2 ಲಕ್ಷ ಲಂಚ ಕೇಳಿ ಸಿಕ್ಕಿಬಿದ್ರು ತುಮಕೂರು ಕಾರ್ಪೊರೇಟರ್ ಕರುಣಾರಾಧ್ಯ
ತುಮಕೂರು, ಅಕ್ಟೋಬರ್ 14: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಂಚ ಪಡೆಯುವಾಗ ಕಾರ್ಪೊರೇಟರ್ ಕರುಣಾರಾಧ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚನ್ನಬಸವಾರಾಧ್ಯ ಹಾಗೂ ಕಿರಿಯ ಎಂಜಿನಿಯರ್ ವಿಶ್ವನಾಥ್ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಆದರೆ, ಇವರು ಭ್ರಷ್ಟಾಚಾರಕ್ಕೆ ಅನುಸರಿಸಿದ ದಾರಿ ಭಯ ಹುಟ್ಟಿಸುವಂತಿದೆ. ಈ ಬಗ್ಗೆ ಪ್ರತ್ಯೇಕವಾಗಿ ದೂರು ದಾಖಲಿಸಿಕೊಂಡು, ಹೆಚ್ಚಿನ ತನಿಖೆ ಆಗಬೇಕು. ಇನ್ನೂ ಎಷ್ಟು ಮಂದಿಗೆ ಹೀಗೇ ಮಾಡಿದ್ದಾರೆ ಎಂಬುದು ಬೆಳಕಿಗೆ ಬರಬೇಕಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಕಟ್ಟಬೇಕು ಎಂದು ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಆಗ ಚನ್ನಬಸವಾರಾಧ್ಯ ಕಟ್ಟಡ ಕಾಮಗಾರಿ ಶುರು ಮಾಡಿ ಎಂದು ಬಾಯಿ ಮಾತಿನಲ್ಲಿ ಹೇಳಿಕಳುಹಿಸಿದ್ದಾರೆ.[ಉಬರ್ ಚಾಲಕನಿಂದ ಲಂಚ, ನಾಲ್ವರು ಪೊಲೀಸರ ಅಮಾನತು!]
ಏನೋ ಅಧಿಕಾರಿ ಹೇಳಿದರಲ್ಲಾ ಎಂದು ಅವರು ಕಟ್ಟಡ ಕಾಮಗಾರಿ ಆರಂಭಿಸಿ, ಒಂದು ಅಂತಸ್ತಿನ ಕೆಲಸ ಪೂರ್ಣವಾಗಿದೆ. ಆ ನಂತರ ನಕ್ಷೆ ಮಂಜೂರಾತಿ ಬಗ್ಗೆ ಚನ್ನಬಸವಾರಾಧ್ಯ ಹಾಗೂ ವಿಶ್ವನಾಥ್ ಬಳಿ ವಿಚಾರಿಸಿದ್ದಾರೆ. ಆಗ ವರಾತ ಆರಂಭವಾಗಿದೆ. ಕಾರ್ಪೋರೇಟರ್ ಕರುಣಾರಾಧ್ಯ ಕೂಡ ಇವರ ಜತೆಗೆ ಸೇರಿ, ಎರಡು ಲಕ್ಷ ರುಪಾಯಿ ಲಂಚ ಕೇಳಿದ್ದಾರೆ. ಕೊಡದಿದ್ದರೆ ಹೊಸ ಮನೆ ಕೆಡವಬೇಕಾಗುತ್ತದೆ ಅಂತ ಧಮಕಿಯೂ ಹಾಕಿದ್ದಾರೆ.[ಲಂಚ ಪಡೆಯುವಾಗ ಎಸಿಬಿ ಕೈಗೆ ಸಿಕ್ಕಿಬಿದ್ದ ಮಾಜಿ ಸಚಿವರ ಪಿಎ]
ಬೇಸತ್ತ ಮನೆ ಮಾಲೀಕರು, ಎಸಿಬಿಗೆ ದೂರು ನೀಡಿದ್ದಾರೆ. ಅಕ್ಟೋಬರ್ 13ರಂದು ಲಂಚದ ಮೊದಲ ಕಂತು ನಲವತ್ತು ಸಾವಿರ ರುಪಾಯಿ ಪಡೆಯುವಾಗ ಕಾರ್ಪೊರೇಟರ್ ಕರುಣಾರಾಧ್ಯ, ಕಿರಿಯ ಎಂಜಿನಿಯರ್ ವಿಶ್ವನಾಥ್ ನನ್ನು ವಶಕ್ಕೆ ಪಡೆಯಲಾಗಿದೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚನ್ನಬಸವಾರಾಧ್ಯ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.