ಮಹಿಳೆಗೆ ಮರು ಜೀವ ನೀಡಿದ ತುಮಕೂರು ಸಿದ್ಧಾರ್ಥ ಆಸ್ಪತ್ರೆ
ತುಮಕೂರು, ಸೆಪ್ಟೆಂಬರ್ 26 : ಕಾಲುಗಳ ಸ್ವಾಧೀನ ಕಳೆದುಕೊಂಡು ಮಲಗಿದ್ದಲ್ಲಿಯೇ ಮಲಗಿದ್ದ ಮಹಿಳೆ ತುಮಕೂರಿನ ಸಿದ್ಧಾರ್ಥ ವೈದ್ಯ ಕಾಲೇಜಿನ ವೈದ್ಯರ ತಂಡದ ಸಾಹಸದಿಂದ ಮತ್ತೆ ನಡೆದಾಡುವಂತಾಗಿದೆ.
ಹೌದು..ಕಾಲುಗಳ ಸ್ವಾಧೀನ ಕಳೆದುಕೊಂಡು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದ ಗುಬ್ಬಿ ತಾಲ್ಲೂಕಿನ ಭೈರಮ್ಮ (40) ಎನ್ನುವರ ಬೆನ್ನುಮೂಳೆಗೆ ಅತ್ಯಂತ ಅಪರೂಪದ ಹಾಗೂ ಗಂಭೀರವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ, ಮತ್ತೆ ಆ ಮಹಿಳೆ ಸ್ವತಂತ್ರವಾಗಿ ನಡೆಯುವಂತೆ ಮಾಡಿದ ಶ್ರೇಯಸ್ಸಿಗೆ ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪಾತ್ರವಾಗಿದೆ.
ಪೌರಕಾರ್ಮಿಕ, ಬೀಗದ ಕೀ ದುರಸ್ತಿಗಾರನಿಗೆ ದೃಷ್ಟಿ ಬಂದ ಕತೆ
ಇಂತಹುದೊಂದು ಮಹತ್ತರವಾದ ಶಸ್ತ್ರಚಿಕಿತ್ಸೆಯನ್ನು ತುಮಕೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ನೆರವೇರಿಸಲಾಗಿದೆಯೆಂಬುದು ಹಾಗೂ ಮಿಗಿಲಾಗಿ ಉಚಿತವಾಗಿ ಮಾಡಲಾಗಿದೆಯೆಂಬುದು ಸಿದ್ಧಾರ್ಥ ಮೆಡಿಕಲ್ ಕಾಲೆಜಿನ ಹೆಗ್ಗಳಿಕೆಯನ್ನು ದುಪ್ಪಟ್ಟುಗೊಳಿಸಿದೆ.
ಕೀಲು ಮತ್ತು ಮೂಳೆ ವಿಭಾಗದ ಮೂರನೇ ಘಟಕದ ಮುಖ್ಯಸ್ಥ ಡಾ. ಬಿ.ಎಂ.ಮುರಳೀಧರ್ ನೇತೃತ್ವದ ವೈದ್ಯರ ತಂಡದ ಸಾಹಸಕ್ಕೆ ಸಾರ್ಥಕತೆಯನ್ನು ತಂದುಕೊಟ್ಟಿದೆ. ಭೈರಮ್ಮ ಇತ್ತೀಚಿಗೆ ಸಿದ್ಧಾರ್ಥ ಆಸ್ಪತ್ರೆಯ ಕೀಲು ಮತ್ತು ಮೂಳೆ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು.
ಭೈರಮ್ಮಳನ್ನು ತಪಾಸಣೆ ನಡೆಸಿದ ಡಾ. ಬಿ.ಎಂ. ಮುರಳೀಧರ್
ಕಾಲುಗಳ ಬೆರಳುಗಳನ್ನು ಸಹಾ ಆಡಿಸಲಾಗದಷ್ಟು ಚಿಂತಾಜನಕ ಸ್ಥಿತಿಯಲ್ಲಿ ಭೈರಮ್ಮಳನ್ನು ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ. ಬಿ.ಎಂ. ಮುರಳೀಧರ್ ಸಂಪೂರ್ಣವಾಗಿ ತಪಾಸಣೆ ನಡೆಸಿ, ಎಂ.ಆರ್.ಐ. ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದರು. ಆಗ ರೋಗಿಯ ಬೆನ್ನಿನ ಒಂದು ಮೂಳೆಯು ಬಲೂನ್ ರೀತಿಯಲ್ಲಿ ಹಿಗ್ಗಿದ್ದು, ಆ ಮೂಳೆಯು ಬೆನ್ನುಹುರಿ ಮತ್ತು ನರಕೋಶಗಳ ಮೇಲೆ ಸಂಪೂರ್ಣ ಒತ್ತಡ ಉಂಟುಮಾಡಿ ಬೆನ್ನುಹುರಿಯು ನಿಸ್ತೇಜ ಹಂತವನ್ನು ತಲುಪಿರುವುದು ಕಂಡುಬಂದಿದೆ.
