ಜರ್ಮನಿಯಿಂದ ಕೃಷ್ಣನಗರಿಗೆ ಬಂದು ನಮ್ಮ ಸಂಸ್ಕೃತಿಗೆ ಮಾರು ಹೋದರು
ಉಡುಪಿ, ಮಾರ್ಚ್ 7: ನಮ್ಮ ದೇಶದ ಶ್ರೀಮಂತ ಸಂಸ್ಕೃತಿಗೆ ಮಾರು ಹೋಗಿರುವ ವಿದೇಶಿಯರು ಈ ನಮ್ಮ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಅನೇಕ ಉದಾಹರಣೆಗಳು ಸಿಗುತ್ತವೆ. ಸದ್ಯ ಉಡುಪಿಯಲ್ಲೂ ಅಂಥದ್ದೊಂದು ಉದಾಹರಣೆ ದೊರೆತಿದೆ.
ಉಡುಪಿಗೆ ಬಂದಿರುವ ಜರ್ಮನಿಯ ನಾಲ್ವರು ನಮ್ಮ ನೆಲದ ಸಂಸ್ಕೃತಿಯನ್ನು ಮೆಚ್ಚಿ, ಇಲ್ಲಿನ ಕಲೆಗೆ ಮಾರು ಹೋಗಿ ಈ ನೃತ್ಯ ಕಲೆಯನ್ನೇ ತಾವೂ ಅಧ್ಯಯನ ವಸ್ತುವಾಗಿಸಿಕೊಂಡು ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಈ ಕುರಿತ ಒಂದು ಲೇಖನ ಇಲ್ಲಿದೆ...
ಪಾಂಡಿಚೆರಿ ಟು ಮುಂಬೈ; ಸಂಸ್ಕೃತಿ ಅರಿಯಲು 70 ದಿನ, 1400 ಕಿ.ಮೀ ಕಾಲ್ನಡಿಗೆ!
ಜರ್ಮನಿಯಿಂದ ಬಂದು ನೃತ್ಯ ಕಲಿಕೆ
ಜರ್ಮನಿಯಿಂದ ಉಡುಪಿಗೆ ನಾಲ್ವರು ಬಂದಿದ್ದಾರೆ. ಇವರ ಹೆಸರು ವ್ಯಾಲೆಂಟೇನ್, ಮ್ಯಾಥ್ಯೂ, ಜೊಹಾನಾ ಮತ್ತು ಇದಾ. ಕೃಷ್ಣನಗರಿ ಉಡುಪಿಯಲ್ಲಿ ಇವರು ಕೆಲವು ತಿಂಗಳಿನಿಂದ ಇದ್ದಾರೆ. ಸಮಾಜ ಸೇವೆಯಲ್ಲಿ ಆಸಕ್ತಿ ಇರುವ ಈ ಜರ್ಮನರು, ಭಾರತೀಯ ಕಲೆ ಎನಿಸಿಕೊಂಡಿರುವ ಭರತನಾಟ್ಯ ,ಶಾಸ್ತ್ರೀಯ ಸಂಗೀತಕ್ಕೆ ಮಾರು ಹೋಗಿದ್ದಾರೆ. ಕಳೆದ ಐದಾರು ತಿಂಗಳಿನಿಂದ ಇಲ್ಲಿನ ಶಾಸ್ತ್ರೀಯ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಉಡುಪಿಯ ದರ್ಪಣ ನೃತ್ಯ ತರಬೇತಿ ಕೇಂದ್ರದಲ್ಲಿ ಪ್ರತಿನಿತ್ಯ ಬಾಲಿವುಡ್ ಡ್ಯಾನ್ಸ್, ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತವನ್ನು ತುಂಬ ಶ್ರದ್ಧೆಯಿಂದ ಕಲಿಯುತ್ತಿದ್ದಾರೆ.
