ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಅದಮಾರು ಮಠದ ಹಿರಿಯ ಶ್ರೀಗಳ ಸಂತಾಪ
ಉಡುಪಿ, ಡಿಸೆಂಬರ್ 13: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ನಮ್ಮ ಗುರುಗಳಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಸಹಪಾಠಿಗಳಾಗಿದ್ದರು. ಅಂತೆಯೇ ಬನ್ನಂಜೆಯವರ ತಂದೆ ಪಡಮನ್ನೂರು ನಾರಾಯಣ ಆಚಾರ್ಯರು ನಮ್ಮ ಗುರುಗಳ ಗುರುಗಳು ಎಂದು ಅದಮಾರು ಮಠದ ಹಿರಿಯ ಶ್ರೀಪಾದ ವಿಶ್ವಪ್ರಿಯತೀರ್ಥ ಹೇಳಿದ್ದಾರೆ.
ಬನ್ನಂಜೆಯವರು ಅನೇಕ ವರ್ಷಗಳ ಪರ್ಯಂತ ಸಕುಟುಂಬಿಕರಾಗಿ, ಶ್ರೀಮಠದ ಆವರಣದಲ್ಲಿದ್ದುಕೊಂಡು ಗುರುಗಳಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರೊಂದಿಗೆ ಚಿಂತನ-ಮಂಥನ ನಡೆಸುತ್ತಿದ್ದರು. ಬನ್ನಂಜೆಯವರಿಗೆ ವಿದ್ಯಾವಾಚಸ್ಪತಿ ಎಂಬ ಬಿರುದನ್ನು ವಿಬುಧೇಶತೀರ್ಥ ಶ್ರೀಪಾದರು ಕೊಟ್ಟಿದ್ದರು ಎಂದರು.
ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ವಿಧಿವಶ
ಪದ್ಮಶ್ರೀ ಮುಂತಾದ ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಬನ್ನಂಜೆಯವರು, ಸಂಸ್ಕೃತ ಲೋಕದಲ್ಲಿ ಮೇರು ಸಾಧನೆಗೈದಿರುವರು. ಇವರ ಅಗಲಿಕೆ ನಮಗೆ ತುಂಬಾ ನೋವು ಮತ್ತು ನಷ್ಟವನ್ನುಂಟು ಮಾಡಿದೆ. ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಅದಮಾರು ಮಠದ ವಿಶ್ವಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಧ್ವಪೀಠದಲ್ಲಿದ್ದು, 25 ಜನ ಪಂಡಿತರೊಂದಿಗೆ ವಿಷ್ಣುಸಹಸ್ರನಾಮವನ್ನು ಪಠಿಸಿ ಅಗಲಿದ ಬನ್ನಂಜೆ ಗೋವಿಂದಾಚಾರ್ಯರ ದಿವ್ಯಚೇತನಕ್ಕೆ ಚಿರಶಾಂತಿಯನ್ನು ನೀಡಲೆಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಹಾಗೆಯೇ ಮಠದ ದಿವಾನರು, ವಿದ್ವಾಂಸರು ಮತ್ತು ಆಡಳಿತ ವರ್ಗದವರನ್ನು ಶ್ರೀಪಾದದ್ವಯರು ಬನ್ನಂಜೆಯವರ ನಿವಾಸಕ್ಕೆ ಕಳುಹಿಸಿರುವರು. ಅವರು ಅಲ್ಲಿ ವಿಷ್ಣು ಸಹಸ್ರನಾಮ ಪಠಿಸಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ತೀರ್ಥ ಪ್ರಸಾದವನ್ನು ಅಗಲಿದ ಚೇತನಕ್ಕೆ ಸಮರ್ಪಿಸಿದರು.