ಸಿದ್ದರಾಮಯ್ಯ ಅವರಿಗೆ ಡೀಲ್ ಮಾಡೋದು ಕರಗತ: ಎಚ್ ಡಿಕೆ ತಿರುಗೇಟು
ತುಮಕೂರು, ಮಾರ್ಚ್ 10 : ಆಡಳಿತ ಮಾಡುವುದನ್ನು ಕುಮಾರಸ್ವಾಮಿಯಿಂದ ಕಲಿಯಬೇಕಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತುಮಕೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಅಧಿಕಾರಿಗಳ ಜೊತೆ ಡೀಲ್ ಮಾಡಿಕೊಳ್ಳುವುದು ಸಿದ್ದರಾಮಯ್ಯ ಅವರಿಗೆ ಕರಗತ. ನಾವು ಡೀಲ್ ಮಾಡುವ ಜಾಯಮಾನದಲ್ಲಿ ಬಂದಿಲ್ಲ. ಅಧಿಕಾರಿಗಳ ಜೊತೆ ಮಾಡುವ ಡೀಲ್, ಕಿಕ್ ಬ್ಯಾಕ್ ಗಳ ವ್ಯವಹಾರದಲ್ಲಿ ಹೇಗೆ ರುಜು ಹಾಕಿಕೊಳ್ಳಬೇಕು ಎಂಬುದರಲ್ಲಿ ಸಿದ್ದರಾಮಯ್ಯ ಪರಿಣತಿ ಹೊಂದಿದ್ದಾರೆ ಎಂದು ಛೇಡಿಸಿದರು.
ಆಡಳಿತ ನಡೆಸೋದು ಹೇಗೆ ಅಂತ ಕುಮಾರಸ್ವಾಮಿಯಿಂದ ಕಲಿಯಬೇಕಿಲ್ಲ: ಸಿದ್ದು
ಸಿದ್ದರಾಮಯ್ಯನವರಿಗೆ ನಾವು ಹೇಳಿಕೊಡಲಾಗುವುದಿಲ್ಲ. ಸಿದ್ದರಾಮಯ್ಯ ಇರುವುದೇ ಈ ರಾಜ್ಯ ಲೂಟಿ ಮಾಡುವುದಕ್ಕೆ ಎಂಬುದು ಅಂಕಿ- ಅಂಶಗಳಿಂದ ಈಗಾಗಲೇ ಸಾಬೀತಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವ ಬಗ್ಗೆ ಬಿಜಿನೆಸ್ ಲೈನ್ ಪತ್ರಿಕೆಯ ಅಂಕಣಕಾರರು ಬಹಿರಂಗಪಡಿಸಿದ್ದಾರೆ ಎಂದರು.
ರಾಜ್ಯದ ಬೊಕ್ಕಸವನ್ನು ಕಾಂಗ್ರೆಸ್ ನವರು ದಿವಾಳಿ ಮಾಡಿ ಹೋಗುತಿದ್ದಾರೆ. ಸಿದ್ದರಾಮಯ್ಯ ಅವರ ದುರಂಹಕಾರ, ಗರ್ವ, ದುಡ್ಡಿನ ಮದ ಈ ರೀತಿ ಮಾತನಾಡಿಸುತ್ತಿದೆ. ಹಾಗಾಗಿ ನಾನು ಸಿದ್ದರಾಮಯ್ಯಗೆ ದುಡ್ಡು ಹೊಡೆಯುವ ಕೆಲಸದಲ್ಲಿ ಪಾಠ ಹೇಳಿಕೊಡುವ ದೊಡ್ಡ ವ್ಯಕ್ತಿಯಲ್ಲ ಎಂದು ಹೇಳಿದರು.
ಲಂಚ ತೆಗೆದುಕೊಳ್ಳುವುದು ತಪ್ಪಿಲ್ಲ ಎಂದು ಆರೋಗ್ಯ ಸಚಿವರೇ ವಿಧಾನ ಸಭೆಯಲ್ಲಿ ಹೇಳಿದ್ದಾರೆ. ದುಡ್ಡು ಹೊಡೆಯುವುದನ್ನು ನಾವು ಕಲಿತಿದ್ದೀವಿ, ನೀವೂ ಕಲಿತುಕೊಳ್ಳಿ ಎಂದು ವಿಧಾನ ಸಭೆಯಲ್ಲಿ ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ. ವೃದ್ಧಾಪ್ಯ ವೇತನ, ವಿಧವಾ ವೇತನ ಕೊಡುವುದನ್ನು ನಿಲ್ಲಿಸಿದ್ದಾರೆ. ಆ ಮೂಲಕ ಚುನಾವಣೆ ಗೆ ದುಡ್ಡು ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಹರಿಹಾಯ್ದರು.