ವಿಶೇಷ ವರದಿ: ಎಂಡೋ ಸಲ್ಫಾನ್ ಸಂತ್ರಸ್ತರ ಬಾಳಲ್ಲಿ ಹೊಸ ಭರವಸೆಯ ಬೆಳಕು
ಉಡುಪಿ, ಜೂನ್ 19: ಕರಾವಳಿಯ ಜನ ಎಂಡೋ ಸಲ್ಫಾನ್ ಎಂಬ ಶಬ್ಧ ಕೇಳಿದರೆ ಇವತ್ತಿಗೂ ಬೆಚ್ಚಿ ಬೀಳುತ್ತಾರೆ. ಈ ರಾಸಾಯನಿಕ ಮಾಡಿರುವ ಕರಾಳತೆಯೇ ಅಂಥದ್ದು. ಎಂಡೋ ಸಲ್ಫಾನ್, ಇವತ್ತಿನ ಈ ಕ್ಷಣದವರೆಗೂ ತನ್ನ ಕುರುಹನ್ನು ಉಳಿಸಿದೆಯೆಂದರೆ ಅದರ ಕರಾಳತೆ ಎಷ್ಟಿರಬಹುದು ಊಹಿಸಿ.
ನಿಮಗೇ ತಿಳಿದಿರುವಂತೆ ನಂತರದ ವರ್ಷಗಳಲ್ಲಿ ಎಂಡೋ ಸಂತ್ರಸ್ಥರಿಗೆ ಪರಿಹಾರ ಒದಗಿಸುವ, ಅವರನ್ನು ಮತ್ತೆ ಆರೋಗ್ಯವಂತರನ್ನಾಗಿ ಮಾಡುವ ಸರಕಾರಿ ಕೆಲಸಗಳು ನಡೆದವು. ಯಥಾಪ್ರಕಾರ ಅಲ್ಲೂ ತಾರತಮ್ಯ, ಅಲ್ಲೂ ನಿರ್ಲಕ್ಷತನ. ಪರಿಣಾಮವಾಗಿ ಸಹಸ್ರ ಸಹಸ್ರ ಜನ ದಶಕಗಳ ಬಳಿಕವೂ ನರಕಯಾತನೆ ಅನುಭವಿಸುತ್ತಲೇ ಇದ್ದಾರೆ. ಸದ್ಯ ನ್ಯಾಯಾಲಯವೇ ಸಂತ್ರಸ್ತರ ನೆರವಿಗೆ ಮುಂದಾಗಿದ್ದು, ಸಣ್ಣ ಭರವಸೆ ಮೂಡಿಸಿದೆ.
ಉತ್ತರ ಕನ್ನಡ: ಚಿಕಿತ್ಸೆ ಸಿಗದೇ ಎಂಡೋಸಲ್ಫಾನ್ ಪೀಡಿತರ ನರಳಾಟ
ಅವೈಜ್ಞಾನಿಕ ನಿರ್ಧಾರ, ಮಾನದಂಡ
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಎಂಡೋ ಸಂತ್ರಸ್ತರಿಗೆ ಪರಿಹಾರ, ಚಿಕಿತ್ಸೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವಲ್ಲಿ ಸಾಕಷ್ಟು ಅಸಮಾನತೆ ನಡೆದಿದೆ. ಈ ನಿಟ್ಟಿಲ್ಲಿ ಏಕರೂಪತೆ ಸಾಧಿಸಲು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ನಿರ್ಧರಿಸಿದೆ.
ಅದು ಸರಿಸುಮಾರು 1980ರ ಪ್ರಾರಂಭ. ಕರಾವಳಿಯ ಮೂರು ಜಿಲ್ಲೆಯಲ್ಲಿ ಗೇರು ಅಭಿವೃದ್ಧಿ ನಿಗಮದವರು ಟನ್ಗಟ್ಟಲೆ ಎಂಡೋಸಲ್ಫಾನ್ ಸುರಿದಿದ್ದರು. ಇದರ ದುಷ್ಪರಿಣಾಮದಂದಾಗಿ ಕರಾವಳಿಯ 450ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ 8600ಕ್ಕಿಂತಲೂ ಅಧಿಕ ಮಂದಿ ಸಂತ್ರಸ್ಥರಾದರು.
ಖಿನ್ನತೆ ಹಾಗೂ ಹಾರ್ಮೋನ್ ಸಂಬಂಧಿತ ರೋಗ
ಈ ಕೀಟನಾಶಕದಿಂದಾಗಿ ಗರ್ಭದಲ್ಲಿರುವ ಶಿಶುಗಳ ಮೇಲೆ ದುಷ್ಪರಿಣಾಮವಾಗಿ ಸಹಸ್ರಾರು ಮಕ್ಕಳು ಹುಟ್ಟಿನಿಂದಲೇ ವಿಕಲಚೇತನರಾಗಿದ್ದಾರೆ. ಹಿರಿಯರು ಕ್ಯಾನ್ಸರ್, ಅಸ್ತಮಾ, ಎಪಿಲೆಪ್ಸಿ, ಖಿನ್ನತೆ ಹಾಗೂ ಹಾರ್ಮೋನ್ ಸಂಬಂಧಿತ ರೋಗಗಳಿಂದ ನರಳುತ್ತಿದ್ದಾರೆ. ಇದೀಗ ಈ ಮಕ್ಕಳು ಸುಮಾರು 30ರಿಂದ 40 ವರ್ಷದೊಳಗಿನವರಾಗಿದ್ದು, ಹೆಚ್ಚಿನವರು ಹೆತ್ತವರನ್ನೂ ಕಳೆದುಕೊಂಡಿದ್ದಾರೆ. ಪಾಲನೆಗೆ ಪೋಷಣೆಗೆ ಅವರ ಗುಡಿಸಲುಗಳಲ್ಲಿ ಯಾವುದೇ ವ್ಯವಸ್ಥೆಯೂ ಇಲ್ಲ. ಪಾಲನಾ ಕೇಂದ್ರಗಳನ್ನು ಸ್ಥಾಪಿಸಲು 2013ರಲ್ಲೇ ಸರಕಾರಿ ಆದೇಶ ಹೊರಟಿದ್ದರೂ ಇಂದಿಗೂ ಈ ಆದೇಶದ ಅನುಷ್ಠಾನವಾಗಿಲ್ಲ.
