ತುಮಕೂರು: ರೈಸ್ ಮಿಲ್ ಮಾಲೀಕ ಹಾಗೂ ಪತ್ನಿ ಕೊಲೆ
ತುಮಕೂರು, ಮಾರ್ಚ್ 14: ಇಲ್ಲಿನ ಅಶೋಕನಗರದ ನಿವಾಸಿ ಉದ್ಯಮಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರೈಸ್ಮಿಲ್ ಮಾಲೀಕ ಎಸ್.ಡಿ.ಗೋಪಾಲ್ (60) ಹಾಗೂ ಅವರ ಪತ್ನಿ ರೂಪಾ ಗೋಪಾಲ್ ಅವರನ್ನು ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಭಾನುವಾರ ತಡರಾತ್ರಿ ನಡೆದ ಈ ಘಟನೆಯಿಂದ ಮಹಾನಗರ ಬೆಚ್ಚಿದೆ.
ಮೇಲ್ನೋಟಕ್ಕೆ ಇದು ಈ ಜೋಡಿ ಕೊಲೆಗೆ ಆಸ್ತಿ ಕಲಹವೇ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಈ ಘಟನೆಗೂ ಮುನ್ನ ದಂಪತಿಯ ಮಗ ಧೀರಜ್ ವಿವಾಹ ಸಂಬಂಧ ಮನೆಯಲ್ಲಿ ಮಾತುಕತೆ, ಜಗಳ, ಮುನಿಸು, ವೈಮನಸ್ಯ ಉಂಟಾಗಿತ್ತು.
ತಂದೆ ತಾಯಿಯೊಂದಿಗೆ ಗಲಾಟೆ ಮಾಡಿಕೊಂಡು ಧೀರಜ್ ತೀವ್ರ ಆಕ್ರೋಶದಿಂದ ಹೊರ ಹೋಗಿದ್ದ. ನಂತರ ಮನೆಗೆ ವಾಪಸ್ ಬಂದಾಗ ತಂದೆತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಸ್ನೇಹಿತರಿಗೆ ಸುದ್ದಿ ಮುಟ್ಟಿಸಿ ನಂತರ ಎನ್ಇಪಿಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಳೆದ ಒಂದು ವಾರದಿಂದ ಮನೆ ನವೀಕರಣ ಕಾರ್ಯ ನಡೆಸಲಾಗುತ್ತಿದ್ದು, ಆದರೆ, ಈಗ್ಗೆ ಎರಡು ದಿನಗಳಿಂದ ಈ ಕಾರ್ಯ ಸ್ಥಗಿತಗೊಳಿಸಲಾಗಿತು. ಈ ಹತ್ಯೆ ಪೂರ್ವ ನಿಯೋಜಿತವಾಗಿದೆ, ಆಸ್ತಿ ಕಲಹವೇ ಕಾರಣ ಎಂದು ದೂರಿನಲ್ಲಿ ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಎನ್ಇಪಿಎಸ್ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಜು, ಚಿದಾನಂದಸ್ವಾಮಿ, ಎಎಸ್ಪಿ ಮಂಜುನಾಥ್ ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಎನ್ಇಪಿಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.