ಜನಸಾಮಾನ್ಯರ ಸ್ವಾಮೀಜಿ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳ ವ್ಯಕ್ತಿಚಿತ್ರ
Recommended Video
ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು (55) ಗುರುವಾರ ವೈಕುಂಠಸ್ಥರಾದರು. ಬುಧವಾರ ತಡರಾತ್ರಿಯೇ ಶ್ರೀಗಳ ನಿಧನದ ಸುತ್ತ ಸುದ್ದಿಗಳು ಉಡುಪಿ ಜಿಲ್ಲೆಯಲ್ಲಿ ಮಿಂಚಿನಂತೆ ಹರಿದಾಡುತ್ತಿದ್ದವು.
ಅಷ್ಟಮಠದ ಯತಿಗಳು ಪಾಲಿಸಿಕೊಂಡು ಬರಬೇಕಾಗಿರುವ ಕಟ್ಟುಪಾಡುಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದ ಡೈನಾಮಿಕ್ ಸ್ವಾಮೀಜಿಯೆಂದೇ ಹೆಸರಾಗಿದ್ದ ಶಿರೂರು ಶ್ರೀಗಳು ತಮ್ಮ ಎಂಟನೇ ವಯಸ್ಸಿನಲ್ಲೇ ಸನ್ಯಾಸ್ವತ್ವ ಸ್ವೀಕರಿಸಿದ್ದರು.
ಶೀರೂರು ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ವಿಧಿವಶ
ಉಡುಪಿ ಜಿಲ್ಲೆ ಹೆಬ್ರಿ ಬಳಿಯ ಮಡಾಮಕ್ಕಿ ಮೂಲದ ಶಿರೂರು ಶ್ರೀಗಳ ಪೂರ್ವಾಶ್ರಮದ ಹೆಸರು ಹರೀಶ್ ಆಚಾರ್ಯ. ಇವರ ತಂದೆಯ ಹೆಸರು ವಿಠಲ ಆಚಾರ್ಯ ಮತ್ತು ತಾಯಿಯ ಹೆಸರು ಕುಸುಮ ಆಚಾರ್ಯ. ಶಿರೂರು ಶ್ರೀಗಳು ಮಠದ ಪರಂಪರೆಯ ಮೂವತ್ತನೇ ಯತಿಗಳು.
ಮೂರು ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ್ದ ಶಿರೂರು ಶ್ರೀಗಳು, ಇತ್ತೀಚಿನ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿ ನಂತರ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು. ಅವಕಾಶ ಸಿಕ್ಕರೆ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುವುದಾಗಿ ಬಹಿರಂಗವಾಗಿಯೇ ಹೇಳಿದ್ದರು.
ಜನಸಾಮಾನ್ಯರ ಸ್ವಾಮೀಜಿಯೆಂದೇ ಹೆಸರಾಗಿದ್ದ ಶಿರೂರು ಶ್ರೀಗಳು, ತಮ್ಮ ಪಟ್ಟದದೇವರ ವಿಚಾರದಲ್ಲಿ ನಡೆಯುತ್ತಿದ್ದ ವಿದ್ಯಮಾನದಿಂದ ತೀರಾ ಮನನೊಂದಿದ್ದರು. ಮಠಕ್ಕೆ ಬಂದ ಬಡವರಿಗೆ ಊಟ, ಹಣಕಾಸು ನೆರವು ನೀಡುತ್ತಿದ್ದ ಶಿರೂರು ಶ್ರೀಗಳು, ಹಿಂದೊಮ್ಮೆ ಉಡುಪಿ ನಗರಕ್ಕೆ ನೀರಿನ ಸಮಸ್ಯೆ ಉಂಟಾದಾಗ ತಾವೇ ಮುಂದೆ ನಿಂತು ಸಮಸ್ಯೆಯನ್ನು ಬಗೆಹರಿಸಿದ್ದರು.
1963ರಲ್ಲಿ ಜನಿಸಿದ ಶಿರೂರು ಶ್ರೀಗಳು, 48ವರ್ಷಗಳಿಂದ ಪೂಜಿಸಿಕೊಂಡು ಬಂದಿದ್ದ ಪಟ್ಟದದೇವರು ಕೈತಪ್ಪಿದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಏಕಾಂಗಿಯಾಗಿ ಬಿಕ್ಕಿಬಿಕ್ಕಿ ಅಳುತ್ತಿದ್ದರು ಎನ್ನುವ ಮಾಹಿತಿಯಿದೆ. ಸಮಾಜಮುಖಿ ಕೆಲಸದಲ್ಲಿ ಎಲ್ಲರಿಗಿಂತ ಮುಂದಾಗಿದ್ದ ಶಿರೂರು ಶ್ರೀಗಳು, ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿವಾದಕಾರಿ ಹೇಳಿಕೆ, ನಿರ್ಧಾರದಿಂದ ಸುದ್ದಿಯಲ್ಲಿದ್ದರು.
