ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಕೇವಲ ಬೆಂಗಳೂರಿಗೆ ಸೀಮಿತವಲ್ಲ: ಡಿಜಿಪಿ
ಉಡುಪಿ, ಸೆಪ್ಟೆಂಬರ್ 8: ಡ್ರಗ್ಸ್ ಬಗ್ಗೆ ನಮ್ಮದು ಝೀರೋ ಟಾಲರೆನ್ಸ್. ಡ್ರಗ್ಸ್ ವಿರುದ್ಧದ ಕಾರ್ಯಚರಣೆ ಕೇವಲ ಬೆಂಗಳೂರಿಗೆ ಸೀಮಿತವಲ್ಲ, ರಾಜ್ಯಾದ್ಯಂತ ನಿಯಂತ್ರಣ ಮಾಡಬೇಕಿದೆ, ಸರಕಾರ ಕೂಡ ಈ ಕುರಿತು ಸ್ಪಷ್ಟ ಸೂಚನೆ ನೀಡಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
Recommended Video
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಭೆಯ ನಂತರ ಹೇಳಿಕೆ ನೀಡಿರುವ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರಿನಲ್ಲಿ ಕಳೆದ ಹತ್ತು ದಿನಗಳಿಂದ ಅನೇಕ ಪ್ರಕರಣ ಬೆಳಕಿಗೆ ಬಂದಿವೆ. ನಮ್ಮ ಕಾರ್ಯಚರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ಬೆಳಗಾವಿ, ಹುಬ್ಬಳ್ಳಿ, ಚಿತ್ರದುರ್ಗ, ಕರಾವಳಿ ಭಾಗದಲ್ಲೂ ಕಾರ್ಯಚರಣೆ ನಡೆಸಿದ್ದೇವೆ ಎಂದರು.
ತೆಲುಗು ಚಿತ್ರ ನಿರ್ಮಾಪಕ ನೂತನ್ ನಾಯ್ಡು ಉಡುಪಿಯಲ್ಲಿ ಬಂಧನ
ಸಾಫ್ಟ್ ಡ್ರಗ್ಸ್, ನ್ಯಾಚುರಲ್ ಡ್ರಗ್ಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಎಲ್ಲವನ್ನೂ ನಿಯಂತ್ರಣ ಮಾಡುತ್ತೇವೆ. ಚಾಕಲೇಟ್ ಡ್ರಿಂಕ್ಸ್ ಗಳಲ್ಲೂ ಮಿಕ್ಸ್ ಮಾಡಿ ಕೊಡುತ್ತಾರೆ. ಎಲ್ಲಾ ಬಗೆಯ ಡ್ರಗ್ಸ್ ಬಗೆಗೂ ಕ್ರಮ ತೆಗೆದುಕೊಳ್ಳಲು ಐಜಿ-ಎಸ್ಪಿ ಗಳಿಗೆ ಸೂಚನೆ ನೀಡಿದ್ದೇನೆ. ಫಲಿತಾಂಶ ತೋರಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ತಿಳಿಸಿದರು.
ಸಮುದ್ರಮಾರ್ಗ, ಆಕಾಶಮಾರ್ಗ, ಭೂ ಮಾರ್ಗ ಎಲ್ಲಿಂದ ಬಂದರೂ ಕ್ರಮ ಜರುಗಿಸುತ್ತೇವೆ. ಸದ್ಯ ಕಾಲೇಜುಗಳು ಬಂದ್ ಇವೆ ಎಂದ ಮಾತ್ರಕ್ಕೆ ಡ್ರಗ್ಸ್ ದಂಧೆ ನಡೆಯುತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸಿಎಂ ನಿನ್ನೆ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಾರ್ಯಚರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು, ಬೇರೆ ಕಡೆಯೂ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಸುದ್ದಿಯಾಗಲ್ಲ ಅಷ್ಟೆ ಎಂದರು.
ಮಾದಕ ದ್ರವ್ಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಕ್ತ ಅವಕಾಶ ನೀಡಿದೆ. ಅಷ್ಟು ಮಾತ್ರವಲ್ಲ, ಕಠಿಣ ಸೂಚನೆಯನ್ನೂ ನೀಡಿದೆ. ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡುವ ಸೂಚನೆ ನೀಡಿದ್ದಾರೆ. ಬೆಂಗಳೂರು-ಮಂಗಳೂರು ನಗರಗಳು ದೊಡ್ಡ ಡ್ರಗ್ಸ್ ಹಬ್ ಆಗಿವೆ ಎಂದು ಪ್ರವೀಣ್ ಸೂದ್ ಹೇಳಿದರು.