ತಿಪಟೂರು ಶಾಸಕ ಷಡಕ್ಷರಿ ಆವಾಜ್ ಆಡಿಯೋ ಸಕತ್ ವೈರಲ್
Recommended Video
ತಿಪಟೂರು (ತುಮಕೂರು ಜಿಲ್ಲೆ) ಏಪ್ರಿಲ್ 4: ತಿಪಟೂರಿನ ಕಾಂಗ್ರೆಸ್ ಶಾಸಕ ಷಡಕ್ಷರಿ ತನ್ನದೇ ಪಕ್ಷದ ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾರಾಯಣ್ ಗೆ ಆವಾಜ್ ಹಾಕಿದ್ದಾರೆ ಎನ್ನಲಾದ ಆಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ. ವಿಧಾನಸಭೆ ಚುನಾವಣೆ ಘೋಷಣೆ ಆದ ನಂತರ ಇಂಥ ಆಡಿಯೋ ಹರಿದಾಡುತ್ತಿರುವುದು ಚರ್ಚೆಗೂ ಕಾರಣವಾಗಿದೆ.
ಹೊನ್ನವಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಸದಸ್ಯ ಜಿ.ನಾರಾಯಣ್ ಮೊಬೈಲ್ ಗೆ ಶಾಸಕ ಷಡಕ್ಷರಿ ಕರೆ ಮಾಡಿದಾಗ ಅಸಾಂವಿಧಾನಿಕ ಪದ ಬಳಸಿ ಬಾಯಿಗೆ ಬಂದಂತೆ ಬೈದಿದ್ದಾರೆ.
'ಮುಳುಗುತ್ತಿರುವ ಕಾಂಗ್ರೆಸ್ ಹಡಗು ಉಳಿಸಲು ಸಿದ್ದು ಶತಪ್ರಯತ್ನ'
ಜಿ. ನಾರಾಯಣ್ ಬದಲು ಮೊಬೈಲ್ ಕರೆ ಸ್ವೀಕರಿಸಿದ್ದ ಅರ್ಜುನ್ ಶಾಸಕರ ಜೊತೆ ಮಾತಿಗಿಳಿದಾಗ, ಶಾಸಕ ಷಡಕ್ಷರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗೋದಿಲ್ಲ ಎಂದು ಜಿ. ನಾರಾಯಣ್ ಹೋದ ಕಡೆಯಲ್ಲೆಲ್ಲಾ ಹೇಳುತ್ತಿದ್ದಾನಂತೆ. ಅವನಿಗೆ ಹೇಳು ಎಲ್ಲಾದರೂ ನನ್ನ ಹೆಸರು ಎತ್ತಿದರೆ ನಾಲಿಗೆ ಕೀಳಿಸಿ ಬಿಡ್ತೇನೆ. ತಿಪಟೂರಿನಿಂದ ಒದ್ದು ಓಡಿಸ್ತೀನಿ ಎಂದು ಷಡಕ್ಷರಿ ಆವಾಜ್ ಹಾಕಿರುವುದಾಗಿ ಆಡಿಯೋ ಹರಿದಾಡುತ್ತಿದೆ.
ನನ್ನ ಒಂದು ಮುಖ ನೋಡಿದ್ದೀರಾ, ಇನ್ನೊಂದು ಮುಖ ನೋಡಿಲ್ಲ. ನನ್ನ ಬೆಂಬಲಿಗರನ್ನು ಬಿಟ್ಟು ಹೊಡೆಸುತ್ತೇನೆ. ಹಳ್ಳಿ ಹಳ್ಳಿಯಲ್ಲಿ ಓಡಾಡಿಸ್ಕೊಂಡು ಹೊಡಿಸ್ತೀನಿ. ಇದು ಮರ್ಯಾದೆಯ ಎಚ್ಚರಿಕೆ. ಹೊಡೆಯೋದಿಕ್ಕೆ ಪಾರ್ಟಿ ಮಿಟಿಂಗ್ ನಲ್ಲಿ ಕಾರ್ಯಕರ್ತರಿಗೆ ಹೇಳ್ತೀನಿ. ಆಶ್ರಯ ಕೊಟ್ಟಿರೋನು ನಾನೇ, ಕೊನೆಗೆ ತೆಗೆಯೋನು ನಾನೇ ಎಂದು ವಾರ್ನಿಂಗ್ ನೀಡಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಮಗನಾಗಿ ಇರ್ತೇನೆ ಅಂತ ಆಣೆ ಮಾಡಿದ್ದ. ನನ್ನ ಮನೆ ಕಸ ಗುಡಿಸೋದಿಕ್ಕೂ ಲಾಯಕ್ ಇಲ್ಲ ಎಂದು ಆಡಿಯೋದಲ್ಲಿ ತೆಗಳಲಾಗಿದೆ. ಈ ಆಡಿಯೋ ಕ್ಲಿಪ್ಪಿಂಗ್ ಬಗ್ಗೆ ಅಭಿಪ್ರಾಯ ಕೇಳಲು ಒನ್ಇಂಡಿಯಾ ಕನ್ನಡ ಷಡಕ್ಷರಿ ಅವರ ಮೊಬೈಲ್ ಫೋನ್ ಗೆ ಕರೆ ಮಾಡಿದಾಗ, ಶಾಸಕರು ರಾಹುಲ್ ಗಾಂಧಿ ಅವರ ಕಾರ್ಯಕ್ರಮದಲ್ಲಿದ್ದಾರೆ ಎಂಬ ಉತ್ತರ ಸಿಕ್ಕಿತು.