ಪ್ರಧಾನಿ ಮೋದಿಯಿಂದ ಕನ್ನಡದಲ್ಲಿ ಟ್ವೀಟ್ ಸುರಿಮಳೆ
ತುಮಕೂರು, ಮಾರ್ಚ್ 04 : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 'ಕನ್ನಡ'ವೂ ಪ್ರಮುಖ ಚರ್ಚೆಯ ವಿಷಯವಾಗಲಿದೆಯಾ? ಅನುಮಾನವೇ ಇಲ್ಲ. ಭಾಷಣಗಳಲ್ಲಿ ನಾಯಕರಿಂದ ಕೇಳಿಬರುತ್ತಿರುವ ಕನ್ನಡ ಮಾತುಗಳನ್ನು ಕೇಳಿದರೆ, ಕನ್ನಡಿಗರನ್ನು ಸೆಳೆಯಲು ಎಲ್ಲ ಯತ್ನಗಳನ್ನು ಮಾಡಲಾಗುತ್ತಿದೆ.
ಇತ್ತೀಚೆಗೆ ಕರ್ನಾಟಕದ ಹಲವಾರು ರಾಜಕೀಯ ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಾಗಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಾಗಲಿ, ಕನ್ನಡದಲ್ಲಿ ಕರುನಾಡಿನ ಮಹೋನ್ನತ ವ್ಯಕ್ತಿಗಳನ್ನು ನೆನೆಯುವುದಾಗಲಿ, ಕನ್ನಡದ ವಚನಗಳನ್ನು ಹೇಳಿ ಕನ್ನಡಿಗರ ಮನಗೆಲ್ಲಲು ಪ್ರಯತ್ನಿಸುತ್ತಿರುವುದು ಎದ್ದು ಕಾಣುತ್ತಿದೆ.
ಯುವ ಜನಾಂಗದಿಂದ ಕಲಿಯುವುದು ಸಾಕಷ್ಟಿದೆ: ಮೋದಿ
ಎಲ್ಲಕ್ಕಿಂತ ಹೆಚ್ಚಾಗಿ, ವಿಡಿಯೋ ಕಾನ್ಪರನ್ಸ್ ಮೂಲಕ ತುಮಕೂರಿನ ಯುವ ಜನತೆಯನ್ನು ಉದ್ದೇಶಿಸಿ ನರೇಂದ್ರ ಅವರು ಆಡಿದ ಮಾತುಗಳನ್ನು ಕನ್ನಡದಲ್ಲಿಯೇ, ಪ್ರಧಾನಿ ಕಚೇರಿಯ ಟ್ವಿಟ್ಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡಲಾಗಿದೆ. ಅವೇ ಟ್ವೀಟ್ ಗಳನ್ನು ಪ್ರಧಾನಿಯವರು ಕೂಡ ಟ್ವೀಟ್ ಮಾಡಿದ್ದು ಶ್ಲಾಘನೀಯ.
ಪ್ರಧಾನಿಯವರು ತಮ್ಮ ಭಾಷಣದಲ್ಲಿ ತಾವೇಕೆ ಯುವ ಜನತೆಯೊಡನೆ ಬೆರೆಯುತ್ತೇನೆ, ಯುವಜನತೆ ಚುನಾವಣೆಗಳಲ್ಲಿ ಕೂಡ ಹೇಗೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದರ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ. ತ್ರಿಪುರಾ, ನಾಗಾಲ್ಯಾಂಡ್ ನಲ್ಲಿ ಕೂಡ ಯುವಜನತೆಯಿಂದಲೇ ಚುನಾವಣೆ ಗೆದ್ದಿರುವುದಾಗಿ ಅವರು ಹೇಳಿದ್ದಾರೆ.
ತುಮಕೂರಿನ ರಾಮಕೃಷ್ಣ ಮಿಷನ್ ನ 25ನೇ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ನರೇಂದ್ರ ಮೋದಿಯವರು ಆಡಿರುವ ಮಾತಿನ ಕೆಲ ಪ್ರಮುಖ ಸಂಗತಿಗಳು ಕೆಳಗಿನಂತಿವೆ. ತುಮಕೂರಿಗೆ ಸ್ವತಃ ಬರದಿದ್ದುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದು, ಕಳೆದ ಬಾರಿ ಬಂದಾಗ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯ ಆಶೀರ್ವಾದ ಪಡೆದಿದ್ದನ್ನು ಸ್ಮರಿಸಿಕೊಂಡಿದ್ದಾರೆ.
* ನಾನು ಯುವಜನರೊಂದಿಗೆ ಇರುವಾಗ ಅವರಿಂದ ಏನನ್ನಾದರೂ ಕಲಿಯುತ್ತೇನೆ. ಆದ್ದರಿಂದಲೇ ಅವರನ್ನು ಭೇಟಿಮಾಡುವ ಪ್ರಯತ್ನ ಮಾಡುತ್ತೇನೆ, ಅವರೊಂದಿಗೆ ಮಾತನಾಡುತ್ತೇನೆ ಮತ್ತು ಅವರ ಅನುಭವಗಳನ್ನು ಕೇಳುತ್ತಿರುತ್ತೇನೆ.
