ಸಿದ್ದು ಆಪ್ತ ರಾಜಣ್ಣ ಜೆಡಿಎಸ್ ಸೇರ್ತಾರಾ: ಎಚ್ ಡಿಕೆ ಮಾತಿನ ಅರ್ಥವೇನು?
ಗುಬ್ಬಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದ ಎಚ್ ಡಿ ಕುಮಾರಸ್ವಾಮಿ, ಜಿಲ್ಲೆಯ ಕಾಂಗ್ರೆಸ್ ನ ಪ್ರಮುಖ ಶಾಸಕರೊಬ್ಬರು ಜೆಡಿಎಸ್ ಸೇರಲು ಉತ್ಸಾಹದಲ್ಲಿದ್ದಾರೆ ಎಂದಿದ್ದು, ಅದು ಮಧುಗಿರಿ ಶಾಸಕ ಕೆಎನ್ ರಾಜಣ್ಣ ಎಂಬ ಮಾತು ಹರಿದಾಡುವಂತಾಗಿದೆ
ಸಿಎಸ್ ಪುರ, ಏಪ್ರಿಲ್ 25: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿಎಸ್ ಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ನವರಿಗೆ ಒಂದು ಹುಳ ಬಿಟ್ಟಿದ್ದಾರೆ. ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಶಾಸಕ, ತಮ್ಮ ಕ್ಷೇತ್ರದಲ್ಲಿ 450 ಕೋಟಿ ರುಪಾಯಿ ಕೆಲಸ ಮಾಡಿಸಿದ್ದೀನಿ ಅನ್ನೋರು ಜೆಡಿಎಸ್ ಗೆ ಸೇರಬೇಕು ಅಂತಿದ್ದಾರೆ ಎಂದಿದ್ದಾರೆ.
ಸಭೆಯಲ್ಲಿ ಅವರು ಅದು ಯಾರು ಅಂತ ಹೆಸರು ಹೇಳದಿರಬಹುದು. ಆದರೆ ಅದು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಒಂದು ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ನ ಪ್ರಮುಖ ಶಾಸಕರು ಹಾಗೂ ಇಷ್ಟು ಪ್ರಮಾಣದ ದುಡ್ಡಿನ ಕೆಲಸ ಆಗಿದೆ ಎಂದು ಮಾತನಾಡುವವರಿದ್ದರೆ ಅದು ರಾಜಣ್ಣನವರೇ ಎಂಬುದು ಸುಲಭಕ್ಕೆ ಸಿಗುವ ಉತ್ತರ.[ಹಸಿದ ಅನ್ನದಾತರ ಹೊಟ್ಟೆ ತುಂಬಿಸಲಿದೆ ಡಿಸಿಸಿ ಬ್ಯಾಂಕ್: ಕೆಎನ್ನಾರ್]
ಇನ್ನು ಕೆಲ ಸಭೆ-ಸಮಾರಂಭಗಳಲ್ಲಿ ಜೆಡಿಎಸ್ ನ ಹೊಗಳಿದ್ದ ರಾಜಣ್ಣನವರಿಗೆ ಕಾಂಗ್ರೆಸ್ ನಲ್ಲಿ ಸಚಿವರನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಮುನಿಸಿದೆಯಾ, ಸಚಿವ ಜಯಚಂದ್ರ ವಿರುದ್ಧ ಧುಸುಮುಸು ಎನ್ನುತ್ತಿರುವ ಅವರಿಗೆ ಕಾಂಗ್ರೆಸ್ ಬಗ್ಗೆಯೇ ರೇಜಿಗೆ ಬಂದಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ಅವರು ಅಷ್ಟು ಸಲೀಸಾಗಿ ಜೆಡಿಎಸ್ ಸೇರ್ತಾರಾ?['ನಾನು ಹೇಗೆ ಸಿಎಂ ಆಗಲಿಲ್ಲವೋ ಅದೇ ಥರ ರಾಜಣ್ಣ ಸಚಿವರಾಗಲಿಲ್ಲ']
ಈ ಬಗ್ಗೆ ಕೆಎನ್ ರಾಜಣ್ಣ ಅವರಿಂದಲೇ ಅಭಿಪ್ರಾಯ ಪಡೆಯೋಣ ಎಂಬ ಕಾರಣಕ್ಕೆ ಒನ್ ಇಂಡಿಯಾ ಕನ್ನಡ ಸಂಪರ್ಕಿಸಲು ಯತ್ನಿಸಿದಾಗ ಕರೆ ಸ್ವೀಕರಿಸಲಿಲ್ಲ. ಆದರೆ ಎಚ್ ಡಿ ಕುಮಾರಸ್ವಾಮಿ ಅವರ ಮಾತು ಮಧುಗಿರಿ ಕ್ಷೇತ್ರದಲ್ಲಿ ಅಷ್ಟೇ ಅಲ್ಲ, ಇಡಿ ತುಮಕೂರಿನಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.