ಸಿಟ್ಟಾಗಿರುವ ತುಮಕೂರಿನ ಸೊಗಡು ಶಿವಣ್ಣ ಮೌನದ ಹಿಂದೆ ಜ್ವಾಲಾಮುಖಿ
ತುಮಕೂರು, ನವೆಂಬರ್ 10: ತುಮಕೂರಿನಲ್ಲಿ ಬಿಜೆಪಿ- ಕೆಜೆಪಿ ಎಂಬ ಒಡಕು ಇನ್ನೂ ಸರಿಹೋಗಿಲ್ಲ ಎಂಬುದು ಸ್ಪಷ್ಟವಾಗಿದೆ. ತುಮಕೂರು ನಗರ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದು, ಸಚಿವರಾಗಿಯೂ ಕೆಲಸ ಮಾಡಿದ ಸೊಗಡು ಶಿವಣ್ಣ ಅವರ ಆಕ್ರೋಶಕ್ಕೆ ಹೊಸ ರೂಪ ಸಿಕ್ಕಿದ್ದು, ಅದು ದೆಹಲಿವರೆಗೆ ಮುಟ್ಟಿರುವ ಬಗ್ಗೆ ಗುಲ್ಲೆದ್ದಿದೆ.
ಅಸಲಿಗೆ ಸೊಗಡು ಶಿವಣ್ಣ ಸಿಟ್ಟಿಗೆ ಕಾರಣ ಏನು? ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸದಿರಲು ಕಾರಣ ಏನು ಅಂತ ನೋಡಿದರೆ, ಅಲ್ಲೂ ಎದುರಾಗುವುದು ಅದೇ ಕೆಜೆಪಿ ಮಾನ್ಯತೆ. ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡು, ಬಿಜೆಪಿಗೆ ನಿಷ್ಠರಾಗಿರುವ ಶಿವಣ್ಣ ಅವರಿಗೆ ಮಾಜಿ ಸಂಸದ ಜಿ.ಎಸ್.ಬಸವರಾಜ್ ಅವರ ಮಗ ಜ್ಯೋತಿಗಣೇಶ್ ರನ್ನು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ನೋಡುವುದೇ ಅಸಹನೀಯವಾಗಿದೆ.
ಸೊಗಡು ಶಿವಣ್ಣನ ಬೇಟೆಯಾಡಲು ಮತ್ತೆ ಬಿಲ್ಲು ರೆಡಿ ಮಾಡಿಕೊಂಡ ಬಿಎಸ್ ವೈ
ಇನ್ನು ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮುಂಚೂಣಿಯಲ್ಲಿ ಇವರನ್ನು ನೋಡಲು ಸಾಧ್ಯವಿತ್ತೆ? ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದ ಜಿಲ್ಲೆಗಳ ಪೈಕಿ ತುಮಕೂರಿನ ಜ್ಯೋತಿ ಗಣೇಶ್ ಹೆಸರೂ ಇತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರದಿಂದ ಕೆಜೆಪಿಯಿಂದ ಸ್ಪರ್ಧಿಸಿದ್ದ ಜ್ಯೋತಿಗಣೇಶ್ ರನ್ನು ಯಡಿಯೂರಪ್ಪ ಅಧ್ಯಕ್ಷರನ್ನಾಗಿ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗ್ಗೆ ಕರೆ ಮಾಡಿ ಬರಹೇಳಿದ್ದಾರೆ
ಮೊನ್ನೆಯ ಪರಿವರ್ತನಾ ಯಾತ್ರೆಯಲ್ಲಿ ಅದೂ ಬೆಳಗ್ಗೆ ಸೊಗಡು ಶಿವಣ್ಣ ಅವರಿಗೆ ಕರೆ ಮಾಡಿ, ಯಡಿಯೂರಪ್ಪನವರು ಬರಹೇಳಿದ್ದಾರೆ. ಆದರೆ ಹಿಂದಿನ ದಿನದ ಬಿಎಸ್ ವೈ ವರ್ತನೆಯಿಂದ ಅದಾಗಲೇ ಸಿಟ್ಟಾಗಿದ್ದ ಶಿವಣ್ಣನವರು ಸಭೆಗೆ ಹೋಗಿಲ್ಲ. "ಇದು ಸಿಟ್ಟು ಮಾಡಿಕೊಂಡು, ದೆಹಲಿವರೆಗೆ ದೂರನ್ನು ಒಯ್ಯುವ ಅಪರಾಧವೇ?" ಎಂದು ಶಿವಣ್ಣ ಅವರ ಆಪ್ತ ವಲಯದವರ ಪ್ರಶ್ನೆ.
