ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ನಟಿ ಜಯಮಾಲ ನೇಮಕ
ಉಡುಪಿ, ಆಗಸ್ಟ್ 1: ಮೈತ್ರಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬರೋಬ್ಬರಿ ಎರಡು ತಿಂಗಳ ಬಳಿಕ ಆಯಾಯ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೂ ನಡೆದಿದೆ.
ಜಿಲ್ಲೆಗೆ ನಟಿ ಜಯಮಾಲ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿ ಸರಕಾರ ಆದೇಶಿಸಿದೆ. ಮಹಿಳಾ, ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿರುವ ಜಯಮಾಲ ಮೇಲ್ಮನೆ ಸಭಾನಾಯಕಿಯಾಗಿದ್ದಾರೆ.
ಕರ್ನಾಟಕದ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ
ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ, ಕುಂದಾಪುರ ಹಾಗೂ ಬೈಂದೂರು ಕ್ಷೇತ್ರ ಒಟ್ಟು ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಯು.ಟಿ ಖಾದರ್ ಹೊರತು ಪಡಿಸಿ ಜೆಡಿಎಸ್ ಅಥವಾ ಕಾಂಗ್ರೆಸ್ ಶಾಸಕರು ಇರಲಿಲ್ಲ.
ಇದರಿಂದಾಗಿ ಉಡುಪಿಗೆ ಯಾರನ್ನು ಉಸ್ತುವಾರಿ ಮಾಡುತ್ತಾರೆಂಬ ಕುತೂಹಲವಿತ್ತು. ಇದೀಗ ಎಲ್ಲರ ಕುತೂಹಲಕ್ಕೆ ನಾಂದಿ ಹಾಡಿದೆ. ಇನ್ನು ಮುಂದೆ ಉಡುಪಿ ಜಿಲ್ಲೆಯ ಉಸ್ತುವಾರಿ ಜಯಮಾಲಾ ಅವರು ನೋಡಿಕೊಳ್ಳಲಿದ್ದು, ಕಾಂಗ್ರೆಸ್ ಪಾಳಯಕ್ಕೆ ಯಾವುದೇ ಸ್ಥಾನವಿಲ್ಲದ ಕಾರಣ ತಮ್ಮ ಹಿಡಿತಕ್ಕೆ ಇದು ಪೂರಕವಾಗಿದೆ.