ಕುಂದಾಪುರ: ಮನೆಯೊಂದರಲ್ಲಿ ಭುಸ್ಸೆಂದ ಕಾಳಿಂಗ ಸರ್ಪ
ಉಡುಪಿ , ಫೆಬ್ರವರಿ. 2 : ಕುಂದಾಪುರದ ಕಮಲಶಿಲೆಯ ಕಾರ್ ಸ್ಟ್ರೀಟ್ ನ ವೆಂಕಟರಮಣ ರಾವ್ ಎಂಬುವರ ಮನೆಯಲ್ಲಿ 13 ಅಡಿ ಉದ್ದದ ವಿಷಪೂರಿತ ಕಾಳಿಂಗ ಸರ್ಪವೊಂದು ಗುರುವಾರ ಪ್ರತ್ಯಕ್ಷವಾಗಿದೆ.
ವೆಂಕಟರಮಣ ರಾವ್ ಅವರ ಮನೆಯಲ್ಲಿ ಅಡಗಿ ಕೂತಿದ್ದ ಸರ್ಪ ಮನೆಯವರ ಕಣ್ಣಿಗೆ ಬಿದ್ದಿದೆ. ಇದರಿಂದ ಗಾಬರಿಗೊಂಡ ಮನೆಯವರು ಕೂಡಲೇ ಸ್ಥಳೀಯರಿಗೆ ಸುದ್ದಿ ತಿಳಿಸಿದರು.[ಕಾರ್ಕಳ : ಹಾವು ಹಿಡಿಯಲು ಹೋಗಿ ಸಾವು ತಂದುಕೊಂಡ]
ಸುದ್ದಿ ಹರಿದಾಡುತ್ತಿದ್ದಂತೆ ಊರಿನ ಮಂದಿಯೆಲ್ಲಾ ವೆಂಕಟರಮಣ ಅವರ ಮನೆ ಮುಂದೆ ಹಾವು ನೋಡಲು ಮುಗಿಬಿದಿದ್ದರು.
ನಂತರ ಮನೆಯವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಕೃಷ್ಣಮೂರ್ತಿ ಹೆಬ್ಬಾರ್, ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಅರ್ಚಕರಾದ ರಾಘವೇಂದ್ರ ಜೋಗಿ ಮತ್ತು ಸ್ಥಳೀಯರು ಹಾವು ಹಿಡಿಯಲು ಸಹಾಯ ಮಾಡಿದರು.
ಹಾವನ್ನು ನೋಡುವ ಕುತೂಹಲದಿಂದ ಜನಜಂಗುಳಿ ನಿರ್ಮಾಣವಾಯಿತು. ಈ ಕಾಳಿಂಗ ಸರ್ಪ 13 ಅಡಿ ಉದ್ದ ಮತ್ತು 12 ಕೆಜಿ ತೂಕ ಇತ್ತು. ಈ ಗಾತ್ರದ ಸರ್ಪ ಕಾಣಸಿಗುವುದು ಅಪರೂಪವಾಗಿದೆ.