ಕಂಡ್ಲೂರಿನಲ್ಲಿ ವಿಶಿಷ್ಟ ಮಾರಿ ಜಾತ್ರೆ ಆಚರಣೆ: ಹೇಗೆ ನೋಡಿ?
ಉಡುಪಿ, ಆಗಸ್ಟ್.19: ಅನಿಷ್ಟಗಳನ್ನು ಊರು ಬಿಟ್ಟು ಓಡಿಸುವ ಉದ್ದೇಶದಿಂದ ಕರಾವಳಿಯ ಹಿಂದೂಗಳು ಹಬ್ಬವೊಂದನ್ನು ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಹಬ್ಬವನ್ನು ಕೇವಲ ಹಿಂದೂಗಳಷ್ಟೇ ಅಲ್ಲ, ಮುಸ್ಲಿಮರು ಆಚರಿಸುತ್ತಿರೋದು ವಿಶೇಷ. ಕೋಮುಸೂಕ್ಷ್ಮ ಪ್ರದೇಶದಲ್ಲೂ ಸೌಹಾರ್ದಕ್ಕೆ ಕಾರಣವಾದ ಈ ಹಬ್ಬ ನಡೆಯೋದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದಲ್ಲಿ.
ಕರಾವಳಿ ಅಂದರೆ ನೆನಪಿಗೆ ಬರುವುದೇ ಶಕ್ತಿ ಮಾತೆಯ ಆರಾಧನೆ ಕೇಂದ್ರವಾದ ಕಟೀಲು ದುರ್ಗಾಪರಮೇಶ್ವರೀ , ಕೊಲ್ಲೂರು ಮೂಕಾಂಬಿಕೆ, ಕಮಲ ಶಿಲೆ ಬ್ರಾಹ್ಮಿ ದುರ್ಗಾ ಪರಮೇಶ್ವರಿ, ಕಾಪು ಮಾರಿಯಮ್ಮ.... ಹೀಗೆ ಒಂದೇ ಎರಡೇ... ಇಂತಹ ನೂರಾರು ದೇವಿ ದೇವಾಲಯಗಳು ಇಲ್ಲಿ ಪ್ರಸಿದ್ಧಿ ಪಡೆದಿವೆ.
ದಕ್ಷಿಣ ಕೊಡಗಿನಲ್ಲಿ ಕೆಸರು ಎರಚಿ ಹರಕೆ ತೀರಿಸುವ ಅಪರೂಪದ ಹಬ್ಬ
ಜಗದ ಉದ್ದಗಲದಿಂದ ಸಾವಿರಾರು ಭಕ್ತರು ಬಂದು ದೇವಿ ದರ್ಶನ ಪಡೆಯುವುದು ಸರ್ವೇಸಾಮಾನ್ಯ. ಕರಾವಳಿ ಜನ ಕೂಡ ದೇವಿಯನ್ನು ನಾನಾ ರೂಪದಲ್ಲಿ ಆರಾಧಿಸುತ್ತಾ ಬಂದಿದ್ದಾರೆ. ಸರ್ವ ಸಂಕಷ್ಟಗಳಿಗೆ ತಾಯಿ ಆಶಿರ್ವಾದವೇ ಪರಿಹಾರ ಅನ್ನೋ ನಂಬಿಕೆ ಈ ಭಕ್ತ ಜನರದ್ದು.
ಆದರೆ ಉಡುಪಿ ಜಿಲ್ಲೆಯ ಪ್ರತೀ ಊರಿನಲ್ಲಿ ಅನಿಷ್ಠ ದೂರಮಾಡುವ ಉದ್ದೇಶದಿಂದ ಮಾರಿ ಜಾತ್ರೆಯೊಂದು ನಡೆಯುವುದು ಸಾಮಾನ್ಯವಾಗಿದೆ. ಆದ್ರೆ ಕಂಡ್ಲೂರು ಗ್ರಾಮದಲ್ಲಿ ಮಾತ್ರ ವಿಶಿಷ್ಟವಾಗಿ ಈ ಮಾರಿ ಜಾತ್ರೆ ನಡೆಯುತ್ತದೆ. ಹೇಗೆ ಗೊತ್ತಾ?
ವರ್ಷಕ್ಕೊಮ್ಮೆ ಮಾರಿ ಹಬ್ಬ
ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಕಂಡ್ಲೂರು ಒಂದು ಕೋಮು ಸೂಕ್ಷ್ಮ ಪ್ರದೇಶವೆಂದೇ ಹೆಸರುವಾಸಿ. ಹೀಗಿದ್ದರೂ ಕಂಡ್ಲೂರಿನಲ್ಲಿ ವಾಸವಿರುವ ಹಿಂದೂಗಳು ಹಾಗೂ ಮುಸ್ಲಿಮರು ತಮ್ಮೆಲ್ಲಾ ಆಕ್ರೋಶಗಳನ್ನು ಬದಿಗಿಟ್ಟು, ವರ್ಷಕ್ಕೊಮ್ಮೆ ಮಾರಿ ಹಬ್ಬ ಆಚರಿಸುವುದು ವಿಶೇಷ. ಹಿಂದೂ, ಮುಸ್ಲಿಮರು ಜೊತೆಯಾಗಿ ಸಾಮರಸ್ಯದ ಮಾರಿ ಹಬ್ಬದಾಚರಣೆಯನ್ನು ಇಲ್ಲಿ ಮಾಡುತ್ತಾರೆ.
