ತುಮಕೂರು : ಅಪಘಾತದಲ್ಲಿ ಸಿಸಿಬಿ ಪೊಲೀಸರಿಗೆ ಗಾಯ
ತುಮಕೂರು, ಜುಲೈ 21 : ತುಮಕೂರು ನಗರದ ಹೊರವಲಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಿಸಿಬಿ ಇನ್ಸ್ಪೆಕ್ಟರ್ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರು ಹೊರವಲಯದ ಊರುಕೆರೆ ಬಳಿ ಟೊಯೋಟಾ ಇನ್ನೋವಾ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ಪುಣೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದ ಸಿಸಿಬಿ ಇನ್ಸ್ಪೆಕ್ಟರ್ಗಳಾದ ಗಿರೀಶ್ ಮತ್ತು ಆನಂದ್ ಅವರು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.[ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ]
ಕಾರಿನಲ್ಲಿ ಗಿರೀಶ್ ಮತ್ತು ಆನಂದ್ ಅವರ ಜೊತೆ ಪೇದೆಗಳಾದ ಸತೀಶ್, ಕುಮಾರಸ್ವಾಮಿ, ಮಹದೇವ್ ಹಾಗೂ ಚೇತನ್ ಇದ್ದರು. ಸಣ್ಣಪುಟ್ಟ ಗಾಯಗಳಾಗಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು.[ಬೆಂಗಳೂರಲ್ಲಿ ರೌಡಿಗಳ ಕಾಳಗ, ಪರ್ವೇಜ್ ಹತ್ಯೆ]
ಸರಗಳ್ಳನನ್ನು ಕರೆತರುತ್ತಿದ್ದರು : ಇನ್ಸ್ಪೆಕ್ಟರ್ ಗಿರೀಶ್ ಮತ್ತು ಆನಂದ್ ಅವರ ನೇತೃತ್ವದ ಪೊಲೀಸ್ ತಂಡ ಇರಾನಿ ಗ್ಯಾಂಗ್ ಸರಗಳ್ಳ ಅಲಿಯನ್ನು ಬಂಧಿಸಲು ಪುಣೆಗೆ ತೆರಳಿದ್ದರು. ಅಲಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾಗ, ಈ ಅಪಘಾತ ಸಂಭವಿಸಿದೆ.[ಬಾಡಿಗೆಗೆ ಕಾರು ಪಡೆದು ಪರಾರಿಯಾಗುತ್ತಿದ್ದವ ಸಿಕ್ಕಿಬಿದ್ದ!]
ಪುಣೆಯಲ್ಲಿ ಅಲಿ ಅಡಗಿಕುಳಿತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಇನ್ನೋವಾ ಕಾರನ್ನು ಬಾಡಿಗೆಗೆ ಪಡೆದು ಆತನನ್ನು ಬಂಧಿಸಲು ಪುಣೆಗೆ ತೆರಳಿದ್ದರು. ಅಲ್ಲಿಂದ ವಾಪಸ್ ಆಗುವಾಗ ಈ ಅಪಘಾತ ನಡೆದಿದೆ.