ತುಮಕೂರಿನಲ್ಲಿ ಒಂದಾದರು ಶಿವಣ್ಣ- ಬಸವರಾಜ್, ಬಿಜೆಪಿಗೆ ಶುಭ ಸುದ್ದಿ!
Recommended Video
ತುಮಕೂರು, ಮಾರ್ಚ್ 17: "ಸಮಾಜದ ಮುಖಂಡರಿಗಿಂತ ನಾನು ದೊಡ್ಡವನಲ್ಲ. ಅವರು ಹೇಳಿದ ಮಾತಿಗೆ ತಲೆ ಬಾಗಿದ್ದೇನೆ. ನಾನು ಹಾಗೂ ಜಿ.ಎಸ್.ಬಸವರಾಜ್ ಅವರ ಮಧ್ಯೆ ಸ್ವಲ್ಪ ಮಟ್ಟಿಗೆ ಅಸಮಾಧಾನ ಇದ್ದದ್ದು ಹೌದು. ಸಮಾಜದ ಏಳ್ಗೆಗಾಗಿ ನೀವಿಬ್ಬರೂ ಅದನ್ನು ಮರೆಯಬೇಕು ಅಂತ ಹೇಳಿದಾಗ ತಲೆ ಬಾಗಿಸಿ ಒಪ್ಪಿಕೊಂಡಿದ್ದೇನೆ" ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸೊಗಡು ಶಿವಣ್ಣ ಶನಿವಾರ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮಾಜಿ ಸಂಸದ ಜಿ.ಎಸ್.ಬಸವರಾಜು- ಅವರ ಮಗ, ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್ ಜತೆಗೆ ಸೊಗಡು ಶಿವಣ್ಣ ಮತ್ತಿತರರ ಅಸಮಾಧಾನ ಇತ್ತು. ಇದೇ ವಿಚಾರ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಉಲ್ಟಾ ಹೊಡೆಯಬಹುದು ಎಂಬುದೇ ಹಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯ ಆಗಿತ್ತು.
ಶುಕ್ರವಾರದಂದು ತುಮಕೂರಿನಲ್ಲಿ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಬಸವೇಶ್ವರ, ಸಿದ್ದರಾಮೇಶ್ವರ ಹಾಗೂ ರೇಣುಕಾ ಜಯಂತಿ ಆಚರಣೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಸೊಗಡು ಶಿವಣ್ಣ ಹಾಗೂ ಜಿ.ಎಸ್.ಬಸವರಾಜ್ ಇಬ್ಬರೂ ಹಾಜರಿದ್ದರು. ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಮುಖಂಡರು ಇಬ್ಬರಿಗೂ ಪರಸ್ಪರರಿಂದ ಹಾರ ಹಾಕಿಸಿ, ಕೈ ಕುಲುಕುವಂತೆ ಮಾಡಿ, ಮುಂದೆ ಒಂದಾಗಿ ಹೋಗುವಂತೆ ಮನವಿ ಮಾಡಿದ್ದಾರೆ.
ತಲೆನೋವಾಗಿದ್ದ ಸಮಸ್ಯೆಗೆ ಒಂದು ಪರಿಹಾರ
ತುಮಕೂರು ಜಿಲ್ಲೆಯಲ್ಲಿ ತಲೆ ಎತ್ತಿದ್ದ, ಅದರಲ್ಲೂ ನಗರ ಕ್ಷೇತ್ರದಲ್ಲಿ ತಲೆ ನೋವಾಗಿದ್ದ್ ಸಮಸ್ಯೆಗೆ ಒಂದು ಪರಿಹಾರ ಸಿಕ್ಕಂತಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಮೊದಲೇ ವಿವಾದ ಎದ್ದಿದ್ದು, ಸಮಾಜದ ಮತಗಳನ್ನು ವಿಭಜನೆ ಆಗದಂತೆ ತಡೆಯುವ ಅನಿವಾರ್ಯ ಒಂದು ಕಡೆ ಇದ್ದರೆ, ಪಕ್ಷದೊಳಗಿನ ವ್ಯಕ್ತಿಗತ ಅಸಮಾಧಾನ ಬಗೆಹರಿಸಿಕೊಳ್ಳುವುದು ಕೂಡ ಜಿಲ್ಲೆಯಲ್ಲಿ ಅನಿವಾರ್ಯ ಆಗಿತ್ತು.