ಕೋಳಿ ಬಲಿ ನೀಡುವ ಸಂಪ್ರದಾಯ
ಕುಬ್ಜಾ ಮತ್ತು ವಾರಾಹಿ ಸಂಗಮ ಕೂಡುವ ಸ್ಥಳವಾದ ಕೂಡ್ಲೂರು ಮುಂದೆ ಕಂಡ್ಲೂರಾಗಿ ಬದಲಾಯ್ತು. ಕಂಡ್ಲೂರಿನ ನೆಲೆಯಲ್ಲಿ ಮಾರಿಯಮ್ಮ ಎಂದು ಕರೆಯಲ್ಪಡುವ ದುರ್ಗಾದೇವಿ ಕಾಕಾಸುರ ಎಂಬ ರಾಕ್ಷಸನ ಉಪಟಳದಿಂದ ಜನತೆಯನ್ನು ರಕ್ಷಿಸುವುದಕ್ಕಾಗಿ ವಧೆ ಮಾಡುತ್ತಾಳೆ.
ಊರಿನ ದೇವಿಗೆ ಸೇವೆ ನಡೆಯುವಾಗ ತನಗೂ ರಕ್ತಾಹಾರ ಬೇಕೆಂದು ಬೇಡಿಕೊಂಡಿದ್ದ. ಹಾಗಾಗಿ ಮಾರಿ ಹಬ್ಬದ ಮೇಲೆ ಕುರಿ, ಕೋಳಿ ಬಲಿ ನೀಡುವ ಸಂಪ್ರದಾಯ ಬೆಳೆದು ಬಂದಿದೆ.
ಮುಸ್ಲಿಮರೂ ಆಚರಿಸುತ್ತಾರೆ
ಕಂಡ್ಲೂರಿನಲ್ಲಿ ಮಸೀದಿಯ ಮಾರು ದೂರದಲ್ಲಿ ಮಾರಿ ಜಾತ್ರೆ ನಡೆಯುತ್ತದೆ. ಇಲ್ಲಿ ಹಿಂದೂಗಳ ಜೊತೆ ಮುಸ್ಲಿಮರೂ ಜೊತೆಯಾಗಿ ಮಾರಿ ಜಾತ್ರೆಯನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ.
ಹೊಂಗೆ ಮರದಿಂದ ದೇವಿಯ ಮೂರ್ತಿಯನ್ನು ರಚಿಸಿ ಒಂದು ವಾರದಿಂದ ಪೂಜಿಸಿ (ಅಟಿ)ಆಷಾಢ ಮಾಸದ ಕೊನೆಯ ದಿನಗಳಲ್ಲಿ ಮಾರಿ ಜಾತ್ರೆ ನಡೆಸಲಾಗುತ್ತದೆ. ಊರಿನ ಅನಿಷ್ಟ ಕಷ್ಟಕೋಟಲೆಗಳು ದೂರವಾಗಲಿ ಎಂದು ಸರ್ವಧರ್ಮಿಯರು ಜೊತೆ ಗೂಡಿ ಮಾರಿಜಾತ್ರೆ ನಡೆಸುವುದು ಮಾತ್ರ ಈ ಗ್ರಾಮದ ವಿಶೇಷ.
ಸಹಬಾಳ್ವೆಯಿಂದ ಆರಾಧನೆ
ಮತ ಭೇದ ಮರೆತು ಕಂಡ್ಲೂರಿನಲ್ಲಿ ನಡೆಯುವ ಮಾರಿ ಜಾತ್ರೆ ಕೋಮು ಸೌಹಾರ್ದದ ಸಂದೇಶವನ್ನು ಎಲ್ಲೆಡೆ ಸಾರುತ್ತಿದೆ. ಕೇವಲ ಇಪ್ಪತ್ತು ಮೀಟರ್ ಅಂತರದಲ್ಲಿರುವ ಮಾರಿ ದೇವಸ್ಥಾನ ಹಾಗೂ ಮಸೀದಿಗಳ ನಡುವೆ ಸಹಬಾಳ್ವೆಯಿಂದ ಆರಾಧನೆ ಯಶಸ್ವಿಯಾಗಿ ನಡೆಯುತ್ತದೆ.
ಜಾತ್ರೆಯಲ್ಲಿ ಭಾಗವಹಿಸಿದ ಸಾವಿರಾರು ಭಕ್ತರಿಗೆ ಸ್ಥಳೀಯ ಮುಸ್ಲಿಂ ಮುಖಂಡರು ತಂಪು ಪಾನೀಯ ಹಾಗೂ ಚಹಾದ ವ್ಯವಸ್ಥೆ ಕಲ್ಪಿಸುವ ಮೂಲಕ ಮಾರಿ ಜಾತ್ರೆಗೆ ಸೌಹಾರ್ದದ ಸ್ಪರ್ಶ ನೀಡುತ್ತಾರೆ. ಒಟ್ಟಿನಲ್ಲಿ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಕೋಮು ಸೌಹಾರ್ದತೆ ಈ ಧಾರ್ಮಿಕತೆ ಮೂಲಕ ನಡೆಯುವುದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ ಎಂದರೆ ತಪ್ಪಲ್ಲ.