ಊಟ, ನೀರು ಕೊಡದೇ ಚಿತ್ರಹಿಂಸೆ ಕೊಟ್ಟು ಲಾರಿ ಚಾಲಕನ ಹತ್ಯೆ
ತುಮಕೂರು, ಡಿಸೆಂಬರ್ 14 : ಲಾರಿ ಮಾಲೀಕನೊಬ್ಬ ಚಾಲಕನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಮತ್ತೊಬ್ಬ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆಯಾದ ಚಾಲಕನನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲದ ಬಸಪ್ಪ (38) ಎಂದು ಗುರುತಿಸಲಾಗಿದೆ. ಸೋಮಪ್ಪ (35) ಅಸ್ವಸ್ಥಗೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಕುಟುಂಬ ಕಲಹದಲ್ಲಿ ಇಬ್ಬರು ಮಕ್ಕಳನ್ನೇ ಉಸಿರುಗಟ್ಟಿಸಿ ಕೊಂದ ತಾಯಿ
ಲಾರಿ ಮಾಲೀಕ ಬಾಳಪ್ಪ ಮತ್ತು ಆತನ ಸಹಚರರು ಬಸಪ್ಪನನ್ನು ಕಂಟೈನರ್ನಲ್ಲಿ ಮೂರು ದಿನಗಳ ಕಾಲ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಊಟ ಮತ್ತು ನೀರು ಕೊಡದೇ ಸತಾಯಿಸಿದ್ದಾರೆ. ಇದರಿಂದಾಗಿ ಬಸಪ್ಪ ಸಾವನ್ನಪ್ಪಿದ್ದಾರೆ.
ಮತ್ತೊಬ್ಬ ಚಾಲಕ ಸೋಮಪ್ಪ ಮೇಲೆಯೂ ಹಲ್ಲೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೊಲೆಯಾದ ಚಾಲಕ ಬಸಪ್ಪ ಪತ್ನಿ ತುಮಕೂರಿನ ಶಿರಾ ಪೊಲೀಸ್ ಠಾಣೆಗೆ ಬಾಳಪ್ಪ ಮತ್ತು ಆತನ ಸಹಚರರ ವಿರುದ್ಧ ದೂರು ನೀಡಿದ್ದಾರೆ.
ಪಿರಿಯಾಪಟ್ಟಣದಲ್ಲಿ ಡಾಕ್ಟರ್ ಉಸಿರುಗಟ್ಟಿಸಿ ಕೊಲೆ
ಹತ್ಯೆ ಮಾಡಿದ್ದು ಏಕೆ? : ಬಾಳಪ್ಪ ಎರಡಕ್ಕೂ ಹೆಚ್ಚು ಕಂಟೈನರ್ ಲಾರಿಗಳನ್ನು ಹೊಂದಿದ್ದಾರೆ. ಡಿಸೆಂಬರ್ 11ರಂದು ಶಿರಾ ಸಮೀಪ ಲಾರಿ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದು ಜಖಂಗೊಂಡಿತ್ತು.
ಸ್ಥಳಕ್ಕೆ ಬಂದಿದ್ದ ಬಾಳಪ್ಪ ಮತ್ತು ಆತನ ಸಹಚರರು ಕಂಟೈನರ್ ಚಾಲಕನಾಗಿದ್ದ ಬಸಪ್ಪಗೆ ಥಳಿಸಿದ್ದರು. ಬಳಿಕ ರಸ್ತೆ ಬದಿಯಲ್ಲಿ ನಿಂತಿದ್ದ ಕಂಟೈನರ್ನಲ್ಲಿ ಅವರನ್ನು ಕೂಡಿ ಹಾಕಿ ಥಳಿಸಿದ್ದರು. ಊಟ, ನೀರು ಸಹ ನೀಡಿರಲಿಲ್ಲ. ಇದರಿಂದಾಗಿ ಬಸಪ್ಪ ಮೃತಪಟ್ಟಿದ್ದಾರೆ.