ಜಯಚಂದ್ರ ಅವರೇ ಇದೇನ್ರೀ ನಿಮ್ಮ ಜಿಲ್ಲೆಯಲ್ಲಿ ಇಂಥ ಅಸಹ್ಯ?
ತುಮಕೂರು, ಸೆಪ್ಟೆಂಬರ್ 9: ಈ ಘಟನೆ ಬಗ್ಗೆ ಗಂಭೀರವಾದ ತನಿಖೆ ಆಗಲೇಬೇಕು. ಏಕೆಂದರೆ ಲೈಂಗಿಕ ಕಿರುಕುಳ, ಲಂಚಕ್ಕೆ ಒತ್ತಾಯ ಮಾಡುತ್ತಾರೆ ಎಂದು ಆರೋಪಿಸಿರುವುದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ, ಆರೋಪ ಎದುರಿಸುತ್ತಿರುವುದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶಮೀಮ್ ಉನ್ನೀಸಾ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರೇ ಆರೋಪಿಸುತ್ತಿರುವ ಹಾಗೆ, ರಾತ್ರಿ 10 ಗಂಟೆ ನಂತರ ಮನೆಗೆ ದೂರವಾಣಿ ಕರೆ ಮಾಡಿ, ಅಶ್ಲೀಲವಾಗಿ ಮಾತನಾಡುತ್ತಾರೆ. ಸಾಂಸಾರಿಕ ಜೀವನಕ್ಕೆ ತೊಂದರೆಯಾಗಿದೆ. ಮತ್ತು ಹೀಗೆ ತೊಂದರೆ ನೀಡುತ್ತಿರುವ ವ್ಯಕ್ತಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ.[ತುಮಕೂರಲ್ಲಿ ಟೂಲ್ ಪಾರ್ಕ್ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ]
ಇನ್ನೂ ಮುಂದುವರಿದು, ಸೆಪ್ಟೆಂಬರ್ 3ರಂದು ಜಿ.ಸುಬ್ರಹ್ಮಣ್ಯ ಮನೆಗೆ ಬರುವಂತೆ ಕರೆದರು. ಮನೆಗೆ ಹೋದಾಗ ಅವರ ಪತ್ನಿಯ ಎದುರಲ್ಲೇ ಅಶ್ಲೀಲವಾಗಿ ಮಾತನಾಡಿದರು. ಏಪ್ರಿಲ್ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಹಣ ಕೊಡಬೇಕು ಎಂದು ಹೇಳಿ ₹2 ಲಕ್ಷ ಪಡೆದರು ಎಂದಿದ್ದಾರೆ.
ಈ ಮಹಿಳಾ ಅಧಿಕಾರಿ ಹೇಗೆ ಹಣ ಹೊಂದಿಸಿಕೊಟ್ಟರು ಎಂಬುದು ಕೂಡ ಆಕೆಯೇ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ನನ್ನ ಮಗನ ಸಂಬಳದಲ್ಲಿ ಹಣ ಹೊಂದಿಸಿದ್ದೀನಿ. ಅಂಬೇಡ್ಕರ್ ಜಯಂತಿಗೆ ₹50 ಸಾವಿರ ಕೊಟ್ಟಿದ್ದೀನಿ. ಇಷ್ಟು ಹಣ ಕೊಟ್ಟರೂ 4 ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಂದ ತಿಂಗಳಿಗೆ ತಲಾ ₹10 ಸಾವಿರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.[ತುಮಕೂರು : ಸಿದ್ದಗಂಗಾ ನಗರ ಸಾರಿಗೆಗೆ 32 ಬಸ್ ಸೇರ್ಪಡೆ]
ಶಮೀಮ್ ಉನ್ನೀಸಾ ಅವರು ಕರ್ಚೀಫ್ ನಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಕಚೇರಿಯಲ್ಲಿದ್ದ ಸಿಬ್ಬಂದಿ ರಕ್ಷಿಸಿದ್ದಾರೆ.
ಹಣ ಕೊಡದಿದ್ದರೆ ನೋಟಿಸ್: ಪ್ರತಿ ತಿಂಗಳು ಹಣ ಕೊಡಲ್ಲ ಅಂದರೆ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನ ಅಂತ ಕಾರಣ ಕೇಳಿ ನೋಟಿಸ್ ನೀಡುತ್ತಾರೆ. ಫೆಬ್ರವರಿಯಲ್ಲಿ ಹೀಗೇ ಹಣ ಕೊಡಲ್ಲ ಅಂದಾಗ ಆ ತಿಂಗಳ ಬಿಲ್ ತಡೆದರು. ಕೇಳಿದ್ದಕ್ಕೆ, ನೀವು ಬಿಲ್ ಕೊಟ್ಟೇ ಇಲ್ಲ. ಯಾಕೆ ಲೇಟ್ ಆಯಿತು ಅಂತ ಕಾರಣ ಕೇಳಿ ನೋಟಿಸ್ ಕೊಟ್ಟರು ಎಂದು ಶಮೀಮ್ ಉನ್ನೀಸಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇಷ್ಟೇ ಅಲ್ಲ, 6 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಮೀಟಿಂಗ್ ಮುಗಿಸಿ ಬರುವಾಗ ದಾಬಸ್ಪೇಟೆ ಹೋಟೆಲ್ವೊಂದರಲ್ಲಿ ಜ್ಯೂಸ್ಗೆ ಮದ್ಯ ಬೆರೆಸಿ, ಕುಡಿಸಲು ಬಂದರು. ಶಿರಾ, ಕೊರಟಗೆರೆ ತಾಲ್ಲೂಕಿನಲ್ಲೂ ಅಧಿಕಾರಿಗಳಿಗೆ ಇದೇ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.[ಪಾವಗಡದ ಅಂಗಡಿಗಳಲ್ಲಿ ಪೆನ್, ಪೆನ್ಸಿಲ್ ಜತೆಗೆ ಎಣ್ಣೆಯೂ ಮಾರ್ತಾರೆ]
ಆದರೆ, ಸುಬ್ರಹ್ಮಣ್ಯ ಹೇಳೋದೇ ಬೇರೆ. ಇಲಾಖೆಯಲ್ಲಿ ಹಣ ದುರುಪಯೋಗವಾಗಿದೆಯಲ್ಲ ಎಂದು ಸಹಾಯಕಿ ನಿರ್ದೇಶಕಿಯನ್ನು ಪ್ರಶ್ನಿಸಿದೆ. ಅವ್ಯವಹಾರ ಬಯಲಿಗೆ ಬರುತ್ತದೆ ಅಂತ ಹೆದರಿ ನನ್ನ ಮೇಲೆ ವಿನಾಕಾರಣ ಆರೋಪ ಮಾಡಿದ್ದಾರೆ ಎಂದಿದ್ದಾರೆ. ಇದೇನೇ ಇರಲಿ ನಿಯತ್ತಾಗಿ ಒಂದು ತನಿಖೆ ಆಗಲೇಬೇಕು, ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲೇಬೇಕು