ಮಹಾಮಳೆ ಮತ್ತು ನೆರೆಗೆ ಉಡುಪಿ ಜಿಲ್ಲೆಯಲ್ಲಿ ಆದ ನಷ್ಟವೆಷ್ಟು?
ಉಡುಪಿ, ಸೆಪ್ಟೆಂಬರ್ 22: ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಂಭವಿಸಿದ ಮೇಘಸ್ಫೋಟ ಮತ್ತು ನಂತರದ ನೆರೆಗೆ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದ್ದು, ಅಂದಾಜು ನೂರು ಕೋಟಿ ನಷ್ಟ ಸಂಭವಿಸಿದೆ. ಹಲವೆಡೆ ನೆರೆ ಪರಿಸ್ಥಿತಿ ಮುಂದುವರಿದಿದ್ದು, ನಷ್ಟದ ಪೂರ್ಣ ಚಿತ್ರಣ ಇನ್ನಷ್ಟೇ ಸಿಗಬೇಕಿದೆ.
ಶನಿವಾರ ಮತ್ತು ಭಾನುವಾರದ ಮಳೆ ಸದ್ಯ ವಿರಾಮ ನೀಡಿದ್ದರೂ ನೆರೆಪೀಡಿತ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಮನೆ ಕಟ್ಟಿಕೊಂಡವರು ಇನ್ನೂ ಚೇತರಿಸಿಕೊಂಡಿಲ್ಲ. ನಿನ್ನೆ ಮಧ್ಯಾಹ್ನದ ಬಳಿಕ ಮತ್ತೆ ಮಳೆಯಾಗಿದ್ದು, ಆತಂಕ ಹೆಚ್ಚುವಂತೆ ಮಾಡಿದೆ. ಮುಖ್ಯವಾಗಿ ನಗರಸಭೆ ವ್ಯಾಪ್ತಿಯ ತಗ್ಗುಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡರು ಹೆಚ್ಚು ಸಮಸ್ಯೆ ಅನುಭವಿಸಿದ್ದಾರೆ.
ನಗರ ಸಭೆ ವ್ಯಾಪ್ತಿಯಲ್ಲೇ 35 ಕೋಟಿಗೂ ಹೆಚ್ಚು ನಷ್ಟ
ನಗರದ ಕಲ್ಸಂಕ, ಬೈಲಕೆರೆ, ಬನ್ನಂಜೆ, ಕೊಡಂಕೂರು, ಕೊಡವೂರು ಸಹಿತ ನಗರಸಭೆ ವ್ಯಾಪ್ತಿಯ ಹಲವು ಮನೆಗಳಿಗೆ, ಅಂಗಡಿಗಳಿಗೆ ನೆರೆಯ ನೀರು ನುಗ್ಗಿದ್ದು, ನಗರಸಭೆ ವ್ಯಾಪ್ತಿಯಲ್ಲೇ 35 ಕೋಟಿಗೂ ಹೆಚ್ಚು ನಷ್ಟವಾಗಿದೆ.
ಪ್ರವಾಹದ ಬಳಿಕ ಉಡುಪಿಯಲ್ಲಿ ಭೂಕುಸಿತದ ಭೀತಿ: ಅಪಾರ್ಟ್ ಮೆಂಟ್ ತೆರವು ಮಾಡಲು ಸೂಚನೆ
ಜಿಲ್ಲಾಡಳಿತಕ್ಕೆ ಇದೀಗ ಸವಾಲು
ಉಳಿದಂತೆ ಬ್ರಹ್ಮಾವರ, ಕಾಪು ಮತ್ತು ಕಾರ್ಕಳ ತಾಲೂಕುಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ನೆರೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದ್ದು, ಜಿಲ್ಲಾಡಳಿತ ಮತ್ತು ಸ್ಥಳೀಯಾಡಳಿತಕ್ಕೆ ರೋಗ ಹರಡದಂತೆ ಮುಂಜಾಗರೂಕತೆ ವಹಿಸುವುದೇ ಸವಾಲಾಗಿದೆ. ಕಾಪು ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಕಾಪು ಮಜೂರು ಎಂಬಲ್ಲಿ ರಮೇಶ್ ಕೋಟ್ಯಾನ್ ಅವರಿಗೆ ಸೇರಿದ ಮನೆಯೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕುಸಿದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಸ್ಥಳೀಯ ಪಂಚಾಯತ್ ನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂದಿನ ನಾಲ್ಕು ದಿನ ಮಳೆ ಮುನ್ಸೂಚನೆ
ಸದ್ಯ ಉತ್ತರಾ ಮಳೆ ಸಂಪೂರ್ಣ ಬಿಟ್ಟಿಲ್ಲ. ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿಯಲ್ಲಿ ತಣ್ಣಗಾದ ಮಳೆ; ಆದರೆ ನದಿ ಮಟ್ಟ ಕಡಿಮೆಯಾಗಿಲ್ಲ
ಇಂದು ಉಡುಪಿಯಲ್ಲಿ ರೆಡ್ ಅಲರ್ಟ್
ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಮತ್ತೆ ಮಳೆ ಆರಂಭವಾಗಿರುವುದು ಆತಂಕ ಮೂಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಸೆ. 22ಕ್ಕೆ ರೆಡ್ ಅಲರ್ಟ್, ಸೆ. 23ಕ್ಕೆ ಆರೆಂಜ್ ಅಲರ್ಟ್ ಮತ್ತು ಸೆ. 24ಕ್ಕೆ ಯಲ್ಲೊ ಅಲರ್ಟ್ ಘೋಷಿಸಲಾಗಿದೆ.
Recommended Video
ಭೂಕುಸಿತ; ಕಟ್ಟಡ ವಾಸಿಗಳಿಗೆ ತೆರವು ಮಾಡಲು ಸೂಚನೆ
ಮಳೆಯಿಂದ ಉಡುಪಿ ಮಣಿಪಾಲ ಮಧ್ಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭೂಕುಸಿತ ಆಗಿದೆ. ಕೆಲವು ಸಮಯದ ಹಿಂದೆಯಷ್ಟೇ ಉಡುಪಿ ಮಣಿಪಾಲ ಚತುಷ್ಫತ ರಸ್ತೆ ನಿರ್ಮಾಣಗೊಂಡಿತ್ತು. ಬೇಕಾಬಿಟ್ಟಿ ಗುಡ್ಡ ಕೊರೆದು, ಹೆದ್ದಾರಿ ಕಾಮಗಾರಿ ನಡೆಸಲಾಗಿದ್ದು, ಈಗ ಅದರ ದುಷ್ಪರಿಣಾಮ ಗೋಚರಿಸುತ್ತಿವೆ. ಸದ್ಯ ಭೂಕುಸಿತ ಜಾಗದ ಸುತ್ತಮುತ್ತ ಕಟ್ಟಡದಲ್ಲಿರುವ ಎಲ್ಲರಿಗೂ ಮನೆ ತೆರವು ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮುಂಜಾಗರೂಕತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿದೆ.