ರೋಹಿಣಿ ಕೆಲಸ ತೃಪ್ತಿ ತಂದಿಲ್ಲ, ಆ ಕಾರಣಕ್ಕೆ ವರ್ಗಾವಣೆ : ಪರಮೇಶ್ವರ್
ತುಮಕೂರು, ಜನವರಿ 24: ಹಾಸನದ ಜಿಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕೆಲಸವು ಸರಕಾರಕ್ಕೆ ತೃಪ್ತಿ ತಂದಿಲ್ಲದೆ ಇರಬಹುದು. ಹಾಗಾಗಿ ವರ್ಗಾವಣೆ ಮಾಡಲಾಗಿದೆ. ಯಾರು ಏನು ಬೇಕಾದರೂ ವ್ಯಾಖ್ಯಾನ ಮಾಡಬಹುದು. ಆಡಳಿತ ದೃಷ್ಟಿಯಿಂದ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ಸರಕಾರಕ್ಕೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಇಲ್ಲಿ ಬುಧವಾರ ಹೇಳಿದರು.
ಯಾವ ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಾರೆ, ಯಾವ ಅಧಿಕಾರಿ ಸರಿಯಾಗಿ ಕೆಲಸ ಮಾಡಲ್ಲ ಎಂಬ ಮಾಹಿತಿ ಸರಕಾರಕ್ಕಿದೆ. ಹಾಗಾಗಿ ಆಢಳಿತ ಚೆನ್ನಾಗಿರಲಿ ಅಂತ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಚುನಾವಣೆ ಆಯೋಗದಿಂದ ವರ್ಗಾವಣೆಗೆ ತಡೆ ಬಂದಿರಬಹುದು. ಇದು ಆಡಳಿತದಲ್ಲಿನ ಸಹಜ ಪ್ರಕ್ರಿಯೆ. ಇದೇನೂ ಸರಕಾರಕ್ಕೆ ಮುಖಭಂಗವಲ್ಲ ಎಂದರು.
ರೋಹಿಣಿ ಸಿಂಧೂರಿ ವರ್ಗಾವಣೆ, ಸರ್ಕಾರಕ್ಕೆ ದೇವೇಗೌಡರ ಪ್ರಶ್ನೆ
ಇನ್ನು ದೇವೇಗೌಡರು ಮಾಜಿ ಪ್ರಧಾನಿ. ಹಿರಿಯ ರಾಜಕಾರಣಿಗಳು. ಅವರ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಆದರೆ ಆಢಳಿತ ನಡೆಸುವವರು ನಾವು. ಹೀಗಾಗಿ ನಮ್ಮದೇ ಸ್ವಾಯತ್ತ ಅಧಿಕಾರವಿದೆ ಎಂದು ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಸರಕಾರದ ಜನಪರ ಕೆಲಸ ನೋಡಿ ಬಿಜೆಪಿಯವರು ಹತಾಶರಾಗಿದ್ದಾರೆ. ಹೀಗಾಗಿ ಪದೇ ಪದೇ ಅಮಿತ್ ಶಾ, ಮೋದಿಯನ್ನು ಕರೆತರುತ್ತಿದ್ದಾರೆ. ಅವರ ಕಾರ್ಯಕ್ರಮಕ್ಕೆ ಅಡ್ಡಿಯಾಗಲೆಂದು ಬಂದ್ ಮಾಡಿ ಅಂತ ನಾವು ಯಾರಿಗೂ ಹೇಳಿಲ್ಲ. ಮುಖ್ಯಮಂತ್ರಿಗಳು ಬೇರೆ ಕಾರಣದಿಂದ 27ನೇ ತಾರೀಕಿನ ಬಂದ್ ಅನ್ನು 25ರಂದು ಮಾಡಿ ಅಂತ ಹೇಳಿರಬಹುದು ಎಂದರು.
ನರೇಂದ್ರ ಮೋದಿ ನಮ್ಮ ರಾಷ್ಟ್ರದ ಪ್ರಧಾನಿಗಳು. ಅವರ ಕಾರ್ಯಕ್ರಮಕ್ಕೆ ನಾವೇಕೆ ಅಡ್ಡಿ ಪಡಿಸಬೇಕು? ರಾಜ್ಯದ ಜನತೆ ನಮ್ಮ ಪರವಿದ್ದಾಗ ಅಮಿತ್ ಶಾ, ಮೋದಿ ಬಂದು ಏನು ಮಾಡ್ತಾರೆ ಎಂದು ಪ್ರಶ್ನಿಸಿದರು.
ಫೆಬ್ರವರಿ 10, 11, 12ರಂದು ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ತುಮಕೂರು ಸೇರಿದಂತೆ ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಭಾಗದಲ್ಲಿ ರಾಹುಲ್ ಗಾಂಧಿ ಪ್ರವಾಸ ನಡೆಸಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾಲ್ಕು ಬಾರಿ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.