ಪೇಜಾವರ ಮಠದಿಂದ ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ಆರಂಭಿಕ ದೇಣಿಗೆ
Recommended Video
ಉಡುಪಿ, ಫೆಬ್ರವರಿ 20: ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಮೊದಲ ಸಭೆ ಇಂದು ನಡೆದಿದ್ದು, ಪೇಜಾವರ ಮಠದಿಂದ ರಾಮಮಂದಿರ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಆರಂಭಿಕ ದೇಣಿಗೆಯನ್ನು ನೀಡಿರುವುದಾಗಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ್ದ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥರು, "ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲರನ್ನು ಸಭೆಯಲ್ಲಿ ಸ್ಮರಿಸಲಾಯಿತು. ಸಭೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಸರ್ವೋಚ್ಚ ನ್ಯಾಯಾಲಯಕ್ಕೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಪೇಜಾವರ ಮಠದ ವತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿಯ ಮೊದಲ ದೇಣಿಗೆಯನ್ನು ವಿಶ್ವೇಶತೀರ್ಥ ಸ್ವಾಮೀಜಿ ಹೆಸರಲ್ಲಿ ನೀಡಿದ್ದೇವೆ. ಉಡುಪಿ ಕೃಷ್ಣಮಠದ ಪ್ರಸಾದವನ್ನು ಟ್ರಸ್ಟ್ ಸದಸ್ಯರಿಗೆ ನೀಡಿದ್ದೇವೆ" ಎಂದು ತಿಳಿಸಿದರು.
ರಾಮಮಂದಿರ ಟ್ರಸ್ಟ್ ಸದಸ್ಯತ್ವ: ಉಡುಪಿ ಪೇಜಾವರ ಶ್ರೀಗಳಿಗೆ ಒಲಿದ ಗೌರವ
"ರಾಮ ಮಂದಿರ ನಿರ್ಮಾಣಕ್ಕೆ ಸಾರ್ವಜನಿಕರು ದೇಣಿಗೆ ಕೊಡುವ ಅವಕಾಶ ಇದೆ. ಹಣವನ್ನು ನೇರ ಬ್ಯಾಂಕ್ ಖಾತೆಗೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ರಾಮ ಮಂದಿರವನ್ನು ಶಾಸ್ತ್ರೋಕ್ತವಾಗಿ ನಿರ್ಮಾಣವಾಗಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ. ದೇಶಾದ್ಯಂತ ದೇಗುಲಗಳಲ್ಲಿ ಮಂದಿರ ನಿರ್ಮಾಣದವರೆಗೆ ರಾಮಾಯಣ ಪಾರಾಯಣ ನಡೆಯಲಿದೆ" ಎಂದರು. ರಾಮ ಮಂದಿರ ನಿರ್ಮಾಣಕ್ಕೆ ವಿಶೇಷ ಸಮಿತಿಯೊಂದನ್ನು ರಚಿಸಲು ಇಂದು ತೀರ್ಮಾನಿಸಲಾಯಿತು ಎಂದೂ ತಿಳಿಸಿದ್ದಾರೆ.