ತುಮಕೂರು ಗ್ರಾಮಾಂತರ: ಕಾಂಗ್ರೆಸ್ ನಿಂದ ಕೆಎನ್ ರಾಜಣ್ಣ ಮಗ ರಾಜೇಂದ್ರ?
ತುಮಕೂರು, ನವೆಂಬರ್ 11: ತುಮಕೂರು ಗ್ರಾಮಾಂತರ ಕ್ಷೇತ್ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಜಿದ್ದಾಜಿದ್ದಿ ಕಾಣುವ ಎಲ್ಲ ಲಕ್ಷಣಗಳಿವೆ. ಸದ್ಯಕ್ಕೆ ಅಲ್ಲಿನ ಶಾಸಕರಾಗಿರುವ ಬಿಜೆಪಿಯ ಬಿ.ಸುರೇಶ್ ಗೌಡ ಅವರೇ ಕಮಲ ಪಕ್ಷದ ಅಭ್ಯರ್ಥಿ ಎಂಬುದರಲ್ಲಿ ಎರಡು ಮಾತಿಲ್ಲ. ಎರಡು ಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿರುವ ಸುರೇಶ್ ಗೌಡ ಹಾದಿ ಈ ಸಲ ಸಲೀಸಲ್ಲ.
ಆದರೆ, ಈ ಬಾರಿ ಜೆಡಿಎಸ್ ನಿಂದ ಪಕ್ಷದ ಜಿಲ್ಲಾಧ್ಯಕ್ಷರಾದ ಸಿ.ಚನ್ನಿಗಪ್ಪ ಅವರ ಮಗ ಡಿ.ಸಿ.ಗೌರಿಶಂಕರ್ ಸ್ಪರ್ಧೆ ಕೂಡ ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ನ ವಿಚಾರಕ್ಕೆ ಬಂದರೆ ಮಧುಗಿರಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ಮಗ ರಾಜೇಂದ್ರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಸಿಟ್ಟಾಗಿರುವ ತುಮಕೂರಿನ ಸೊಗಡು ಶಿವಣ್ಣ ಮೌನದ ಹಿಂದೆ ಜ್ವಾಲಾಮುಖಿ
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಒನ್ಇಂಡಿಯಾ ಕನ್ನಡ ರಾಜೇಂದ್ರ ಅವರನ್ನು ಸಂಪರ್ಕಿಸಿದಾಗ, ಹೌದು. ನಾನು ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ" ಎಂಬುದನ್ನು ಸ್ಪಷ್ಟಪಡಿಸಿದರು.
ಇನ್ನು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರೆ ಎಂದು ಕೇಳಿಬರುತ್ತಿರುವ ಮತ್ತೊಂದು ಹೆಸರು ಎಚ್.ನಿಂಗಪ್ಪ ಅವರದು. ಈ ಇಬ್ಬರ ಹೆಸರನ್ನೂ ಹೊರತುಪಡಿಸಿ ಮತ್ತೊಬ್ಬರು ಸ್ಪರ್ಧಾಕಾಂಕ್ಷಿಯೂ ಇದ್ದಾರೆ.
ಬಿಜೆಪಿಯಿಂದ ಎರಡು ಬಾರಿ ಗೆದ್ದಿದ್ದಾರೆ
ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಬಿ.ಸುರೇಶ್ ಗೌಡ ಹೆಬ್ಬೂರು, ನಾಗವಲ್ಲಿ, ಗೂಳೂರು ಸುತ್ತಮುತ್ತ ತುಂಬ ಒಳ್ಳೆ ಕೆಲಸ ಮಾಡಿದ್ದಾರೆ ಎಂಬ ಹೆಸರಿದೆ. ಆದರೆ ಇದೇ ಮಾತನ್ನು ವಿಧಾನಸಭಾ ಕ್ಷೇತ್ರದ ಇತರೆಡೆ ಆಡುವುದಿಲ್ಲ. ಈ ಸಲ ಬಿಜೆಪಿ ಟಿಕೆಟ್ ಸುರೇಶ್ ಗೌಡ ಅವರಿಗೇ ಪಕ್ಕಾ. ಆದರೆ ಗೆಲುವು ಸಲೀಸಲ್ಲ.
