ದೆಹಲಿಗೆ ತೆರಳಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ 19 ದಾದಿಯರ ಮೊದಲ ತಂಡ
ಮಣಿಪಾಲ, ಮೇ 5: ಪ್ರಸ್ತುತ ಭಾರತದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆಯಾಗಿರುವುದರಿಂದ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ 19 ದಾದಿಯರ ಮೊದಲ ತಂಡ ದೆಹಲಿಯ ಮಣಿಪಾಲ್ ಆಸ್ಪತ್ರೆ ದ್ವಾರಕಾದಲ್ಲಿ ಸೇವೆ ಸಲ್ಲಿಸಲು ತೆರಳಿತು.
ಮಣಿಪಾಲ ಸಂಸ್ಥೆಯ ಸಹ ಸಂಸ್ಥೆಯಾದ ಮಣಿಪಾಲ ಆಸ್ಪತ್ರೆ ದ್ವಾರಕಾದ ಬೇಡಿಕೆಯ ಮೇರೆಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ 19 ದಾದಿಯರ(ನರ್ಸ್) ಮೊದಲ ತಂಡ ಮಂಗಳವಾರ ದೆಹಲಿಗೆ ತೆರಳಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ತೆರಳಿದ ದಾದಿಯರಿಗೆ ಗೌರವ ಸಲ್ಲಿಸಲಾಯಿತು.
ದೆಹಲಿಯಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿರುವಿದರಿಂದ , ಮೇ 3, 2021 ರಂದು ನರ್ಸಿಂಗ್ ವೃತ್ತಿಪರರ ಹೆಚ್ಚಿನ ಅವಶ್ಯಕತೆಯ ಕೋರಿಕೆಯನ್ನು ಮಣಿಪಾಲ ದ್ವಾರಕಾ ಆಸ್ಪತ್ರೆಯು ನೀಡಿತ್ತು.
ಇದು ಇಡೀ ಮಣಿಪಾಲ ಸಮೂಹಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ದಾದಿಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಮ್ಮ ನಿಸ್ವಾರ್ಥ ಸೇವೆಯನ್ನು ನೀಡುವುದಲ್ಲದೆ, ತಮ್ಮ ಆರೈಕೆ ಮತ್ತು ಜೀವ ಉಳಿಸುವ ವೃತ್ತಿಯ ಬಗ್ಗೆ ನಿಜವಾದ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಶ್ಲಾಘಿಸಿದೆ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.