ಒಂದೂವರೆ ಗಂಟೆಗಳ ಕಾಲ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ
ವೈದ್ಯಕೀಯ ಭಾಷೆಯಲ್ಲಿ ವರ್ಟಿಬ್ರಲ್ ಹೆಮಾಂಜಿಯೋಮ ಎಂದು ಕರೆಯಲ್ಪಡುವ ಈ ರೋಗದ ಗಂಭೀರತೆಯನ್ನು ಮನಗಂಡ ಡಾ ಮುರಳೀಧರ್ ವಿಭಾಗದ ಮತ್ತೋರ್ವ ಮುಖ್ಯಸ್ಥ ಡಾ. ಶ್ರೀಧರ್ ಅವರೊಡನೆ ಸಮಾಲೋಚಿಸಿ, ಡಾ. ಬಿ.ಕೆ.ರವಿ, ಡಾ ಟೆಡ್ಡಿ, ಡಾ. ಗಂಗಾಧರ್, ಡಾ. ಪ್ರಕಾಶ್ ಅವರ ಸಹಕಾರದೊಂದಿಗೆ ಒಂದೂವರೆ ಗಂಟೆಗಳ ಕಾಲ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದರು.
ಚಿಕಿತ್ಸೆಗೆ 3 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದ ಬೇರೊಂದು ಆಸ್ಪತ್ರೆ
ಇದಕ್ಕೂ ಮೊದಲು ಭೈರಮ್ಮ ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಾಗ, ಅಲ್ಲಿನ ವೈದ್ಯರು ಸಂಪೂರ್ಣ ಚಿಕಿತ್ಸೆಗೆ 3 ಲಕ್ಷ ರು. ವೆಚ್ಚವಾಗುತ್ತದೆ ಹಾಗೂ ರೋಗವು ಗುಣಮುಖವಾಗುವ ಬಗ್ಗೆ ಖಚಿತ ಪಡಿಸುವುದಿಲ್ಲವೆಂದು ಹೇಳಿದ್ದರು. ಇದರಿಂದ ಹತಾಶರಾದ ಭೈರಮ್ಮ ಸಿದ್ಧಾರ್ಥ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ರೋಗಿಯು ಸೂಕ್ತ ಔಷಧೋಪಚಾರ ಮತ್ತು ದೈಹಿಕ ವ್ಯಾಯಾಮದಿಂದ ಗುಣಮುಖರಾಗುತ್ತಿದ್ದು, ಸ್ವತಂತ್ರವಾಗಿ ನಡೆದಾಡುವಂತಾಗಿದ್ದಾರೆ.
ಮಾನವೀಯತೆ ಮೆರೆದ ಆಸ್ಪತ್ರೆ
ರೋಗಿಯ ಆರ್ಥಿಕ ಪರಿಸ್ಥಿತಿಯನ್ನು ಮನಗಂಡ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ವೈದ್ಯರ ತಂಡವು ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಿ ಮಾನವೀಯತೆ ಮೆರೆದಿದೆ.
ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ತಂಡಕ್ಕ ಅಭಿನಂದನೆ
ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ರೋಗಿಯು ಮತ್ತೆ ನಡೆದಾಡುವಂತಾಗಲು ಕಾರಣರಾದ ವೈದ್ಯರ ತಂಡವನ್ನು ಆಸ್ಪತ್ರೆಯ ನಿರ್ದೇಶಕ ಹಾಗೂ ಕುಲಪತಿ ಡಾ. ಜಿ. ಶಿವಪ್ರಸಾದ್, ಪ್ರಾಚಾರ್ಯ ಡಾ. ಪ್ರಭಾಕರ್, ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ. ಕಿರಣ್ ಕಾಳಯ್ಯ ಅವರು ಅಭಿನಂದಿಸಿದ್ದಾರೆ.