ಜೆಡಿಎಸ್ ನಿಂದ ಚನ್ನಿಗಪ್ಪರ ಮಗ ಖಾತ್ರಿ
ಜೆಡಿಎಸ್ ನ ತುಮಕೂರು ಜಿಲ್ಲಾಧ್ಯಕ್ಷ- ಮಾಜಿ ಸಚಿವ ಸಿ.ಚನ್ನಿಗಪ್ಪ ಅವರ ಮಗ ಡಿ.ಸಿ.ಗೌರಿಶಂಕರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಟಿಕೆಟ್ ಘೋಷಣೆ ವಿಚಾರವಾಗಿ ಸ್ವಲ್ಪ ಗೊಂದಲ ಏರ್ಪಟ್ಟಿದ್ದರಿಂದ ಇಂಥ ಫಲಿತಾಂಶ ಎದುರಿಸಬೇಕಾಯಿತು ಅನ್ನೋದು ಪಕ್ಷದ ಮೂಲಗಳ ಮಾತು. ಈ ಬಾರಿ ಹಾಗಾಗುವುದಿಲ್ಲ ಅಂತಲೂ ಸೇರಿಸುತ್ತಾರೆ.
ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ಸಿಗಬಹುದು?
ಮಧುಗಿರಿಯ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಮಗ ರಾಜೇಂದ್ರಗೆ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಇದೆ. ಈ ಬಗ್ಗೆ 'ಒನ್ಇಂಡಿಯಾ ಕನ್ನಡ'ಕ್ಕೂ ಅವರು ಸ್ಪಷ್ಟಪಡಿಸಿದರು. ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಜತೆಗೆ ಗುರುತಿಸಿಕೊಂಡವರು. ಮತ್ತು ಆಪ್ತರು. ವಿಧಾನಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿರುವ ರಾಜೇಂದ್ರಗೆ ಶತಾಯಗತಾಯ ಗೆಲ್ಲುವ ಛಲ ಇದೆ. ಜತೆಗೆ ಗ್ರಾಮಾಂತರ ಭಾಗದಲ್ಲಿ ರಾಜಣ್ಣ ಅವರ ಪ್ರಭಾವ ಬೀರುವುದು ಸಹ ಕಷ್ಟವಾಗಲಾರದು.
ಟಿಕೆಟ್ ಪೈಪೋಟಿ ಸ್ಪಷ್ಟವಾಗಿ ಗೋಚರಿಸುತ್ತಿದೆ
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳ ಪ್ರಾಬಲ್ಯ ಹೆಚ್ಚು. 2008ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ನಿಂಗಪ್ಪ ಅವರು 32,500 ಮತ ಪಡೆದಿದ್ದರು. ಇನ್ನು ಕಳೆದ ಬಾರಿಯ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಅವರು 22,700 ಮತ ಪಡೆದಿದ್ದರು.
ರಾಜೇಂದ್ರ ಹಾಗೂ ನಿಂಗಪ್ಪ ಅಲ್ಲದೆ ಪ್ರಸನ್ನಕುಮಾರ್ ಎಂಬುವವರ ಹೆಸರು ಕೇಳಿಬರುತ್ತಿದೆ. ಆದರೂ ಸಿದ್ದರಾಮಯ್ಯ ಅವರಿಗೆ ಆಪ್ತರು ಎನಿಸಿರುವ ರಾಜಣ್ಣ ಮಗ ರಾಜೇಂದ್ರಗೆ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.
ಕಾಂಗ್ರೆಸ್ ವರಿಷ್ಠರಿಂದ ಟಿಕೆಟ್ ಯಾರಿಗೆ ಎಂಬ ತೀರ್ಮಾನ
ಕಾಂಗ್ರೆಸ್ ನಿಂದ ನಿಂಗಪ್ಪ ಅವರು ಸ್ಪರ್ಧಿಸುವ ಸಾಧ್ಯತೆ ಬಗ್ಗೆ ರಾಜೇಂದ್ರ ಅವರನ್ನು ಪ್ರಶ್ನಿಸಿದರೆ, ಟಿಕೆಟ್ ವಿಚಾರ ನಿರ್ಧಾರ ಆಗುವುದು ಪಕ್ಷದ ವರಿಷ್ಠರಿಂದ. ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಕೇಳಿಯೇ ಅಂತಿಮ ತೀರ್ಮಾನ ಆಗುತ್ತದೆ. ಆ ಹಂತದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ತೀರ್ಮಾನ ಆಗುತ್ತದೋ ಅದನ್ನು ಗೌರವಿಸುತ್ತೇನೆ ಎನ್ನುತ್ತಾರೆ.