ಆಕೆ ಸತ್ತ ಮೇಲೆ ಗೊತ್ತಾಗಿದ್ದು ಹತ್ತು ವರ್ಷದ ಗೃಹ ಬಂಧನದ ಕ್ರೌರ್ಯ
ತಿಪಟೂರು, ಅಕ್ಟೋಬರ್ 8: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಳ್ಳಿಯೊಂದರಲ್ಲಿ ಮೂವತ್ತೆಂಟು ವರ್ಷದ ಮಹಿಳೆಯೊಬ್ಬರು ಅಪೌಷ್ಟಿಕತೆಯಿಂದ ಮೃತಪಟ್ಟರು. ತೀರಿಕೊಳ್ಳುವುದಕ್ಕೆ ಕಾರಣರಾದವರು ಆಕೆಯ ತಾಯಿ. ತನ್ನಿಬ್ಬರೂ ಮಕ್ಕಳನ್ನು ಹತ್ತು ವರ್ಷಗಳಿಂದ ಗೃಹಬಂಧನದಲ್ಲಿ ಇರಿಸಿದ್ದ ಮಹಾ ತಾಯಿ ವಯಸ್ಸು 66, ಹೆಸರು ಗಂಗಮ್ಮ.
ಸಾರ್ಥವಳ್ಳಿಯ ಗಂಗಮ್ಮನಿಗೆ ಇದೆಲ್ಲಿಯ ಗಾಬರಿಯೋ ಗೊತ್ತಿಲ್ಲ. ತನ್ನಿಬ್ಬರು ಹೆಣ್ಣುಮಕ್ಕಳಾದ ಭಾಗ್ಯ (38), ಶ್ರೀಲಕ್ಷ್ಮಿ (35) ಯನ್ನು ಹಗ್ಗದಲ್ಲಿ ಕಟ್ಟಿಹಾಕಿ, ಹಳ್ಳಿಯಿಂದ ದೂರದ ಗುಡಿಸಲಿನಲ್ಲಿ ಇಟ್ಟಿದ್ದಳು. ಈಗ ಅಪೌಷ್ಟಿಕತೆಯಿಂದ ತೀರಿಕೊಂಡವರ ಹೆಸರು ಭಾಗ್ಯ. ತನ್ನ ಮಕ್ಕಳು ಬೇರೆ ಜಾತಿಯವರನ್ನೆಲ್ಲಿ ಮದುವೆ ಅಗಿಬಿಡ್ತಾರೋ ಎಂಬ ಅಂಜಿಕೆಯಲ್ಲಿ ಗಂಗಮ್ಮ ಹೀಗೆ ಮಾಡಿದ್ದಳಂತೆ.[ತಮಿಳರು, ಜಯಲಲಿತಾ ನಿಂದನೆ ವಿಡಿಯೋ: ಮೂವರ ವಿರುದ್ಧ ಕೇಸ್]
ಗಂಗಮ್ಮನನ್ನು ಪೊಲೀಸರು ಇನ್ನೂ ಬಂಧಿಸಬೇಕಿದೆ. ಶ್ರೀಲಕ್ಷ್ಮಿಯನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಭಾಗ್ಯಳ ಸಾವಿನ ನಂತರ ಗ್ರಾಮ ಪಂಚಾಯಿತಿ ಮಧ್ಯಪ್ರವೇಶ ಮಾಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಗಂಗಮ್ಮ ಆರೋಪಗಳನ್ನು ನಿರಾಕರಿಸಿದ್ದು, ರಕ್ಷಣಾ ತಂಡಕ್ಕೆ ತಪ್ಪನ್ನು ಸಾಬೀತು ಮಾಡಿ ಎಂದು ಸವಾಲು ಕೂಡ ಹಾಕಿದ್ದಾಳೆ.
ನಾವು ಶ್ರೀಲಕ್ಷ್ಮಿಯನ್ನೇನೋ ರಕ್ಷಿಸಿದ್ವಿ. ಆದರೆ ಗಂಗಮ್ಮನ ವಿರುದ್ಧ ಎಫ್ ಐಆರ್ ದಾಖಲಿಸಿಲ್ಲ. ಹಿಂಸೆ ನೀಡಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ' ಎನ್ನುತ್ತಾರೆ ಹೊನ್ನವಳ್ಳಿ ಸಬ್ ಇನ್ ಸ್ಪೆಕ್ಟರ್ ಲಕ್ಶ್ಮೀಕಾಂತ. ಗ್ರಾಮಪಂಚಾಯಿತಿ ಸದಸ್ಯ ಚಂದ್ರಶೇಖರ್ ಹೇಳುವಂತೆ, ಗಂಗಮ್ಮ ಆಕೆಯ ಮನೆ ಹತ್ತಿರ ಯಾರನ್ನೂ ಸೇರಿಸುತ್ತಿರಲಿಲ್ಲ. ಕಡೆಗೆ ಸಂಬಂಧಿಕರು ಬಂದರೂ ಜಗಳವಾಡುತ್ತಿದ್ದಳಂತೆ.[ಬೆಂಗಳೂರಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಬಿಲಾಲ್ ಗೆ ಜೀವಾವಧಿ ಶಿಕ್ಷೆ]
ಈ ಇಬ್ಬರೂ ಹೆಣ್ಮಕ್ಕಳು ಪಕ್ಕದ ಹಳ್ಳಿಯಲ್ಲಿ ಬಿಸ್ಕೆಟ್ ಕಾರ್ಖಾನೆಯೊಂದಕ್ಕೆ ಕೆಲಸಕ್ಕೆ ಹೋಗ್ತಿದ್ದರಂತೆ. ಆದರೆ ಅವರೆಲ್ಲ ಒಕ್ಕಲಿಗ ಜಾತಿಯವರಲ್ಲದವರನ್ನು ಮದುವೆ ಆಗಿಬಿಡ್ತಾರೋ ಎಂಬ ಅನುಮಾನ ಗಂಗಮ್ಮನಿಗೆ ಬಂತಂತೆ. ಆಗ ಕೆಲಸಕ್ಕೆ ಹೋಗುವುದಕ್ಕೆ ತಡೆ ಹಾಕಿದಳಂತೆ. ಅಷ್ಟೇ ಅಲ್ಲ, ಕಾಲುಗಳನ್ನು ಕಟ್ಟಿಹಾಕಿದಳಂತೆ.
ಈ ಹೆಣ್ಣುಮಕ್ಕಳ ತಂದೆ ಶಿವರಾಮಯ್ಯ ಹಲವು ವರ್ಷಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದಾರೆ. ಭಿಕ್ಷೆ ಬೇಡಿ ಸಂಪಾದಿಸಿದ ಹಣವನ್ನು ತನ್ನ ಕುಟುಂಬದವರಿಗೆ ಕೊಡುವುದಿಕ್ಕೆ ಮಾತ್ರ ಮನೆಗೆ ಬರ್ತಾರೆ ಎಂದು ಊರಿನವರು ಹೇಳ್ತಾರೆ. ಇನ್ನು ಗಂಗಮ್ಮನಿಗೆ ಒಬ್ಬ ಮಗನೂ ಇದ್ದ. ಆತ ಮೂರು ವರ್ಷದ ಹಿಂದೆ ಕೊಲೆಯಾಗಿದ್ದಾನೆ.