ಉಡುಪಿಯಲ್ಲಿ ಅಬಕಾರಿ ಡಿವೈಎಸ್ಪಿ ಮನೆ ಸೇರಿ 5 ಕಡೆ ಎಸಿಬಿ ದಾಳಿ
ಉಡುಪಿ, ಮಾರ್ಚ್ 9: ಅಕ್ರಮ ಆಸ್ತಿ ಗಳಿಕೆ ದೂರಿನ ಮೇಲೆ ಮಂಗಳೂರಿನ ಡಿವೈಎಸ್ಪಿ ವಿನೋದ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಎಸಿಬಿ ಎಸ್ಪಿ ಶೃತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್, ರಾಜ್ಯದ ಎಂಟು ಕಡೆ ದಾಳಿ
ಉಡುಪಿಯಲ್ಲಿರುವ ಅಬಕಾರಿ ಉಪ ಅಧೀಕ್ಷಕ ವಿನೋದ್ ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ವಿನೋದ್ ಅವರ ಎಲ್ಲಾ ವ್ಯವಹಾರಗಳನ್ನು ಗಮನಿಸಿದ ತಂಡ, ಅಬಕಾರಿ ಭವನದಲ್ಲಿರುವ ವಿನೋದ್ ಅವರ ಕಚೇರಿ ಸೇರಿದಂತೆ ಡಿವೈಎಸ್ಪಿ ಅವರ ಕಾರು ಚಾಲಕ ದಿನೇಶ್ ಅವರ ಕ್ವಾಟ್ರಸ್ ಮೇಲೂ ದಾಳಿ ನಡೆಸಿದೆ.
ಮನೆ ಮತ್ತು ಕಚೇರಿಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಕಡತ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಸಶಕ್ತ ಮಾಹಿತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎಲ್ಲಾ ಫೈಲ್ ಗಳನ್ನು ತೆಗೆದುಕೊಂಡ ತಂಡ ಅವರ ಸಂಬಂಧಿಕರನ್ನೂ ಪರಿಶೀಲನೆಗೆ ಒಳಪಡಿಸಿದೆ.
ಡಿವೈಎಸ್ಪಿ ವಿನೋದ್ ಉಡುಪಿಯ ನಾಯರ್ ಕೆರೆ ರಸ್ತೆಯಲ್ಲಿರುವ ಕಚೇರಿ ಹಾಗೂ ನಿವಾಸ, ಮಂಗಳೂರು ನಿವಾಸ, ಬೈಂದೂರಿನಲ್ಲಿರುವ ಮಾವನ ಮನೆ, ಕಾರ್ಕಳದ ಸಂಬಂಧಿಕರ ಮನೆ ಸೇರಿ ಒಟ್ಟು ಏಕಕಾಲದಲ್ಲಿ 5ಕಡೆ ದಾಳಿ ನಡೆಸಲಾಗಿದೆ.