ತುಮಕೂರಿನಲ್ಲಿ ಕುಡಿಯುವ ನೀರು ಯೋಜನೆಗೆ ಮುತ್ತಪ್ಪ ರೈ ಚಾಲನೆ
ತುಮಕೂರು, ಮಾರ್ಚ್ 8: ಜಯ ಕರ್ನಾಟಕ ಸಂಘಟನೆಯು ತುಮಕೂರು ನಗರದ ಜನತೆಗೆ ಉಚಿತವಾಗಿ ಕುಡಿಯುವ ನೀರು ಒದಗಿಸುವ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆಗೆ ಬುಧವಾರ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈ ಚಾಲನೆಯನ್ನು ನೀಡಿದರು.
ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದ ದಿನಗಳಲ್ಲಿ ಸರಕಾರವು ಜನತೆಗೆ ಕುಡಿಯುವ ನೀರೊದಗಿಸುವಲ್ಲಿ ವಿಫಲವಾಗಿದೆ. ನಮ್ಮ ಈ ಯೋಜನೆ ಅನುಷ್ಠಾನದಿಂದ ಸರಕಾರ ಎಚ್ಚೆತ್ತು, ಜನತೆಗೆ ಕುಡಿಯುವ ನೀರೊದಗಿಸಲಿ. ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಿಗೂ ಹಂತ ಹಂತವಾಗಿ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.[ಮಾ.8ರಂದು ನೀರಿನ ಬವಣೆ ನೀಗಿಸುವ ಕಾರ್ಯಕ್ಕೆ ಮುತ್ತಪ್ಪ ರೈ ಚಾಲನೆ]
ಎಲ್ಲ ಜಿಲ್ಲೆಯ ಸಂಘಟನೆ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯವಿರುವ ಕಡೆ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುವುದು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಜಯಕರ್ನಾಟಕ ರಾಜ್ಯಾಧ್ಯಕ್ಷ ಎಚ್.ಎನ್ ದೀಪಕ್, ರಾಜ್ಯ ಕಾರ್ಯಾಧ್ಯಕ್ಷ ನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುದೀಪ್ ಕುಮಾರ್, ರಾಜ್ಯ ವಲಯ ಕಾರ್ಯದರ್ಶಿ ಸೋಮಶೇಖರ್, ಹೋಟೆಲ್ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಹಾಜರಿದ್ದರು