ತುಮಕೂರು: ಪ್ರೀತಿಗೆ ಜಾತಿ ಅಡ್ಡಿ, ವಿಡಿಯೋ ಅಪ್ಲೋಡ್ ಮಾಡಿ ಯುವಕ ಆತ್ಮಹತ್ಯೆ
ತುಮಕೂರು, ಜುಲೈ 03: ಪ್ರೀತಿಗೆ ಜಾತಿ ಅಡ್ಡ ಬಂದಿತೆಂದು ನೊಂದ ಪ್ರೇಮಿಯೊಬ್ಬ ಫೇಸ್ಬುಕ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕ್ಯಾತಸಂದ್ರದ ನಿವಾಸಿ ರಾಘವೇಂದ್ರ (26), ತುರುವೇಕೆರೆಯ ಯುವತಿಯನ್ನು ಐದು ವರ್ಷಗಳಿಂದಲೂ ಪ್ರೀತಿಸುತ್ತಿದ್ದ ಆಕೆಯೂ ಈತನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಯುವತಿಯ ಮನೆಗೆ ಹೋಗಿ ಆಕೆಯ ತಂದೆಯ ಬಳಿ ಮದುವೆಗೆ ಅನುಮತಿಯನ್ನೂ ರಾಘವೇಂದ್ರ ಕೇಳಿದ್ದ.
ಫೇಸ್ಬುಕ್ನಲ್ಲಿ ಸೆಲ್ಪೀ ವಿಡಿಯೋ ಹಾಕಿ ಭಗ್ನ ಪ್ರೇಮಿ ಆತ್ಮಹತ್ಯೆ
ಆದರೆ ಬ್ರಾಹ್ಮಣ ಸಮುದಾಯದವರಾದ ಯುವತಿಯ ತಂದೆ ಅನ್ಯ ಜಾತಿಯ ರಾಘವೇಂದ್ರನಿಗೆ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಾರೆ. ಅಲ್ಲದೆ ಇನ್ನು ಮುಂದೆ ಆಕೆಯ ತಂಟೆಗೆ ಬರಬಾರದೆಂದು ಮನೆಯ ಹತ್ತಿರವೂ ಸುಳುಯಬಾರದೆಂದು ಎಚ್ಚರಿಸಿ ಕಳುಹಿಸಿದ್ದಾರೆ.
ಪ್ರೀತಿ ಧಕ್ಕದಿದುದ್ದಕ್ಕೆ ಬೇಸರಗೊಂಡಿದ್ದ ರಾಘವೇಂದ್ರ ನಿನ್ನೆ ರಾತ್ರಿ ಫೇಸ್ಬುಕ್ನಲ್ಲಿ ತನ್ನ ಹೇಳಿಕೆಯ ವಿಡಿಯೋ ಒಂದನ್ನು ಹಾಕಿ ಆ ನಂತರ ನೇಣಿಗೆ ಕೊರಳೊಡ್ಡಿದ್ದಾನೆ.
ಸಾಯುವ ಮುಂಚೆ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಜಾತಿಯ ಮೇಲೆ ಸಿಟ್ಟು ಹೊರಹಾಕಿರುವ ರಾಘವೇಂದ್ರ, 'ಯಾಕೆ ಜಾತಿ ಜಾತಿ ಎಂದು ಸಾಯುತ್ತೀರಿ, ಸತ್ತಾಗ ಜಾತಿಯನ್ನೇನು ಹೊತ್ತುಕೊಂಡು ಹೋಗುತ್ತೀಯಾ?' ಎಂದು ಯುವತಿಯ ತಂದೆಯನ್ನುದ್ದೇಶಿಸಿ ಪ್ರಶ್ನಿಸಿದ್ದಾನೆ.
ಮುಂದುವರೆದು 'ಇನ್ನು ಯಾವತ್ತೂ ನಿನ್ನ ಮನೆ ಮುಂದೆ ಬರಲ್ಲ ಎಂದು ಹೇಳಿದ್ದೇನೆ. ಆದರೆ ಆ ರೀತಿ ನಡೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಾನು ಬದುಕಿದ್ದರೆ ಅವಳನ್ನು ನೋಡಲು ಬಂದೇ ಬರುತ್ತೇನೆ. ನೀನು ಆಗ ಅವಳಿಗೆ ಹೊಡೆಯುವುದು, ಅವಳು ನೋವು ಅನುಭವಿಸುವುದು ತಪ್ಪುವುದಿಲ್ಲ. ಹಾಗಾಗಿ ನಾನು ಸಾಯುತ್ತೇನೆ ಅವಳು ನೋವು ಅನುಭವಿಸುವುದು ಬೇಡ, ನಾನಿನ್ನು ನಿನ್ನ ಮಗಳ ತಂಟೆಗೆ ಬರಲ್ಲಾ, ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ, ಎಲ್ಲಿದ್ದರೂ ಅವಳು ಚೆನ್ನಾಗಿರಲಿ' ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.