ಎಸಿಬಿ ರೇಡ್:ಆರ್ ಟಿಓ ಅಧಿಕಾರಿ ಮನೆಯಲ್ಲಿ 70 ಲಕ್ಷ ರೂ.ನಗದು ಪತ್ತೆ
ಉಡುಪಿ, ಮಾರ್ಚ್ 19: ಉಡುಪಿ ಆರ್ ಟಿಓ ಎಂ.ವೆರ್ಣೇಕರ್ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ 71 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಮಂಗಳೂರಿನ ಕಾಪಿಕಾಡಿನ ಎರಡಂತಸ್ತಿನ ಮನೆಯಲ್ಲಿ ಪರಿಶೀಲನೆ ಸಂದರ್ಭದಲ್ಲಿ ನಗದು ಪತ್ತೆಯಾಗಿದೆ.
ದಾಳಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ದಾಖಲೆ ಪತ್ರಗಳನ್ನು ಎಸಿಬಿ ಅಧಿಕಾರಿ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ವೆರ್ಣೇಕರ್ ಮಂಗಳೂರಿನಲ್ಲಿ ಆರ್ ಟಿಓ ಅಧಿಕಾರಿ ಯಾಗಿದ್ದರು.ದಾಳಿ ಸಂದರ್ಭದಲ್ಲಿ ಮಂಗಳೂರಿನ ಎಸಿಬಿ ಅಧಿಕಾರಿಗಳು ಎರಡು ಲಾಕರ್ ವಶಕ್ಕೆ ಪಡೆದ್ದಾರೆ ಎನ್ನಲಾಗಿದೆ.
ಚಾಮರಾಜನಗರ ಆರ್ ಟಿಓ ಕಚೇರಿ ಮೇಲೆ ಎಸಿಬಿ ದಾಳಿ:1.12 ಲಕ್ಷ ರೂ.ವಶ
ಎರಡು ದಿನಗಳ ಹಿಂದೆ ಉಡುಪಿ ಆರ್ ಟಿಓ ಕಚೇರಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೂರಿನಡಿ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ವೆರ್ಣೇಕರ್ ಅವರನ್ನು ಬಂಧಿಸಿದ್ದರು.
ಬೆಂಗಳೂರಿನ ಏರ್ ಶೋ ಸಂದರ್ಭ ನಡೆದ ಅಗ್ನಿ ಅವಘಡದಲ್ಲಿ ಆಹುತಿಯಾದ ಕಾರಿನ ಟ್ಯಾಕ್ಸ್ ರೀಫಂಡ್ ಹಣ ನೀಡುವಂತೆ ವೆರ್ಣೇಕರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಟ್ಯಾಕ್ಸ್ ರೀಫಂಡ್ ಮಾಡಲು ಅವರು 6,500 ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಮುಂಗಡವಾಗಿ ಕಾರಿನ ಮಾಲೀಕನಿಂದ 4 ಸಾವಿರ ರೂಪಾಯಿ ಹಣ ಪಡೆಯಲು ಮುಂದಾಗಿದ್ದ ವೇಳೆ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದರು. ಬಳಿಕ ತನಿಖೆ ಮುಂದುವರೆಸಿದ ಎಸಿಬಿ ಅಧಿಕಾರಿಗಳಿಗೆ ಆತನ ಇನ್ನಷ್ಟು ಭ್ರಷ್ಟಚಾರ ಪತ್ತೆಯಾಗಿತ್ತು. ಮಂಗಳೂರಿನ ವೆರ್ಣೇಕರ್ ನಿವಾಸಕ್ಕೂ ಹಾಗೂ ಫ್ಲ್ಯಾಟ್ ಗೂ ದಾಳಿ ನಡೆಸಲಾಗಿತ್ತು.