ಮಣಿಪಾಲದಲ್ಲಿ ಹತ್ತಕ್ಕೂ ಹೆಚ್ಚು ನಾಯಿಗಳ ಸಾವು
ಉಡುಪಿ, ಜೂನ್ 26: ಮಣಿಪಾಲದ ಮಾಂಡವಿ ಎಮೆರಾಲ್ಡ್ ಕಟ್ಟಡದ ಬಳಿ ನಾಯಿಗಳ ಮಾರಣ ಹೋಮ ನಡೆದ ಘಟನೆ ಬೆಳಕಿಗೆ ಬಂದಿದೆ. ಸುಮಾರು ಹತ್ತಕ್ಕೂ ಅಧಿಕ ನಾಯಿಗಳಿಗೆ ವಿಷ ಉಣಿಸಿ ಹತ್ಯೆ ಮಾಡಲಾಗಿದೆ. ಬೀದಿ ನಾಯಿಗಳ ಸಮಸ್ಯೆಯಿಂದ ಮುಕ್ತಿ ಪಡೆಯುವ ಉದ್ದೇಶದಿಂದ ಮೀನಿನಲ್ಲಿ ವಿಷ ಬೆರೆಸಿ ನಾಯಿಗಳಿಗೆ ಎಸೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಕೀಡಿಗೇಡಿಗಳ ಈ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮಣಿಪಾಲದ ಕೆಎಂಸಿ ಆವರಣದಲ್ಲಿ ಉರುಳಿದ ಮರ; ತಪ್ಪಿದ ಭಾರೀ ಅನಾಹುತ
ಉಡುಪಿ ನಗರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಇತ್ತೀಚೆಗೆ ಬೀದಿ ನಾಯಿಗಳಿಂದ ಸಾಕಷ್ಟು ಜನ ಕಚ್ಚಿಸಿಕೊಂಡು ಆಸ್ಪತ್ರೆಗೆ ಸೇರಿದ್ದೂ ಇದೆ. ಆದ್ದರಿಂದ ಬೀದಿ ನಾಯಿಗಳ ಕಾಟದಿಂದ ಮುಕ್ತಿ ಪಡೆಯಲೆಂದೇ ಬೀದಿ ನಾಯಿಗಳಿಗೆ ಮೀನಿನಲ್ಲಿ ವಿಷ ಬೆರೆಸಿ ಹಾಕಿ ನಾಯಿಗಳ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಪ್ರಾಣಿ ಪ್ರೇಮಿ ಬಬಿತಾ ಮಧ್ವರಾಜ್ ಅವರು ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಯಿಗಳನ್ನು ಕೊಂದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬೀದಿನಾಯಿಗಳ ಕಾಟದಿಂದ ಜನರ ಜೀವ ರಕ್ಷಿಸುವ ಕಡೆಗೂ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.