ಅಂತ್ಯಸುಬ್ರಹ್ಮಣ್ಯ ಪಾವಗಡದ ನಾಗಲಮಡಿಕೆಯಲ್ಲಿ ರಥೋತ್ಸವ
ನಾಗಲಮಡಿಕೆ, ಜನವರಿ 4: ಅಂತ್ಯ ಸುಬ್ರಹ್ಮಣ್ಯ ಎಂದೇ ಹೆಸರಾದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆಯ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ ನಡೆಯುತ್ತದೆ.
ಬುಧವಾರ ಬೆಳಗ್ಗೆ ಮೀನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣಿಗೆ ದವನ ಸಿಕ್ಕಿಸಿ ರಥಕ್ಕೆ ತೂರಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸೇರಿದಂತೆ ನೆರೆಯ ಆಂಧ್ರ ಮತ್ತಿತರ ಕಡೆಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ರಥೋತ್ಸವಕ್ಕಾಗಿ ಬಂದಿದ್ದರು.[ನಾಗಲ ಮಡಿಕೆಗೆ ನಡೆದುಕೊಂಡರೆ ನಾಗ ದೋಷ ಪರಿಹಾರ!]
ಮಡೆ ಸ್ನಾನ-ಎಡೆ ಸ್ನಾನ ನಡೆಯದಂತೆ ಬ್ರಾಹ್ಮಣ ಸಂತರ್ಪಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಬಂದೋಬಸ್ತ್ ಕೂಡ ಇತ್ತು. ರಥೋತ್ಸವದ ಅಂಗವಾಗಿ ಬೆಳಗಿನ ಜಾವ ನಾಲ್ಕರ ವೇಳೆ ಪೂಜಾ ಕೈಂಕರ್ಯಗಳು ಆರಂಭವಾದವು. ನವಿಲು ವಾಹನೋತ್ಸವ, ಸಿಂಹ ವಾಹನೋತ್ಸವ ನಡೆದವು.
ಸಾವಿರಾರು ಸಂಖ್ಯೆಯಲ್ಲಿ ಜನರು ಜಾತ್ರೆಗಾಗಿ ಬರುತ್ತಾರೆ. ಆದರೂ ಮುಜರಾಯಿ ಇಲಾಖೆಯಿಂದ ಭಕ್ತರಿಗೆ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಏನೆಂದರೆ ಏನೂ ವ್ಯವಸ್ಥೆ ಮಾಡಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.