ಇಲ್ಲಿನ ಮಕ್ಕಳಿಗೆ ಇವರಿಂದ ಇಂಗ್ಲಿಷ್ ಪಾಠ
ಇತ್ತೀಚೆಗೆ ಧರ್ಮಸ್ಥಳದಲ್ಲಿ ಇವರು ವೇದಿಕೆಯಲ್ಲಿ ಸಾವಿರಾರು ಜನರ ಎದುರು ಪ್ರದರ್ಶನವನ್ನೂ ನೀಡಿದ್ದಾರೆ. ತಾವೇನೂ ಕಮ್ಮಿ ಇಲ್ಲ ಎಂಬಂತೆ ನೃತ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ನೃತ್ಯ ಕಲಿಕೆಯಷ್ಟೇ ಅಲ್ಲ, ಕನ್ನಡ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಪಾಠವನ್ನೂ ಹೇಳಿಕೊಡುತ್ತಾರೆ. ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆ ತನಕ ಇವರು ಕನ್ನಡ ಶಾಲೆಯ ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸವನ್ನೂ ಮಾಡುತ್ತಿದ್ದಾರೆ.
ಅಜಿತ್ ಪೂವಣ್ಣರ ಕೈಚಳಕದಲ್ಲಿ ಕರಟವೇ ಕಲಾಕೃತಿಯಾಯ್ತು
ಸರ್ಕಾರಿ ಶಾಲೆಯಲ್ಲಿ ಇವರ ಪಾಠ
ದೂರದ ಜರ್ಮನಿಯಿಂದ ಉಡುಪಿಗೆ ಬಂದು ಇಲ್ಲಿನ ಮಕ್ಕಳಿಗೆ ಏನಾದರೂ ಹೇಳಿಕೊಡಬೇಕು ಎಂಬ ಇವರ ಕಾಳಜಿ, ಪ್ರೀತಿಯನ್ನೂ ಸ್ಥಳೀಯರು ಮೆಚ್ಚಿಕೊಂಡಿದ್ದಾರೆ. ಇವರ ನಯ ವಿನಯದಿಂದಲೇ ಇವರು ಉಡುಪಿಯ ಜನರ ಮನವನ್ನೂ ಗೆದ್ದಿದ್ದಾರೆ. ಈ ನಾಲ್ವರಲ್ಲಿ ಇಬ್ಬರು ಉಡುಪಿಯ ನಿಟ್ಟೂರು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಮತ್ತಿಬ್ಬರು ಬೇರೆ ಶಾಲೆಗೆ ಹೋಗುತ್ತಾರೆ. ಸಂಜೆ ಸಮಯ ನೃತ್ಯ ಕಲಿಕೆಗೆ ತಮ್ಮ ಸಮಯ ಮೀಸಲಿಡುತ್ತಾರೆ.
ಮಕ್ಕಳಿಗೆ ಕರಕುಶಲ ಕಲೆಯ ಕಲಿಕೆ
ಇಂಗ್ಲಿಷ್ ಪಾಠವಷ್ಟೇ ಅಲ್ಲದೇ, ಈ ಮಕ್ಕಳಿಗೆ ಕರಕುಶಲ ಕಲೆಯನ್ನೂ ಕಲಿಸಿಕೊಡುತ್ತಿದ್ದಾರೆ. ಭಾಷೆಯ ಹಂಗಿಲ್ಲದೆ ತಮ್ಮ ಹಾವ ಭಾವಗಳ ಮೂಲಕ ಸಂವಹನ ನಡೆಸಿ ಅವರ ಮನಗೆದ್ದಿದ್ದಾರೆ. ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿ, ಕಲೆಗೆ ಮಾರು ಹೋಗಿದ್ದು ಮಾತ್ರವಲ್ಲ, ಇಲ್ಲಿರುವಷ್ಡೂ ದಿನ ಮಕ್ಕಳಿಗೆ ಏನಾದರೂ ಕಲಿಸಬೇಕು ಎಂಬ ಇವರ ಕಳಕಳಿ ಇಲ್ಲಿನವರಿಗೂ ಮಾದರಿಯಲ್ಲವೇ?