ತುಳು ರಂಗಭೂಮಿಯಲ್ಲಿ ಹೊಸ ದಾಖಲೆಗೆ ಕ್ಷಣಗಣನೆ
ನಮತುಳುವೆರ್ ಕಲಾ ಸಂಘಟನೆಯ ವತಿಯಿಂದ ವಿಶ್ವರಂಗ ಭೂಮಿ ದಿನಾಚರಣೆಯ ಪ್ರಯುಕ್ತ ಇಂದು ಸಂಜೆ 7 ಗಂಟೆಗೆ ಮುದ್ರಾಡಿ ನಾಟ್ಕದೂರು ಚೌಟರ ಬಯಲಿನಲ್ಲಿ ಪಲಿಪತ್ತಿ ಗಡಸ್ ನಾಟಕದ 300 ನೇ ಪ್ರಯೋಗ ನಡೆಯಲಿದೆ..
ಉಡುಪಿ, ಮಾರ್ಚ್ 27: ತುಳುರಂಗ ನಾಟಕದಲ್ಲಿ ಇಂದು (ಮಾರ್ಚ್ 27) ಹೊಸ ದಾಖಲೆ ನಿರ್ಮಾಣವಾಗಲಿದೆ. ಖ್ಯಾತ ಸಾಹಿತಿ ಡಾ.ಡಿ.ಕೆ. ಚೌಟ ರಚಿಸಿದ, ಜೀವನ್ ರಾಮ್ ಸುಳ್ಯ ನಿರ್ದೇಶನದ, ಪಿಲಿಪತ್ತಿ ಗಡಸ್ ತುಳು ನಾಟಕದ 300ನೇ ಪ್ರಯೋಗ ಇಂದು ನಡೆಯಲಿದ್ದು, ಇದು ವಿಶ್ವ ರಂಗಭೂಮಿ ದಿನ (ಮಾರ್ಚ್ 27) ದ ವಿಶೇಷತೆಯಾಗಲಿದೆ.
ರಂಗ ನಟ ನಿರ್ದೇಶಕ ಸುಕುಮಾರ್ ಮೋಹನ್ ನೇತೃತ್ವದ ಹೆಬ್ರಿಯ ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ಅಭಿನಯದಲ್ಲಿ ನಾಟಕ ಮೂಡಿಬರಲಿದೆ.[ನಾಟಕಚೈತ್ರ 2017 : ಎರಡು ನಾಟಕಗಳ ವಿಮರ್ಶೆ]
ಈ ರಂಗ ಕೃತಿ ತುಳು ಸಂಸ್ಕೃತಿಯನ್ನು ವಿಶಿಷ್ಟವಾಗಿ ಬಿಂಬಿಸಿದ್ದು, ಮೇಲ್ವರ್ಗದ ದರ್ಪ, ಶೋಷಣೆ, ಗುತ್ತಿನವರ ಬದುಕಿನ ಅವಸ್ಥೆ ಹಾಗೂ ಧರ್ಮಕ್ಕೆ ವಿರುದ್ಧವಾದ ವ್ಯವಸ್ಥೆಯೇ ಬುಡಮೇಲಾಗಿ ಕುಸಿಯುವ ನಿಲುವುಗಳನ್ನು ವ್ಯವಸ್ಥಿತವಾಗಿ ಚಿತ್ರಿಸಿದೆ.
ಜೀವನರಾಮ್ ಸುಳ್ಯರ ನಿರ್ದೇಶನದಲ್ಲಿ ಹಲವು ವಿಶೇಷತೆಗಳನ್ನು ನಾಟಕ ಒಳಗೊಂಡಿದೆ. ವೇದಿಕೆಯಲ್ಲಿ ಬೆಂಕಿ ಬರುವುದು, ದೈವದ ಮಂಚ ಕೆಳಗೆ ಬೀಳುವ ಸನ್ನಿವೇಶದ ಸಂದರ್ಭಗಳಲ್ಲಿ ಇಂದ್ರಜಾಲದ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಲಾಗಿದೆ.['ಗುಮ್ಮ ಬಂದ ಗುಮ್ಮ' ನಾಟಕ ಮತ್ತೆ ಬಂದಿದೆ ನೋಡಿ]
ಪಿಲಿಪತ್ತಿಗಡಸ್ ನಲ್ಲಿ ಮೋಹನ್ ಹೆಗ್ಗಡೆಯಾಗಿ ಸುಕುಮಾರ್ , ಕಲ್ಮಾಡಿ ಹೆಗ್ಗಡತಿ ಅಬ್ಬಕ್ಕನಾಗಿ ಸುಗಂಧಿ ಉಮೇಶ್ , ಮೋಹನ್ ಚೆನ್ನಿಯಾಗಿ ವಾಣಿ ಸುಕುಮಾರ್ , ಪೂವಮ್ಮನಾಗಿ ಪೂರ್ಣಿಮಾ ಸುಧೀಂದ್ರ ಮೋಹನ್, ಐತಪ್ಪು ಪಾತ್ರದಾರಿಯಾಗಿ ಸುಧೀಂದ್ರ ಮೋಹನ್, ದಾಸಯ್ಯನಾಗಿ ಸುರೇಂದ್ರ ಮೋಹನ್, ನರೇಶ್ ಮತ್ತು ಉಮೇಶ್ ಕಲ್ಮಾಡಿ ನಟಿಸುತ್ತಿದ್ದಾರೆ. ಕರುಣಾಕರ ಶಿವಪುರ ಹಿನ್ನಲೆ ಸಂಗೀತಾ ನೀಡುತ್ತಿದ್ದಾರೆ. ನಮತುಳುವೆರ್ ಕಲಾ ಸಂಘಟನೆಯ ಹೊಣೆಹೊತ್ತು 299 ಪ್ರದರ್ಶನಗಳ ಸಾಧನೆಯ ಸಾರಥ್ಯ ವಹಿಸಿದವರು ಸಿಜಿಕೆ ಪ್ರಶಸ್ತಿ ಪುರಸ್ಕೃತ ಕಲಾವಿದ, ರಂಗ ನಿರ್ದೇಶಕ ಸುಕುಮಾರ್ ಮೋಹನ್.[ಬೀದಿಯೊಳಗೊಂದು ಮನೆಯ ಮಾಡಿ ಮತ್ತೊಮ್ಮೆ ನೋಡಿ]
ನಮತುಳುವೆರ್ ಕಲಾ ಸಂಘಟನೆಯ ವತಿಯಿಂದ ವಿಶ್ವರಂಗ ಭೂಮಿ ದಿನಾಚರಣೆಯ ಪ್ರಯುಕ್ತ ಇಂದು (ಮಾ.27) ಸಂಜೆ 7 ಗಂಟೆಗೆ ಮುದ್ರಾಡಿ ನಾಟ್ಕದೂರು ಚೌಟರ ಬಯಲಿನಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.
ಬೆಂಗಳೂರಿನ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆಯುತ್ತಿರುವ ಈ ಪ್ರದರ್ಶನವನ್ನು ಉಡುಪಿ ಅದಾನಿ ಯುಪಿಸಿಎಲ್ ಪವರ್ ಕಾರ್ಪೋರೇಶನ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಪ್ರದರ್ಶನ ಉದ್ಘಾಟಿಸುವರು. ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸುವರು. ಉಡುಪಿ ಹನುಮಾನ್ ಗ್ರೂಫ್ಸ್ ಆಡಳಿತ ನಿರ್ದೇಶಕ ವಿಲಾಸ್ ನಾಯಕ್ ಉಪಸ್ಥಿತರಿರಲಿದ್ದಾರೆ.