* ತುಮಕೂರಿನ ರಾಮಕೃಷ್ಣ ಮಿಷನ್ ನ 25ನೇ ವಾರ್ಷಿಕೋತ್ಸವವು, ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರ ಭಾಷಣದ 125ನೇ ವಾರ್ಷಿಕೋತ್ಸವ ಹಾಗೂ ಸಹೋದರಿ ನಿವೇದಿತಾ ಅವರ 150ನೇ ಜನ್ಮ ವಾರ್ಷಿಕೋತ್ಸವದೊಂದಿಗೆ ಹೊಂದಿಕೊಂಡು ಬಂದಿರವುದು ಅನನ್ಯ ಸಂಗತಿ.
* ಕರ್ನಾಟಕದ ಆಧ್ಯಾತ್ಮಿಕ ಮತ್ತು ಯುವಜನರ ಉತ್ಸವಗಳಲ್ಲಿನ ವಿಲೀನತೆ ಒಂದು ಉದಯೋನ್ಮುಖ ಮಾದರಿ. ಮುಂಬರುವ ದಿನಗಳಲ್ಲಿ ಇದು ದೇಶದಾದ್ಯಂತ ಹರಡಲಿದೆ. ಸ್ವತಂತ್ರವಾದ ಹಲವು ದಶಕಗಳ ನಂತರ ದೇಶದಾದ್ಯಂತ ಜನರಲ್ಲಿ ಬದ್ಧತೆಯ ಉತ್ಸಾಹವನ್ನು ನಾವು ಕಾಣುತ್ತಿದ್ದೇವೆ.
* ಈಶಾನ್ಯ ಭಾರತದ ಯುವಕರಲ್ಲಿನ ಬದ್ಧತೆಯ ಶಕ್ತಿಯನ್ನು ಸ್ವತಃ ನಾನೇ ನಿನ್ನೆ ಕಂಡಿದ್ದೇನೆ. ತ್ರಿಪುರಾ, ನಾಗಲ್ಯಾಂಡ್ ಮತ್ತು ಮೇಘಾಲಯದಲ್ಲಿ ಜನರು ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದಾರೆ. ತ್ರಿಪುರಾದ ಯುವಜನತೆ ಭಯ, ಭ್ರಷ್ಟಾಚಾರ ಮತ್ತು ಸ್ವಜನ-ಪಕ್ಷಪಾತದಿಂದ ಕೂಡಿದ ರಾಜಕೀಯವನ್ನು ಸೋಲಿಸಿದ್ದಾರೆ. ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಅವರು ತೋರಿಸಿದ್ದಾರೆ.
* ಇಂದು ಯುವ ಉತ್ಸವಕ್ಕೆ ಬಂದಿರುವ ಪ್ರತಿಯೊಬ್ಬ ಯವಕ ಮತ್ತು ಯುವತಿಯರು ಸ್ಪಷ್ಟ ಪ್ರತಿಜ್ಞೆ ಮತ್ತು ಬದ್ಧತೆಯಿಂದ ಕೂಡಿರಬೇಕೆಂದು ಒತ್ತಾಯಿಸುತ್ತಿದ್ದೇನೆ. ನಿಮ್ಮ ಭವಿಷ್ಯ ಅಸ್ಪಷ್ಟತೆಯಿಂದ ಕೂಡಿರಬಾರದು. ನಿಮ್ಮ ಗುರಿ ಮತ್ತು ನೀವು ಏನನ್ನಾದರು ಸಾಧಿಸಬೇಕು ಎನ್ನುವುದು ಸ್ಪಷ್ಟವಾಗಿರಬೇಕು.
* ಪ್ರಪಂಚದಲ್ಲೇ ಭಾರತ ಅತಿ ಹೆಚ್ಚು ಯುವಜನತೆಯನ್ನು ಹೊಂದಿರುವ ರಾಷ್ಟ್ರ. ಶೇಕಡ 65ಕ್ಕೂ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ದೇಶದ ಭವಿಷ್ಯದ ಬದಲಾವಣೆಗೆ ಯುವ ಶಕ್ತಿಯ ಕೊಡುಗೆ ಅಪಾರ.
* ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ 11 ಕೋಟಿ ಜನ ಸ್ವ-ಉದ್ಯೋಗಿಗಳಿಗೆ ಸಾಲಗಳನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಕರ್ನಾಟಕದ 1 ಕೋಟಿ 14 ಲಕ್ಷ ಯುವಕರಿಗಾಗಿ ಸಾಲಗಳನ್ನು ಮಂಜೂರು ಮಾಡಲಾಗಿದೆ.