ಸಿದ್ದಗಂಗಾ ಶ್ರೀಗಳ ಭೇಟಿಗೆ ತೆರಳಿದ್ದ ಯಡಿಯೂರಪ್ಪನವರಿಗೆ ಕಾದಿತ್ತು ಅಚ್ಚರಿ!
Recommended Video
ತುಮಕೂರು, ಡಿಸೆಂಬರ್ 07: ಅನಾರೋಗ್ಯದಿಂದ ಬಳಲುತ್ತಿರುವ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಭೇಟಿಯಾಗಲು ಹೋದಾಗ ಅಚ್ಚರಿಯೊಂದು ಕಾದಿತ್ತು!
ಶ್ರೀಗಳ ಆರೋಗ್ಯ ವಿಚಾರಿಸಲು ಹೋದ ಯಡಿಯೂರಪ್ಪ ಅವರನ್ನೇ ಶ್ರೀಗಳು 'ನೀವು ಹೇಗಿದ್ದೀರಿ' ಎಂದು ವಿಚಾರಿಸಿದರು! ಶ್ರೀಗಳು ನಿರೀಕ್ಷೆಯನ್ನೂ ಮೀರಿ ಲವಲವಿಕೆಯಿಂದಿರುವುದನ್ನು ಕಂಡು ಯಡಿಯೂರಪ್ಪ ಅವರು ಚಕಿತರಾದರು!
ಶಿವಕುಮಾರ ಸ್ವಾಮೀಜಿ ವೈದ್ಯಲೋಕದ ಅಚ್ಚರಿಯೆಂದು ಡಾಕ್ಟರ್ ಬೆರಗಾದರೇಕೆ?
ಯಡಿಯೂರಪ್ಪ ಅವರಲ್ಲದೆ, ಬಿಜೆಪಿ ಮುಖಂಡ ವಿ ಸೋಮಣ್ಣ ಮತ್ತು ಇನ್ನಿತರ ಹಲವು ಗಣ್ಯರು ಸ್ವಾಮೀಜಿ ಅವರನ್ನು ಭೇಟಿಯಾಗುತ್ತಿದ್ದಾರೆ. ರಾಜ್ಯದ ನಾನಾ ಕಡೆಯಿಂದ ಮಠಕ್ಕೆ ಭಕ್ತರು ಜಮಾಯಿಸುತ್ತಿದ್ದು, ಶ್ರೀಗಳ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.
|
'ನೀವು ಹೇಗಿದ್ದೀರಿ' ಎಂದರು ಸ್ವಾಮೀಜಿ!
ಶುಕ್ರವಾರ ಬೆಳಿಗ್ಗೆ ಮಠಕ್ಕೆ ತೆರಳಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಶ್ರೀಗಳನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಶ್ರೀಗಳು ಬೆಳಿಗ್ಗೆ ಉಪಹಾರ ಸೇವಿಸಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಅವರು ಲವಲವಿಕೆಯಿಂದಿದ್ದಾರೆ. ಅವರೇ ನನ್ನ ಆರೋಗ್ಯ ವಿಚಾರಿಸಿದರು' ಎಂದರು. ಈ ಕುರಿತು ಟ್ವೀಟ್ ಸಹ ಮಾಡಿರುವ ಯಡಿಯೂರಪ್ಪ, ಶ್ರೀಗಳ ಲವಲವಿಕೆ ಕಂಡು ಅಚ್ಚರಿಯಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ.
|
ಚೆನ್ನೈನಲ್ಲಿ ಹೆಚ್ಚಿನ ಚಿಕಿತ್ಸೆ
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ 111 ವರ್ಷ ವಯಸ್ಸಿನ ಸ್ವಾಮೀಜಿ ಅವರ ಹೃದಯದಲ್ಲಿ ಅಳವಡಿಸಲಾದ 11 ಸ್ಟೆಂಟ್ ಗಳನ್ನು ಬದಲಿಸುವ ಅಗತ್ಯವಿದೆ. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲಾಗುತ್ತಿದೆ. ಚೆನ್ನೈನ ಪ್ರತಿಷ್ಠಿತ ರೇಲಾ ಇನ್ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲು ಸಕಲ ಸಿದ್ಧತೆ ನಡೆದಿದೆ.
ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಬೇಡ: ಚೆನ್ನೈಗೆ ವೈದ್ಯರ ತಂಡ
ವಿಶೇಷ ಕೊಠಡಿಯಲ್ಲಿ ಮಠದ ವಾತಾವರಣ
ರೇಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆಂದೇ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಈ ಕೊಠಡಿಯಲ್ಲಿ ಮಠದ ರೀತಿಯ ವಾತಾವರಣ ನಿರ್ಮಿಸಿ, ಶ್ರೀಗಳಿಗೆ ಪೂಜೆ ಮಾಡಲೂ ಅವಕಾಶ ಮಾಡಿಕೊಡಲಾಗುತ್ತಿದೆ! ಸ್ವಾಮೀಜಿಗಳ ದರ್ಶನಕ್ಕೆಂದು ಇಂದು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತ ಸಾಗರವೇ ಹರಿದುಬರುತ್ತಿದೆ.ಸ್ವಾಮೀಜಿ ಅವರನ್ನು ಚೆನ್ನೈಗೆ ಕರೆದೊಯ್ದು, ನಂತರ ಪರೀಕ್ಷಿಸಿ ಯಾವರೀತಿಯ ಚಿಕಿತ್ಸೆಯ ಅಗತ್ಯವಿದೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಬೆಳಿಗ್ಗೆ 10.20ಕ್ಕೆ ತಮ್ಮ್ ಕಾರಿನಲ್ಲಿ ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ ಎಂದು ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್ ಹೇಳಿದ್ದಾರೆ.
|
'ನನ್ನ ವಯಸ್ಸೆಷ್ಟು' ಎಂದರು ಸ್ವಾಮೀಜಿ!
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಗುರುವಾರ ಮಠಕ್ಕೆ ತೆರಳಿ ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ಈ ಸಂದರ್ಭದಲ್ಲಿ ಪರಮೇಶ್ವರ್ ಅವರ ಬಳಿಯಲ್ಲಿ ಶ್ರೀಗಳು 'ನನಗೀಗ ಎಷ್ಟು ವಯಸ್ಸು?' ಎಂದು ಮುಗ್ಧವಾಗಿ ಪ್ರಶ್ನಿಸಿದ್ದರು. ಅದಕ್ಕೆ ಪರಮೇಶ್ವರ್, '111 ವರ್ಷ' ಎಂದರು. ಆಗ ಸ್ವಾಮೀಜಿ, 'ಓಹ್ ಸುಮಾರಾಯ್ತು' ಎಂದರು. ಈ ಸಂಭಾಷಣೆಯನ್ನು ಪರಮೇಶ್ವರ್ ಅವರು ನಂತರ ಪತ್ರಕರ್ತರೊಂದಿಗೆ ಹಂಚಿಕೊಂಡರು.