ಕದ್ದುಮುಚ್ಚಿ ಹಸುವಿನ ಹಾಲು ಹಿಂಡಿ ಸಿಕ್ಕಿಬಿದ್ದೋನ ಹೆಸರು ರಾಜಣ್ಣ
ತುಮಕೂರು, ಜುಲೈ 2: ಚಿನ್ನದ ಒಡವೆ, ಹಣ ಕದಿಯುವ ಕಳ್ಳರ ಬಗ್ಗೆ ಕೇಳಿರ್ತೀರಾ- ನೋಡಿರ್ತೀರಾ. ಅಷ್ಟೇ ಯಾಕೆ, ನಾಯಿ- ಕುರಿ, ಮೇಕೆ ಕದಿಯುವಂಥವರ ಬಗ್ಗೆ ಕೂಡ ಕೇಳಿ- ನೋಡಿ ಗೊತ್ತಿರಬಹುದು. ಆದರೆ ಇಲ್ಲಿನ ಕೆಸ್ತೂರು ಗ್ರಾಮದ ಕಳ್ಳನೊಬ್ಬ ಹಸುವಿನ ಕೆಚ್ಚಲಿನಿಂದಲೇ ಹಾಲು ಕದ್ದು, ಸಿಕ್ಕಿ ಹಾಕಿಕೊಂಡಿದ್ದಾನೆ.
ಹೌದು, ಆ ಹಸುವಿಗೆ ಮೇವು ಕೊಡುತ್ತಿದ್ದವರು ಯಾರೋ. ಆದರೆ ಹಸು ಮಾತ್ರ ಹಾಲು ಕೊಡುತ್ತಿರಲಿಲ್ಲ. ಇನ್ನು ಬೆಳಗ್ಗೆ ಎದ್ದು ಮಾಲೀಕರು ಹಾಲು ಕರೆಯಲು ಹೋದರೆ ಹಸುವಿನ ಕೆಚ್ಚಲು ಖಾಲಿ ಆಗಿರುತಿತ್ತು. ಸಂಜೆ ಹೊತ್ತು ಮಾತ್ರ ಹಸು ಹಾಲು ಕೊಡುತಿತ್ತು. ವೈದ್ಯರಿಗೆ ತೋರಿಸಿ, ಚಿಕಿತ್ಸೆ ಕೊಟ್ಟೂ ಆಯ್ತು. ಏನೇ ಮಾಡಿದರೂ ಈ ಹಸು ಮಾತ್ರ ಬೆಳಗಿನ ಹೊತ್ತು ಹಾಲು ಕೊಡುತ್ತಲೇ ಇರಲಿಲ್ಲ.
ಕೊರಟಗೆರೆ: ಕೋಳಿ ತಿನ್ನಲು ಬಂದು ಶೆಡ್ನಲ್ಲಿ ಬಂಧಿಯಾದ ಚಿರತೆ
ಅರೆ, ಇದೇನಿದು ವಿಚಿತ್ರ ಎಂದು ರಾತ್ರಿ ಹೊತ್ತು ಹಸುವನ್ನು ಕಾವಲು ಕಾದಾಗ ಅಸಲಿ ಸಂಗತಿಯು ಹೊರಬಿತ್ತು. ಹಸು ಹಾಲು ನೀಡದೆ ಇದ್ದಿದ್ದಕ್ಕೆ ಕಾರಣ ಐನಾತಿ ಕಳ್ಳ. ತಮ್ಮ ಹಸು ಬೆಳಗಿನ ಜಾವ ಹಾಲು ಕೊಡದಿದ್ದಕ್ಕೆ ಕಾರಣ ಪಕ್ಕದ ಮನೆಯಲ್ಲಿದ್ದ ರಾಜಣ್ಣ. ಮಧ್ಯರಾತ್ರಿ ಬಂದು ಹಸುವಿನ ಕೆಚ್ಚಲಿನಿಂದ ಹಾಲನ್ನು ಕರೆದುಕೊಂಡು ಹೊರಟು ಬಿಡುತ್ತಿದ್ದ.
ಹಸುವಿನ ಹಾಲು ಕದ್ದು ಸಿಕ್ಕಿಬಿದ್ದ ಸ್ವಾರಸ್ಯಕರ ಪ್ರಕರಣ ತುಮಕೂರಿನ ಕೆಸ್ತೂರಿನಲ್ಲಿ ನಡೆದಿದೆ. ಕೆಸ್ತೂರಿನ ನಿವಾಸಿ ಮಂಜುಳಾ ಎನ್ನುವವರ ಹಸುವಿನ ಹಾಲನ್ನು ರಾಜಣ್ಣ ಸತತ ಮೂರು ವರ್ಷದಿಂದ ಕದ್ದು, ಅಂತೂ ಸಿಕ್ಕಿಬಿದ್ದಿದ್ದಾನೆ. ನಿತ್ಯ 5 ಲೀಟರ್ ಹಾಲು ಕೆಚ್ಚಲಿನಿಂದ ಕದ್ದು, ರಾಜಣ್ಣ ಮಾರುತಿದ್ದ.
ರಾಜಣ್ಣನ ಕಳ್ಳಾಟ ಮಂಜುಳಾ ಮನೆಯವರಿಗೆ ಇತ್ತೀಚೆಗೆ ಗೊತ್ತಾಗಿದೆ. ರಾತ್ರಿ ವೇಳೆ ಹಸುವಿಗೆ ಥಂಡಿ ಆಗಿ, ಹಾಲು ಕೊಡುತ್ತಿಲ್ಲ ಅಂದುಕೊಂಡು ಸುಮ್ಮನಾಗಿದ್ದರು ಮಂಜುಳಾ ಮನೆಯವರು. ಆದರೆ ಯಾವಾಗ ಕೊಟ್ಟಿಗೆಯಲ್ಲಿ ಹಸುವಿನ ಹಾಲು ಕರೆದ ಕುರುಹುಗಳನ್ನು ಕಂಡರೋ ಆ ಮೇಲೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ
ಕೆಸ್ತೂರು ಗ್ರಾಮದ ರಾಜಣ್ಣ ಕೋರಾ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮೂರು ವರ್ಷಗಳಿಂದಲೂ ಹಸುವಿನ ಕೆಚ್ಚಲಿಗೆ ಕನ್ನ ಹಾಕಿ ಹಾಲನ್ನು ಕದ್ದು ಮಾರಿಕೊಂಡಿದ್ದಾನೆ.