ಗುಬ್ಬಿ: ಅಪಘಾತವಾಗಿ 2 ಗಂಟೆ ಕಳೆದರೂ ರಸ್ತೆಯಲ್ಲೇ ಬಿದ್ದಿದ್ದ ಶವ!
ಸಂಜೆ 4:30ರ ಸುಮಾರಿಗೆ ಆದ ಅಪಘಾತ; ಸ್ಥಳದಲ್ಲೇ ಸಾವನ್ನಪ್ಪಿದ ಸೋಮಶೇಖರ್ ಎಂಬ ವ್ಯಕ್ತಿ; ಅಪಘಾತ ನಡೆದು ಎರಡು ಗಂಟೆಗಳಾದರೂ ಶವ ಸಾಗಿಸಲು ಅನುವು ಮಾಡಿಕೊಡದ ಪೊಲೀಸರು
ಗುಬ್ಬಿ, ಜನವರಿ 27: ಅಪಘಾತದಲ್ಲಿ ಯುವಕನೊರ್ವ ಮೃತಪಟ್ಟು ಸುಮಾರು 2 ಗಂಟೆಗಳಾದರೂ ಮೃತದೇಹವನ್ನು ಅಲ್ಲಿಂದ ತೆಗೆಯಲು ಬಿಡದೇ, ಆಸ್ಪತ್ರೆಗೆ ಕಳುಹಿಸಿಕೊಡಲು ಪೊಲೀಸರು ಹಿಂದೇಟು ಹಾಕಿರುವ ಘಟನೆ ಗುಬ್ಬಿ ತಾಲ್ಲೂಕಿನ ಕೆ.ಜಿ.ಟೆಂಪಲ್ ನಲ್ಲಿ ನಡೆದಿದೆ.
ಹೊನ್ನಶೆಟ್ಟಿಹಳ್ಳಿಯ ಸೋಮಶೇಖರ್, ಗಿರೀಶ್ ಸಂಜೆ 4.30ರ ಸುಮಾರಿಗೆ ಬೈಕ್ ನಲ್ಲಿ ಕೆಜಿ ಟೆಂಪಲ್ ಗೆ ಬರುವಾಗ ಹಿಂದಿನಿಂದ ಬಂದ ಆಟೋವೊಂದು ಡಿಕ್ಕಿ ಹೊಡೆದಿದೆ, ಅಪಘಾತದಲ್ಲಿ ಸೋಮಶೇಖರ್ ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಗಿರೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತ ನಡೆದು 2 ಗಂಟೆಗಳು ಕಳೆದರೂ ಪೊಲೀಸರು ಮಾತ್ರ ಅಲ್ಲಿಂದ ಸೋಮಶೇಖರ್ ಅವರ ಮೃತದೇಹವನ್ನು ಸಾಗಿಸಿಲ್ಲ. ಅಂಬುಲೆನ್ಸ್ ಅಥವಾ ಖಾಸಗಿ ವಾಹನದಲ್ಲಿಯಾದರೂ ಸೋಮಶೇಖರ್ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯಲು ಅನುವು ಮಾಡಿಕೊಟ್ಟಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಪಘಾತವನ್ನು ಬೇಕಂತಲೇ ಯಾರೋ ಮಾಡಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದರು. ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಸೇರಿಕೊಂಡಿರುವುದರಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳದಲ್ಲಿಯೇ ಪೊಲೀಸ್ ಸಿಬ್ಬಂದಿ ಹಾಗೂ ಅಂಬುಲೆನ್ಸ್ ಇದ್ದರು ಸೋಮಶೇಖರ್ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆಗದೇ ಇರುವುದು ಪೊಲೀಸರ ಕರ್ತವ್ಯ ವೈಖರಿ ಹಿಡಿದ ಕನ್ನಡಿಯೆಂದು ಜನರು ಟೀಕೆಗಳನ್ನು ಮಾಡಿದ್ದಾರೆ.