2 ದಶಕಗಳಿಂದ ಮುಚ್ಚಿರುವ ಸಕ್ಕರೆ ಕಾರ್ಖಾನೆ: ಆರೂಢ ಪ್ರಶ್ನೆಯಲ್ಲಿ ಕಾರಣ ಬಹಿರಂಗ
ಉಡುಪಿ, ಮಾರ್ಚ್ 20: ಸುಮಾರು ಎರಡು ದಶಕಗಳಿಂದ ಮುಚ್ಚಿರುವ ಸಕ್ಕರೆ ಕಾರ್ಖಾನೆ ಪುನಃ ಆರಂಭವಾಗದೇ ಇರಲು ಏನು ಕಾರಣ ಎನ್ನುವುದು ಆರೂಢ ಪ್ರಶ್ನೆಯಿಂದ ಹೊರಬಿದ್ದಿದೆ.
ಜಿಲ್ಲೆಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ 2003ರಲ್ಲಿ ಬಂದ್ ಆಗಿತ್ತು. ಅಲ್ಲಿಂದ ಎಷ್ಟೇ ಪ್ರಯತ್ನ ಪಟ್ಟರೂ ಕಾರ್ಖಾನೆಯನ್ನು ಮತ್ತೆ ತೆರೆಯಲು ಸಾಧ್ಯವಾಗಿರಲಿಲ್ಲ. ಶುಕ್ರವಾರ (ಮಾ 19) ಆಡಳಿತ ಮಂಡಳಿಯ ಸದಸ್ಯರು ಆರೂಢ ಪ್ರಶ್ನೆಯ ಮೊರೆ ಹೋಗಿದ್ದರು.
ಉಡುಪಿಯಲ್ಲಿ ಧರ್ಮ ಸಾಮರಸ್ಯ: ಮುಸ್ಲಿಂ ಕುಟುಂಬದಿಂದ ಅಮೃತೇಶ್ವರಿ ದೇವಸ್ಥಾನದಲ್ಲಿ ತುಲಾಭಾರ ಸೇವೆ
ಜಾಗದಲ್ಲಿನ ದೋಷ, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರದ ಸಂದರ್ಭದಲ್ಲಿ ಆರೂಢ, ಅಷ್ಟಮಂಗಲ ಪ್ರಶ್ನೆ ಕೇಳುವ ಪದ್ದತಿ ಕರಾವಳಿ ಭಾಗದಲ್ಲಿದೆ. ಅದರಂತೇ, ಸಕ್ಕರೆ ಕಾರ್ಖಾನೆಯಲ್ಲಿ ಕೇಳಲಾದ ಪ್ರಶ್ನೆಯ ಸಮಯದಲ್ಲಿ ಪುದುವಾಳರು (ಪ್ರಶ್ನಾ ಚಿಂತನೆ ನಡೆಸಿ ಕೊಡುವವರು) ಕೆಲವೊಂದು ಸೂಚನೆಯನ್ನು ನೀಡಿದ್ದಾರೆ.
ದೈವ ಸಾನಿಧ್ಯಕ್ಕೆ ಚ್ಯುತಿ ಬಂದಿದ್ದನ್ನು ಕೇರಳದಿಂದ ಆಗಮಿಸಿದ್ದ ಜ್ಯೋತಿಷಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ. ಕಾರ್ಖಾನೆಯ ಒಳಗೆ ಗಣೇಶನ ಗುಡಿ, ಪಂಜುರ್ಲಿ ದೈವ ಸಾನಿಧ್ಯದ ಜೀರ್ಣೋದ್ದಾರೆ, ನಾಗನಿಗೆ ನಿರಂತರ ಪೂಜೆ ಸಲ್ಲಿಸುವಂತೆ ಜ್ಯೋತಿಷಿಗಳು ಸೂಚಿಸಿದ್ದಾರೆ.
"ಗಣೇಶನ ಗುಡಿ ನಿರ್ಮಾಣ, ನಾಗನಿಗೆ ನಿರಂತರ ಪೂಜೆ, ದೈವ ಸಾನಿಧ್ಯದ ಜೀರ್ಣೋದ್ದಾರ, ಹೋಮ ಹವನ ಸೇರಿದಂತೆ ಕೆಲವು ಪೂಜೆಗಳನ್ನು ನಡೆಸುವಂತೆ ಜ್ಯೋತಿಷಿಗಳು ಹೇಳಿದ್ದಾರೆ"ಎಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಅಧ್ಯಕ್ಷರು ಹೇಳಿದ್ದಾರೆ.
Recommended Video
18 ವರ್ಷದಿಂದ ಬಂದ್ ಆಗಿರುವ ಈ ಕಾರ್ಖಾನೆಗೆ ಹೊಸ ಆಡಳಿತ ಮಂಡಳಿ ನೇಮಕವಾಗಿತ್ತು. ಆಡಳಿತ ಮಂಡಳಿ ಆಲೆಮನೆ ಘಟಕ ಆರಂಭಿಸಿ ದೇಸಿ ಬೆಲ್ಲ ತಯಾರಿ ಮಾಡಲು ಆರಂಭಿಸಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ಇದಾಗಿದೆ. ಕಾರ್ಖಾನೆ ಮತ್ತೆ ಆರಂಭವಾಗಲಿ ಎನ್ನುವುದು ಸಾವಿರಾರು ಕೃಷಿಕರ ಆಶಯವಾಗಿದೆ.