ಈ ಸಲದ ನೋಟಿಸ್ ಜ್ವಾಲಾಮುಖಿಗೆ ಕಾರಣವಾಗಬಹುದು
"ಈ ಸಲ ನೋಟಿಸ್ ನೀಡಿದರೆ ತುಮಕೂರು ಸೇರಿದಂತೆ ಇಡೀ ರಾಜ್ಯದಲ್ಲಿ ಬಿಜೆಪಿಯಲ್ಲಿ ಆಗಿರುವ ಜಟಾಪಟಿ ಹಾಗೂ ಮೂಲ ಕಾರ್ಯಕರ್ತರು ಎದುರಿಸುತ್ತಿರುವ ಅವಮಾನವನ್ನು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎದುರಿಗೇ ಶಿವಣ್ಣ ತೆರೆದಿಡುತ್ತಾರೆ" ಎಂಬ ಮಾಹಿತಿಯು ಪಕ್ಷದ ಮೂಲಗಳಿಂದಲೇ ತಿಳಿದುಬಂದಿದೆ.
ಈಶ್ವರಪ್ಪನವರಿಗೂ ಅವಮಾನ
ಹೆಬ್ಬೂರಿನಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ನಾಯಕ ಕೆ.ಎಸ್.ಈಶ್ವರಪ್ಪನವರಿಗೂ ಅವಮಾನ ಮಾಡಲಾಗಿದೆ. ಆದರೆ ಅವರು ಅದನ್ನು ದೊಡ್ಡದು ಮಾಡದೆ ಅಲ್ಲಿಂದ ಹೊರಟುಬಿಟ್ಟಿದ್ದಾರೆ. ಇಡೀ ತುಮಕೂರಿನಲ್ಲಿ ಹಳೆ ಕೆಜೆಪಿ- ಮೂಲ ಬಿಜೆಪಿ ಎಂಬ ಬಣ ಇದ್ದು, ಯಡಿಯೂರಪ್ಪನವರ ಎದುರು ಮಾತನಾಡಲಾರದೆ ಮಾಜಿ ಶಾಸಕರು, ಬಿಜೆಪಿ ಮುಖಂಡರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.
ಹಿಂದಿನ ಸಿಟ್ಟು ಈಗಲೂ ಮುಂದುವರಿದಿದೆ
ಎಂ.ಬಿ.ನಂದೀಶ್, ಸೊಗಡು ಶಿವಣ್ಣ ಮತ್ತಿತರ ಮುಖಂಡರನ್ನು ಯಡಿಯೂರಪ್ಪ ಗುರಿ ಮಾಡಿಕೊಂಡು ಮೂಲೆಗುಂಪು ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಯಾಕೆ ಮೂಲೆಗುಂಪು ಮಾಡುತ್ತಿದ್ದಾರೆ ಅಂದರೆ, ಇದು ಬಿಎಸ್ ವೈ ಮುಖ್ಯಮಂತ್ರಿ ಆಗಿದ್ದಾಗಿನ ಸಿಟ್ಟು. ಈಗಲೂ ಮುಂದುವರಿದಿದೆ ಎಂಬ ಉತ್ತರ ಎದುರಾಗುತ್ತದೆ. ಏನು ಆ ಸಿಟ್ಟು? ಇನ್ನೇನು ಕೆಲ ದಿನದಲ್ಲೇ ಆ ಮುಖಂಡರು ಸಾರ್ವಜನಿಕವಾಗಿ ಬಯಲು ಮಾಡುವ ಸಾಧ್ಯತೆ ಇದೆ.