ತುಮಕೂರು ಜಿಲ್ಲಾಸ್ಪತ್ರೇಲಿ ಅಡ್ಮಿಟ್ ಮಾಡಲಿಲ್ಲ ಎಂದು ರಂಪ ರಾಮಾಯಣ!
ತುಮಕೂರು, ಫೆಬ್ರವರಿ 6: ಗಾಯಾಳು ಮನವಿಯನ್ನು ಲೆಕ್ಕಿಸದೆ ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದರು ಎಂಬ ಕಾರಣಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತುಮಕೂರು ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಕರಿಸಿದ್ದಯ್ಯ ಎಂಬುವರಿಗೆ ಅಪಘಾತವಾಗಿತ್ತು. ಅವರ ಜೊತೆಗಿದ್ದವರೊಬ್ಬರಿಗೂ ಗಾಯವಾಗಿತ್ತು.
ಇಬ್ಬರೂ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಅವರಿಗೆ ಚಿಕಿತ್ಸೆ ನೀಡಿದ ನಂತರ ದಾಖಲಿಸಿಕೊಂಡಿಲ್ಲ ಎಂಬುದು ಸಾರ್ವಜನಿಕರು ಹಾಗೂ ಗಾಯಾಳು ಆರೋಪ. ಡಾ.ವಸೀಂ ಎಂಬುವರು ಸ್ಥಳದಲ್ಲಿ ಇದ್ದರು. ಅಪಘಾತವಾಗಿ ಬಂದ ಇಬ್ಬರಿಗೆ ಚಿಕಿತ್ಸೆ ನೀಡಿ, ಮರು ದಿನ ಬರುವಂತೆ ಸೂಚಿಸಿದ್ದಾರೆ. ಆದರೆ ಕರಿಸಿದ್ದಯ್ಯ ಅವರು ತನ್ನನ್ನು ದಾಖಲಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.[ತುಮಕೂರು: ಇನ್ನೇನು ತಾಳಿ ಕಟ್ಟಬೇಕಿದ್ದ ವರ ಹೃದಯಾಘಾತದಿಂದ ಸಾವು]
ಅದರೆ, ದಾಖಲು ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ವೈದ್ಯರು ನಿರ್ಧರಿಸಿದ್ದಾರೆ. ಇದರಿಂದ ಅಕ್ರೋಶಗೊಂಡ ಸಾರ್ವಜನಿಕರು ವೈದ್ಯರ ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಕಡೆಗೆ ಗಾಯಾಳು ಕರಿಸಿದ್ದಯ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಘಟನೆ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ಪ್ರತಿಕ್ರಿಯೆ ನೀಡಿದ್ದಾರೆ.[ತರಹೇವಾರಿ ಹಕ್ಕಿಗಳು ಬಂದಿವೆ ತುಮಕೂರಿನ ಮೆಳೇಕೋಟೆ-ಭೀಮಸಂದ್ರ ಕೆರೆಗೆ]
"ಗಾಯಾಳು ಇಬ್ಬರಿಗೆ ಚಿಕಿತ್ಸೆ ನೀಡಲಾಗಿದೆ. ಅವರನ್ನು ದಾಖಲಿಸಿಕೊಳ್ಳುವ ಅಗತ್ಯ ಇರಲಿಲ್ಲ. ಇನ್ನು ಚಿಕಿತ್ಸೆ ನಿರಾಕರಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು" ಎಂದಿದ್ದಾರೆ. ಡಾ.ವಸೀಂ ಮಾಧ್ಯಮದವರ ಜತೆ ಮಾತನಾಡಿ, ವೈದ್ಯ ವೃತ್ತಿಗೆ ತಕ್ಕನಾದ ನಿರ್ಧಾರ ತೆಗೆದುಕೊಂಡಿದ್ದೇನೆ. ಯಾರನ್ನಾದರೂ ಸರಿ ಸುಮ್ಮನೆ ದಾಖಲಿಸಿಕೊಳ್ಳಲು ಆಗಲ್ಲ. ಪ್ರಾಥಮಿಕ ಚಿಕಿತ್ಸೆ ನೀಡಿದ್ದೇವೆ ಎಂದು ವಿವರಿಸಿದ್ದಾರೆ.