ನಾನು ಬೇಕೆಂದೇ ಕನ್ನಡ ಮಾತಾಡದಿದ್ರೆ ಗಲ್ಲಿಗೇರಿಸಿ: ಜಮೀರ್ ಅಹ್ಮದ್
ತುಮಕೂರು, ಜೂನ್ 9: ತಮಗೆ ಕನ್ನಡ ಸರಿಯಾಗಿ ಬರುವುದಿಲ್ಲ. ತಪ್ಪಾಗಿ ಹೇಳಬಹುದು ಎಂಬ ಕಾರಣದಿಂದ ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾಗಿ ಸಚಿವ ಜಮೀರ್ ಅಹ್ಮದ್ ಸ್ಪಷ್ಟೀಕರಣ ನೀಡಿದರು.
'ನಾನು ಓದಿರುವುದು ಇಂಗ್ಲಿಷ್ ಮಾಧ್ಯಮದಲ್ಲಿ. ಹೀಗಾಗಿ ಕನ್ನಡ ಅಷ್ಟು ಚೆನ್ನಾಗಿ ಬರುವುದಿಲ್ಲ. ಈ ಕಾರಣದಿಂದ ಪ್ರಮಾಣವಚನದ ಸಂದರ್ಭದಲ್ಲಿ ಇಂಗ್ಲಿಷ್ ಬಳಸಿದೆ' ಎಂದು ಅವರು ವಿವರಿಸಿದರು.
ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಮೀರ್ ಅಹ್ಮದ್
ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿ, ಸ್ವಾಮೀಜಿಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಜತೆಗೆ ಇಂಗ್ಲಿಷ್ನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಕ್ಕೆ ಕನ್ನಡದ ಜನತೆಯ ಕ್ಷಮೆ ಕೋರಿದರು.
ಕನ್ನಡ ಕಲಿಯದೆಯೇ ಇರುವುದು ನನ್ನ ದುರದೃಷ್ಟ. ನನ್ನ ಪೋಷಕರು ಕನ್ನಡ ಶಾಲೆಗೆ ನನ್ನನ್ನು ಸೇರಿಸಿರಲಿಲ್ಲ. ಕನ್ನಡಿದ ಜನತೆಗಿಂತ ದುಪ್ಪಟ್ಟು ನೋವು ನನಗಾಗಿದೆ.
'ನಾನು ಬೇಕೆಂದೇ ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾಗಿ ಅನೇಕರು ಆರೋಪಿಸುತ್ತಿದ್ದಾರೆ. ಆದರೆ, ಅದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಒಂದು ವೇಳೆ ಉದ್ದೇಶಪೂರ್ವಕವಾಗಿ ಕನ್ನಡದಲ್ಲಿ ಮಾತನಾಡದೆ ಇದ್ದರೆ ನನ್ನನ್ನು ಗಲ್ಲಿಗೇರಿಸಿ' ಎಂದು ಜಮೀರ್ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವೇಳೆ 24 ಶಾಸಕರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರೆ, ಜಮೀರ್ ಅಹಮದ್ ಮಾತ್ರ ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.
ಇದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಜಮೀರ್ ಅವರಿಗೆ ಕನ್ನಡ ಅಭಿಮಾನವಿಲ್ಲ ಎಂದು ಖಂಡಿಸಿದ್ದರು.
ಇನ್ನು ಟ್ವಿಟ್ಟರ್, ಫೇಸ್ಬುಕ್ಗಳಲ್ಲಿ ಜಮೀರ್ ಅವರ ಇಂಗ್ಲಿಷ್ ಭಾಷಣವನ್ನು ಲೇವಡಿ ಮಾಡಿ ಮೀಮ್ಗಳು ಹರಿದಾಡುತ್ತಿದ್ದವು. ಜಮೀರ್ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡಬೇಕು ಎಂದು ತಮಾಷೆಯ ಮಾತುಗಳು ಕೇಳಿಬಂದಿದ್ದವು.
ತಮಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ದೊರೆತಿರುವುದು ಸಂತಸ ಉಂಟುಮಾಡಿದೆ.
ಈ ಖಾತೆಯ ನಿರ್ವಹಣೆಯಲ್ಲಿ ಯಾವುದೇ ಅನುಭವ ಇಲ್ಲ. ಆದರೆ, ಮುಂದಿನ ಐದು ವರ್ಷಗಳಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸುವಂತಹ ಕೆಲಸಗಳನ್ನು ಮಾಡುತ್ತೇನೆ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಮಾತನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಮಾಜಿ ಪ್ರಧಾನಿ. ರಾಜ್ಯದಲ್ಲಿ ಸಮಸ್ಯೆಗಳು ಎದುರಾದಾಗ ಅವರ ಮಾತು ಕೇಳಬೇಕು ಎಂದು ಹೇಳಿದರು.