ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಬೇಡ: ಚೆನ್ನೈಗೆ ವೈದ್ಯರ ತಂಡ
ತುಮಕೂರು, ಡಿಸೆಂಬರ್ 6: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಆತಂಕ ದೂರವಾಗಿದೆ.
ಶ್ರೀಗಳು ಎಂದಿನಂತೆ ಗುರುವಾರ ಬೆಳಿಗ್ಗೆ ಪೂಜಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಅವರ ಆರೋಗ್ಯದ ಬಗ್ಗೆ ಕಳವಳಪಡುವ ಅಗತ್ಯವಿಲ್ಲ. ಅವರು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಈಗ ಹೇಗಿದ್ದಾರೆ?
ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದರಿಂದ ಭಕ್ತರಲ್ಲಿ ಆತಂಕ ಉಂಟಾಗಿತ್ತು. ಮಾಧ್ಯಮದವರ ಎದುರು ಕಾಣಿಸಿಕೊಂಡ ಶ್ರೀಗಳು, ಪರಿಚಾರಕರ ನೆರವು ಪಡೆದು ಓಡಾಡಿದರು. ಬೆಳಿಗ್ಗೆಯಿಂದಲೇ ಲವಲವಿಕೆಯಿಂದ ಓಡಾಡಿದ ಅವರು ಎಂದಿನಂತೆ ಪೂಜೆ ನಡೆಸಿದರು.
ದೈನಂದಿನ ಚಟುವಟಿಕೆಗಳಲ್ಲಿ ಆಯಾಸವಿಲ್ಲದೆ ತೊಡಗಿಸಿಕೊಂಡಿದ್ದ ಅವರು, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆದರು. ಮಠದಲ್ಲಿಯೇ ಇರುವ ವೈದ್ಯರ ತಂಡ ನಿರಂತರವಾಗಿ ಅವರ ಆರೋಗ್ಯ ತಪಾಸಣೆ ನಡೆಸುತ್ತಿದೆ.
ಚೆನ್ನೈ ತಜ್ಞ ವೈದ್ಯರ ಸಲಹೆ
ಶ್ರೀಗಳ ಆರೋಗ್ಯ ಸಮಸ್ಯೆ ಬಗ್ಗೆ ತಜ್ಞರಿಂದ ಸಲಹೆ ಪಡೆದುಕೊಳ್ಳಲು ವೈದ್ಯರ ತಂಡ ತಮಿಳುನಾಡಿನ ಚೆನ್ನೈಗೆ ತೆರಳಿದೆ. ಶ್ರೀಗಳಿಗೆ ಒಟ್ಟು 11 ಸ್ಟೆಂಟ್ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ತೆಗೆಯುವುದು ಕಷ್ಟಕರವಾಗಿದೆ. ಹೀಗಾಗಿ ಪರಿಣತ ವೈದ್ಯರ ನೆರವು ಅಗತ್ಯವಾಗಿದೆ.
ಶ್ರೀಗಳ ರಕ್ತ ಪರೀಕ್ಷೆ, ಸ್ಟೆಂಟ್ ವರದಿ ಮತ್ತು ಸ್ಕ್ಯಾನಿಂಗ್ ವರದಿ ಸೇರಿದಂತೆ ಆರೋಗ್ಯದ ಮಾಹಿತಿಯ ದಾಖಲೆಗಳ ಸಮೇತ ವೈದ್ಯರಾದ ಡಾ. ರವೀಂದ್ರ, ಡಾ. ಪರಮೇಶ್ ಮತ್ತು ಡಾ. ಶಾಲಿನಿ ಅವರ ತಂಡ ಚೆನ್ನೈಗೆ ತೆರಳಿದೆ. ಅಲ್ಲಿ ಸ್ಟೆಂಟ್ ಪರಿಣತರಾದ ಡಾ. ಪಳನಿ ವೇಲು ಮತ್ತು ಡಾ. ಮೊಹಮ್ಮದ್ ರಿಲ್ಲಾ ಅವರಿಂದ ಸಲಹೆಗಳನ್ನು ಪಡೆದುಕೊಳ್ಳಲಿದೆ.
ಪರಮೇಶ್ವರ್ ಭೇಟಿ
ಶ್ರೀಗಳ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆಯಲು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಗುರುವಾರ ಬೆಳಿಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು.
ಶ್ರೀಗಳು ಆರಾಮಾಗಿ ಇದ್ದಾರೆ. ಏನೂ ತೊಂದರೆ ಇಲ್ಲ. ಎಂದಿನಂತೆ ಮಾತನಾಡಿದರು. ಯಾವಾಗ ಬಂದಿರಿ, ಚೆನ್ನಾಗಿ ಇದ್ದೀರಾ ಎಂದು ಪ್ರಶ್ನಿಸಿದರು. ಅವರ ಆರೋಗ್ಯದಲ್ಲಿ ಸಮಸ್ಯೆ ಇಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಯ, ಆತಂಕ ಪಡುವ ಅಗತ್ಯವಿಲ್ಲ
ಹಲವಾರು ವರ್ಷ ಬಾಳಲಿ
ಇಂದು ಬೆಳಗ್ಗೆ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯವನ್ನು ವಿಚಾರಿಸಿ, ಆಶೀರ್ವಾದ ಪಡೆದೆ. ನಮಗೆಲ್ಲರಿಗೂ ದಾರಿದೀಪವಾಗಿರುವ ಅವರು ಇನ್ನೂ ಹಲವಾರು ವರ್ಷ ಬಾಳಲಿ ಎನ್ನುವುದೇ ನನ್ನ ಹಾರೈಕೆ ಎಂದು ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
ಸದ್ಯಕ್ಕೆ ದರ್ಶನ ಇಲ್ಲ
ಬುಧವಾರ ಬೆಳಿಗ್ಗೆ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗಾ ಶ್ರೀಗಳನ್ನು ಸಹಜ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಬಳಿಕ ಅವರು ಮಠಕ್ಕೆ ಮರಳಿದ್ದರು. ಸಂಜೆ ವೇಳೆ ಅವರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಇದರಿಂದ ಆತಂಕ ಸೃಷ್ಟಿಯಾಗಿತ್ತು. ಅವರ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ. ಅವರ ದರ್ಶನಕ್ಕೆ ಭಕ್ತರು ಕೆಲವು ದಿನ ಕಾಯಬೇಕು ಎಂದು ಕಿರಿಯ ಸ್ವಾಮೀಜಿ ತಿಳಿಸಿದ್ದಾರೆ.