆ ಕುಳಿತವರಲ್ಲ. ಸಾಯುವವರೆಗೂ ಕ್ಯಾಂಟೀನ್ ನಡೆಸುತ್ತಿದ್ದ ಅಜ್ಜಮ್ಮ ಸ್ವಾವಲಂಬಿ ಜೀವನ ನಡೆಸಿಯೇ ಎಲ್ಲರಿಗೂ ಮಾದರಿಯಾದರು.
ಹೊಟ್ಟೆ ತುಂಬಾ ಊಟ
ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಯಾವ ಸಮಯವಾಗಲೀ ಹಸಿದು ಬಂದವರನ್ನ ಈ ಅಜ್ಜಮ್ಮ ಕೂರಿಸಿ ಆರೈಕೆ ಮಾಡಿ ಹೊಟ್ಟೆ ತುಂಬಾ ಊಟ ಬಡಿಸುತ್ತಿದ್ದರು. ಮನೆಯಲ್ಲಿ ತಾಯಿ ಯಾವ ರೀತಿ ಊಟೋಪಚಾರ ಮಾಡುತ್ತಾರೋ ಅದೇ ರೀತಿ ಈ ಅಜ್ಜಮ್ಮ ಬಂದವರನ್ನ ಆರೈಕೆ ಮಾಡುತ್ತಿದ್ದರು.
ಅಜ್ಜಮ್ಮನಿಗೆ ಹಬ್ಬ ಎಂದರೆ ಅಚ್ಚು ಮೆಚ್ಚು
ಇನ್ನು ಆಟಿ ಅಮಾವಾಸ್ಯೆ ಬಂದರೆ ಸಾಕು, ಪಾಲೆ ಮರದ ಕಷಾಯ ತಯಾರಿಸಿ ಉಚಿತವಾಗಿ ಎಲ್ಲರಿಗೂ ಹಂಚುತ್ತಿದ್ದರು. ಲಕ್ಷ, ಲಕ್ಷ ಹಣ ಹೂಡಿ ಹೊಟೇಲ್ ಉದ್ಯಮ ಆರಂಭಿಸಿ ಹಣ ಮಾಡುವವರ ಮಧ್ಯೆ ಈ ಅಜ್ಜಮ್ಮ ಯಾವುದೇ ಸ್ವಾರ್ಥವಿಲ್ಲದೇ ಮಿತ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದರು. ಹೀಗಿದ್ದ ಉಡುಪಿಯ ಈ ಹಿರಿಯ ಮಹಿಳೆ ಇನ್ನೂ ನೆನಪು ಮಾತ್ರ.
ಮಕ್ಕಳ ಸಂತಾಪ
ಅಜ್ಜಮ್ಮರನ್ನು ಗುರುತಿಸಿ ಅನೇಕ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ಅವರ ಸಾವಿಗೆ ಅಜ್ಜಮ್ಮ ಕೆಫೆಯಲ್ಲಿ ಊಟ ಮಾಡಿ ತಿಂಡಿ ತಿಂದ ಹಲವರು ತಮ್ಮ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
"ತನ್ನ ಜೀವನದ ಕೊನೆಯ ಉಸಿರಿನವರೆಗೂ ಕಾಲೇಜಿನ ಮಕ್ಕಳ ನ್ನು ತನ್ನ ಸ್ವಂತ ಮಕ್ಕಳಂತೆ ಪ್ರೀತಿಸುತ್ತಿ ಅಜ್ಜಮ್ಮ ಇಂದು ತೀರಿಕೊಂಡಿದ್ದಾರೆ . ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎನ್ನುವುದು ಎಲ್ಲರ ಆಶಯ," ಅಂತ ಸೌರಭ್ ಆಚಾರ್ಯ ಎನ್ನುವವರು ಬರೆದುಕೊಂಡಿದ್ದಾರೆ.
ಸಾವಿರಾರು ಮನಸ್ಸು ಬೆಸೆದವರು
"ಉಡುಪಿ ತುಂಬಾನೇ ಬೆಳೆಯುತ್ತಿದೆ. ಕಾಲೇಜಿನ ಹುಡುಗರಂತೂ ಮತ್ತಷ್ಟು ವೇಗವಾಗಿ ಬೆಳೆಯುತ್ತಿದ್ದಾರೆ. ಸಂಬಂಧದ ಕೊಂಡಿಗಳು ಕಳಚುವ ಹೊತ್ತಲ್ಲೂ ಹೊಟೇಲಿನ ಮೂಲಕ ಸಾವಿರಾರು ಮನಸ್ಸುಗಳನ್ನು ಬೆಸೆದವರು ಅಜ್ಜಮ್ಮ. ಮಿಸ್ ಯೂ.." ಅಂತ ಬರಹಗಾರ, ಪ್ರಾಧ್ಯಾಪಕ ಮಂಜುನಾಥ್ ಕಾಮತ್ ತಮ್ಮ ಫೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.