ಮಾಶಾಸನವೂ ಇಲ್ಲ
2014ರಲ್ಲಿ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಶೇ.25 ರಿಂದ ಶೇ.60ರವರೆಗಿನ ಅಂಗವಿಕಲತೆಯನ್ನು ಹೊಂದಿದ್ದವರಿಗೆ ಮಾಸಿಕ 1500 ರೂಪಾಯಿ ಹಾಗೂ ಶೇಕಡಾ 60 ಕ್ಕಿಂತಲೂ ಹೆಚ್ಚಿನ ಅಂಗವಿಕಲತೆ ಉಳ್ಳವರಿಗೆ ಮಾಸಿಕ 3000 ರೂಪಾಯಿಗಳ ಸಹಾಯಧನ ನೀಡಲು ಸೂಚಿಸಲಾಗಿತ್ತು. ಆದರೆ ಸುಮಾರು 2000ಕ್ಕಿಂತಲೂ ಹೆಚ್ಚಿನ ಸಂತ್ರಸ್ತರಿಗೆ ಕ್ಯಾನ್ಸರ್, ಫಿಟ್ಸ್, ಸ್ಕಿಜೋಫ್ರೇನಿಯಾ, ಖಿನ್ನತೆ ಮುಂತಾದ ರೋಗಗಳಿದ್ದರೂ ಅವರ ಅಂಗವಿಕಲತೆ ಶೇ.25ಕ್ಕಿಂತಲೂ ಕಡಿಮೆ ಇರುವುದರಿಂದ ಅವರೆಲ್ಲರೂ ಮಾಸಾಶನದಿಂದ ವಂಚಿತರಾಗಿದ್ದಾರೆ. ಅವರೆಲ್ಲ ಉದ್ಯೋಗ ಮಾಡಲು ಅಶಕ್ತರಾಗಿರುವುದರಿಂದ ಆದಾಯವೂ ಇಲ್ಲದಂತಾಗಿದೆ.
ಸಂತ್ರಸ್ಥರ ಬಾಳಲ್ಲಿ ಹೊಸ ಬೆಳಕು
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಕರಾವಳಿಯ ಮೂರು ಜಿಲ್ಲೆಗಳ ಕಾನೂನು ಪ್ರಾಧಿಕಾರದ ಕಾರ್ಯದರ್ಶಿಗಳಿಂದ ಹಾಗೂ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದಿಂದ ಎಂಡೋ ಸಂತ್ರಸ್ತರ ಸಮಸ್ಯೆಗಳ ಕುರಿತು ವಿವರವಾದ ಮಾಹಿತಿಗಳನ್ನು ಪಡೆದಿದ್ದಾರೆ. ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದಾರೆ.
ಈ ವೇಳೆ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿವೆ. ಎಂಡೋ ಸಲ್ಫಾನ್ ಕೀಟನಾಶಕದಿಂದ ರೋಗಗ್ರಸ್ತರಾಗಿ ನರಳುತ್ತಿರುವ ಹಲವಾರು ಮಕ್ಕಳು ಸಂತ್ರಸ್ತರ ಪಟ್ಟಿಗೆ ಸೇರಿಸಿಲ್ಲ. ಒಂದು ವೇಳೆ ಸೇರಿಸಿದ್ದರೂ ಸೂಕ್ತ ಪರಿಹಾರದಿಂದ ವಂಚಿತರಾಗಿದ್ದಾರೆ. ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಅವರು ಎಂಡೋ ಸಂತ್ರಸ್ತರಿಗಾಗಿ ಸಮಗ್ರ ಕ್ರಿಯಾ ಯೋಜನೆಯೊಂದನ್ನು ರೂಪಿಸುವಂತೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ಜವಾಬ್ದಾರಿ ವಹಿಸಿದ್ದಾರೆ. ಪ್ರತಿಷ್ಠಾನದ ಮುಖ್ಯಸ್ಥ ಡಾ. ರವೀಂದ್ರನಾಥ್ ಶ್ಯಾನುಭಾಗ್ ಕಟ್ಟಕಡೆಯ ಎಂಡೋ ಸಂತ್ರಸ್ಥರಿಗೂ ನ್ಯಾಯ ದೊರಕಿಸಿಕೊಡಲು ಪಣ ತೊಟ್ಟಿದ್ದಾರೆ.
Recommended Video