ಕಾರ್ಕಳ: ಒಂಟಿ ಮಹಿಳೆ ಕೊಲೆ ಕೇಸಿನ ಆರೋಪಿ ಬಂಧನ
ಉಡುಪಿ, ಜುಲೈ.18: ಒಂಟಿ ಮಹಿಳೆ ಕೊಲೆ ಮಾಡಿದ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ರಿಯಾಜ್ (35) ಬಂಧಿತ ಆರೋಪಿ. ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಅಯ್ಯಪ್ಪ ನಗರದಲ್ಲಿ ಫ್ಲೋರಿನ್ ಡಿಸೋಜ(54) ಎಂಬ ಮಹಿಳೆಯನ್ನು ಜುಲೈ 7ರ ರಾತ್ರಿ ಕತ್ತಿಯಿಂದ ಕುತ್ತಿಗೆಗೆ ತಿವಿದು ಕೊಲೆ ಮಾಡಲಾಗಿತ್ತು.
ಮರುದಿನ ಬೆಳಗ್ಗೆ ಮನೆಗೆ ಬಂದ ಮಕ್ಕಳು ಎಷ್ಟೇ ಬಾಗಿಲು ಬಡಿದರೂ ತಾಯಿ ಬಾಗಿಲು ತೆರೆಯದ್ದರಿಂದ ಈ ಕೊಲೆ ಬೆಳಕಿಗೆ ಬಂದಿತ್ತು. ಬಡ್ಡಿ ವ್ಯವಹಾರ ಹಾಗೂ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆ ಬಡ್ಡಿ ವ್ಯವಹಾರಕ್ಕೆಂದು ಆರೋಪಿಯಿಂದ 13ಲಕ್ಷ ಪಡೆದಿದ್ದಳೆನ್ನಲಾಗಿದ್ದು ಅದನ್ನು ಆಕೆ ಬಡ್ಡಿಗಾಗಿ ವಿನಿಯೋಗಿಸಿದ್ದಳು ಎನ್ನಲಾಗಿದೆ.
ಕಾರ್ಕಳದ ಅಯ್ಯಪ್ಪ ನಗರದಲ್ಲಿ ಒಂಟಿ ಮಹಿಳೆ ಕೊಲೆ
ಪಡೆದ ಸಾಲವನ್ನು ಫ್ಲೋರಿನ್ ಮರುಪಾವತಿ ಮಾಡದ ಕಾರಣ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳ ನಡೆದಿತ್ತು. ಕೊಲೆಯಾದ ದಿನವೂ ಹಣದ ವಿಚಾರಕ್ಕೆ ಜಗಳ ನಡೆದಿದ್ದು, ಮಾತು ವಿಕೋಪಕ್ಕೆ ತಿರುಗಿ ಆರೋಪಿ ಚೂರಿಯಿಂದ ಕುತ್ತಿಗೆ ಭಾಗಕ್ಕೆ ತಿವಿದಿದ್ದಾನೆ.
ಕೊಲೆಯಾದ ಬಳಿಕ ರಾತ್ರಿಯಿಡೀ ಮನೆಯಲ್ಲಿದ್ದ ಆರೋಪಿ ಚಿನ್ನಾಭರಣ ಹಾಗೂ ಸ್ಕೂಟಿ ತೆಗೆದುಕೊಂಡು ಪರಾರಿಯಾಗಿದ್ದ. ಆರೋಪಿಗಾಗಿ ಶೋಧ ನಡೆಸಿದ ಪೊಲೀಸರು ಮೊಬೈಲ್ ನೆಟ್ವರ್ಕ್ ಆಧಾರದಲ್ಲಿ ಆತ ಅಜ್ಮೀರ್ ದಲ್ಲಿ ಇರುವನೆಂದು ಪತ್ತೆ ಮಾಡಿದರು.
ರೈಲ್ವೆ ನಿಲ್ದಾಣದಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರು, ಆತ ಅಹಮದಾಬಾದ್ನಿಂದ ಮುಂಬೈ ಮೂಲಕ ಮಂಗಳೂರಿಗೆ ರೈಲಿನಲ್ಲಿ ಬರುತ್ತಿರುವ ಖಚಿತ ಮಾಹಿತಿ ಪಡೆದು ಪನ್ವೇಲ್ ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ.
ಮೂಲತಃ ಹೊಸ್ಮಾರಿನವನಾಗಿದ್ದ ಆರೋಪಿ ಹಿಂದೆ ದುಬೈಯಲ್ಲಿದ್ದು, ಪಾಸ್ಪೋರ್ಟ್, ವೀಸಾ ಕೊಡಿಸುವ ಏಜೆನ್ಸಿಯಲ್ಲಿ ಉದ್ಯೋಗಿಯಾಗಿದ್ದ. 5 ವರ್ಷಗಳಿಂದ ಫೇಸ್ಬುಕ್ ಮೂಲಕ ಈತನಿಗೆ ಕಾರ್ಕಳದ ಫ್ಲೋರಿನ್ ಮಚಾದೋ ಪರಿಚಯವಾಗಿತ್ತು. ನಂತರ ಇವರಿಬ್ಬರು ತುಂಬಾ ಆತ್ಮೀಯವಾಗಿ ಹಣಕಾಸಿನ ವ್ಯವಹಾರದಲ್ಲಿ ಮುಂದುವರಿದರು.
ಪೊಲೀಸರು ಈತನಿಂದ ಹತ್ಯೆಗೆ ಬಳಸಿದ ಚಾಕು ಹಾಗೂ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 4 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.