ಸಾರ್ವಜನಿಕ ಹಾಗೂ ಪಕ್ಷದ ವೇದಿಕೆಗಳಲ್ಲಿ ಆಸಮಾಧಾನ ಹೊರಕ್ಕೆ
ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ, ಪಕ್ಷದ ವೇದಿಕೆಗಳಲ್ಲಿ ಸೊಗಡು ಶಿವಣ್ಣ ಮತ್ತಿತರ ಮುಖಂಡರು ಜಿಲ್ಲೆಯಲ್ಲಿನ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಕಳೆದ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣವಾದ ಕೆಜೆಪಿ ಹಾಗೂ ಅದರಲ್ಲಿನ ನಾಯಕರನ್ನು ತಮ್ಮ ತಲೆ ಮೇಲೆ ತಂದು ಕೂರಿಸಲಾಗಿದೆ ಎಂಬುದು ಅವರ ಆಕ್ಷೇಪವಾಗಿತ್ತು.
ತುಮಕೂರಿನಲ್ಲಿ ಭಯದ ವಾತಾವರಣ: ಸೊಗಡು ಶಿವಣ್ಣ
ನನಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗುವುದು ನೂರಕ್ಕೆ ನೂರರಷ್ಟು ಖಚಿತ. ಈಗಾಗಲೇ ನಾನು ಪ್ರಚಾರ ಶುರು ಮಾಡಿದ್ದೀನಿ. ತುಮಕೂರು ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಜಾರಿ ಮಾಡಿದ್ದ, ಮಂಜೂರು ಮಾಡಿಸಿಕೊಂಡಿದ್ದ ಯೋಜನೆಗಳು ಬಿಟ್ಟರೆ ಯಾವುದೂ ಹೊಸ ಯೋಜನೆ ಬಂದಿಲ್ಲ ಎನ್ನುತ್ತಾರೆ ಸೊಗಡು ಶಿವಣ್ಣ.
ಈ ರೀತಿ ಹಣ ಚೆಲ್ಲುವುದು ಎಂಥ ನೈತಿಕತೆ?
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಕೋಟಿಗಟ್ಟಲೆ ದುಡ್ಡು ಖರ್ಚು ಮಾಡುತ್ತಿದ್ದಾರೆ. ಈ ರೀತಿ ಹಣ ಚೆಲ್ಲುವುದು ಎಂಥ ನೈತಿಕತೆ? ಜನರಿಗೂ ಈ ಬಗ್ಗೆ ಅರಿವಿದೆ. ಇನ್ನು ಕಾಂಗ್ರೆಸ್ ನ ಶಾಸಕರು ನಗರದಲ್ಲಿ ಯಾವುದೇ ಕೆಲಸ ಮಾಡಿಲ್ಲ ಅನ್ನೋದೂ ಗೊತ್ತಿದೆ. ನನ್ನ ಬದ್ಧತೆ ಬಗ್ಗೆ ಹೊಸದಾಗಿ ಸಾಬೀತು ಪಡಿಸಬೇಕಾದ್ದು ಏನಿಲ್ಲ. ಈಗ ನಡೆದಿರುವ ಬೆಳವಣಿಗೆ (ಜಿಎಸ್ ಬಿ ಜತೆಗೆ ಕೈ ಜೋಡಿಸಿರುವುದು) ಪಕ್ಷಕ್ಕೆ ಶುಭ ಸೂಚನೆ ಎಂದು ಶಿವಣ್ಣ ಹೇಳಿದರು.