ಶೀರೂರು ಶ್ರೀ ದೈವಾಧೀನ: ಕಂಬನಿ ಮಿಡಿದ ಗಣ್ಯರು
1971ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದ ಶಿರೂರು ಶ್ರೀಗಳು, ಖುದ್ದು ಈಜುಪಟು ಮತ್ತು ಕರಾಟೆ ಪಟು ಆಗಿದ್ದರು. ಖ್ಯಾತ ಡ್ರಮ್ಸ್ ವಾದಕ ಶಿವಮಣಿಯೊಂದಿಗೆ ಡ್ರಮ್ಸ್ ಜುಗಲ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉಡುಪಿ ಅಷ್ಟಮಠಗಳ ಯತಿಗಳಂತೆ ತಾವಲ್ಲ ಎಂದು ಸಾರಿದ್ದರು.
ಸೋದೆ ಮಠದ ಹಿಂದಿನ ಶ್ರೀಗಳಿಂದ ಸನ್ಯಾಸತ್ವ ಪಡೆದಿದ್ದ ಶಿರೂರು ಶ್ರೀಗಳ ಉತ್ತರಾಧಿಕಾರಿ ನೇಮಿಸಲು ಒಪ್ಪದ ನಿರ್ಧಾರ ಅಷ್ಟಮಠಗಳ ಇತರ ಸ್ವಾಮೀಜಿಗಳನ್ನು ಕೆರಳಿಸಿತ್ತು. ಮೂರು ವರ್ಷಗಳ ಹಿಂದೆ ಜಿಲ್ಲಾ ಈಜು ಸ್ಪರ್ಧೆಯಲ್ಲಿ, ಸ್ವತಃ ತಾವೇ ಒಂದು ಗಂಟೆಗೂ ಹೆಚ್ಚುಕಾಲ ಸಮುದ್ರದಲ್ಲಿ ಯೋಗಾಸನ ಮಾಡಿ ಸುದ್ದಿಯಾಗಿದ್ದರು.
ಸಂಗೀತ, ಸಾಹಿತ್ಯದಲ್ಲಿ ವಿಶೇಷ ಅಭಿಮಾನವನ್ನು ಹೊಂದಿದ್ದ ಶಿರೂರು ಶ್ರೀಗಳು, ಜಾತಿ ಆಧಾರಿತವಾಗಿ ಊಟೋಪಚಾರ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವರು. ಪರ್ಯಾಯ ಸ್ವಾಗತ ಸಮಿತಿಗೆ ಅಧ್ಯಕ್ಷರನ್ನಾಗಿ ಬ್ರಾಹ್ಮಣ, ಜಿಎಸ್ಬಿ ಸಮುದಾಯದಿಂದ ಹೊರತಾಗಿ, ಮೊಗವೀರ ಸಮುದಾಯವರನ್ನು ನೇಮಿಸಿ ತನ್ನ ಸ್ಟೈಲೇ ಬೇರೆ ಎಂದು ತೋರಿಸಿದ್ದರು.
ಉಡುಪಿ ಕೃಷ್ಣ, ಮುಖ್ಯಪ್ರಾಣ ಅಲಂಕಾರದಲ್ಲಿ ಎತ್ತಿದ ಕೈಯಾಗಿದ್ದ ಶಿರೂರು ಶ್ರೀಗಳ ನಿಧನ, ವೈಷ್ಣವ ಸಮುದಾಯಕ್ಕೆ ಆದ ಬಹುದೊಡ್ಡ ನಷ್ಟ. ಶಿರೂರು ಶ್ರೀಗಳು ನಿರ್ಜಲೀಕರಣದಿಂದ ನಿಧನ ಹೊಂದಿದ್ದಾರಾ? ಫುಡ್ ಪಾಯಿಸನ್ ಇವರಿಗೆ ಮಾತ್ರ ಆಯಿತಾ? ಎನ್ನುವ ಪ್ರಶ್ನೆ ಜಿಲ್ಲೆಯಲ್ಲಿ ತೀವ್ರವಾಗಿ ಕಾಡಲಾರಂಭಿಸಿದೆ....