ಬಡವರ ಯಾವುದೇ ಸಬ್ಸಿಡಿ ಕಡಿತಕ್ಕೆ ಸಿಎಂ ವಿರೋಧ
ತುಮಕೂರು, ನ. 28: ವಿವಿಧ ಯೋಜನೆಗಳಿಗೆ ನೀಡುತ್ತಿರುವ ಸಹಾಯಧನವನ್ನು ರದ್ದುಗೊಳಿಸುವ ಕುರಿತು ಕೇಂದ್ರ ವಿತ್ತ ಸಚಿವ ಅರುಣ ಜೇಟ್ಲಿ ನೀಡಿರುವ ಹೇಳಿಕೆಗೆ ಮಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
ಬಡವರಿಗೆ ನೀಡುತ್ತಿರುವ ಯಾವುದೇ ಸಹಾಯಧನ ರದ್ದುಗೊಳಿಸಿದರೂ ವಿರೋಧಿಸುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ 575 ಕೋಟಿ ರೂ. ಅಂದಾಜು ವೆಚ್ಚದ ಪಾವಗಡದಿಂದ ಮಳವಳ್ಳಿವರೆಗಿನ 193 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. [ಸಬ್ಸಿಡಿ ಸಹಿತ ಎಲ್ ಪಿಜಿ ಬೆಲೆ ಏರಿಕೆ]
ಬಡವರ ಆರ್ಥಿಕ ಸಬಲೀಕರಣ ಹಾಗೂ ಅವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಹಾಯಧನ ಅತ್ಯಗತ್ಯ ಎಂದು ಸಮರ್ಥಿಸಿದರು. ಬಿಜೆಪಿ ಬಡವರ ವಿರೋಧಿ ನೀತಿ ಅನುಸರಿಸುತ್ತಿದೆ. ಕಾರ್ಪೊರೆಟ್ ಹಾಗೂ ಬಂಡವಾಳ ಶಾಹಿಗಳ ಪರ ನೀತಿ ಅನುಸರಿಸುತ್ತಿದೆ. ಆದ್ದರಿಂದಲೇ ಅರುಣ ಜೈಟ್ಲಿ ಹೀಗೆ ಮಾತನಾಡುತ್ತಿದ್ದಾರೆಂದು ಟೀಕಿಸಿದರು.
ವಿದ್ಯಾರ್ಥಿಗಳಿಗೆ ಶೂ ಭಾಗ್ಯ: ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ನೀಡುವ ಕುರಿತು ಸರ್ಕಾರ ಯೋಚಿಸುತ್ತಿದೆ. ಇದರ ಸಾಧಕ- ಬಾಧಕಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಶಾಲೆಯಲ್ಲಿ ವಾರಕ್ಕೆ ಐದು ದಿನ ಹಾಲು ನೀಡುವ ಕುರಿತೂ ಚಿಂತಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮಡೆ ಸ್ನಾನಕ್ಕೆ ವಿರೋಧ: ಮಡೆ ಸ್ನಾನ ಕುರಿತು ಹೈ ಕೋರ್ಟ್ ನೀಡಿರುವ ಆದೇಶವನ್ನು ನಾನು ಗೌರವಿಸುತ್ತೇನೆ. ಆದರೆ, ವೈಯಕ್ತಿಕವಾಗಿ ಈ ಪದ್ಧತಿಯನ್ನು ವಿರೋಧಿಸುತ್ತೇನೆಂದು ಸ್ಪಷ್ಟಪಡಿಸಿದರು.
ಲೋಕೋಪಯೋಗಿ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ಶಾಸಕ ಕೆ.ಎನ್. ರಾಜಣ್ಣ, ಸಂಸದ ಮುದ್ದಹನುಮೇಗೌಡ ಇತರರು ಪಾಲ್ಗೊಂಡಿದ್ದರು.