ತುಮಕೂರಿನ ಗಡ್ಡ ರವಿ ಕೊಲೆ ಕೇಸು ಹಳ್ಳ ಹಿಡಿಯಿತಾ? ಆರೋಪಿಗಳ ನೆರವಿಗೆ ಯಾರ್ಯಾರೋ
ತುಮಕೂರಿನ ಮಾಜಿ ಮೇಯರ್ ಗಡ್ಡ ರವಿ ಹತ್ಯೆ ಪ್ರಕರಣ ಹಳ್ಳ ಹಿಡಿಯಿತಾ ಎಂಬ ಅನುಮಾನ ಶುರು ಆಗಿದೆ. ಈ ಪ್ರಕರಣವನ್ನು ಪೊಲೀಸರು ನಿಭಾಯಿಸುತ್ತಿರುವ ರೀತಿ ಗಮನಿಸಿದರೆ ಹಂತಕರಿಗೆ ಶಿಕ್ಷೆ ಆಗಲಿ ಎಂಬ ಉದ್ದೇಶ ಪೊಲೀಸರಿಗೆ ಇದ್ದಂತೆ ಕಾಣುವುದಿಲ್ಲ. ಜೆಡಿಎಸ್ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ ಗೃಹ ಖಾತೆ ಹೊಣೆ ಹೊತ್ತಿರುವ ಪರಮೇಶ್ವರ್ ಇದೇ ಜಿಲ್ಲೆಯವರಾದರೂ ಈ ಹತ್ಯೆ ಪ್ರಕರಣಕ್ಕೆ ಮಣ್ಣು ಹಾಕಲಾಗುತ್ತಿದೆ.
ಅಸಲಿಗೆ ಅನುಮಾನ ಶುರು ಆಗುವುದು ಇಬ್ಬರು ಆರೋಪಿಗಳು ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಶರಣಾದರಲ್ಲಾ ಅಲ್ಲಿಂದ. ತುಮಕೂರಿನವರಾದ ಸುಜಯ್ ಭಾರ್ಗವ್ ಹಾಗೂ ರಘುನನ್ನು ತುಮಕೂರಿನಿಂದ ಚಿಕ್ಕಬಳ್ಳಾಪುರದ ಗೌರಿಬಿದನೂರು ಗ್ರಾಮಾಂತರ ಠಾಣೆವರೆಗೆ ಕರೆದೊಯ್ದವರು ಯಾರು?
ತುಮಕೂರು ಮಾಜಿ ಮೇಯರ್ ರವಿ ಕುಮಾರ್ ಹತ್ಯೆ ನಡೆದಿದ್ದು ಹೇಗೆ?
ಈ ಹತ್ಯೆ ಪ್ರಕರಣದಲ್ಲಿ ಹಂತಕರನ್ನು ಎನ್ ಕೌಂಟರ್ ಮಾಡಬೇಕು ಎಂದು ಪೊಲೀಸರು ತೀರ್ಮಾನ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಲು ಕಾರಣ ಯಾರು? ಈ ಮಾಹಿತಿ ಆರೋಪಿಗಳ ತನಕ ತಲುಪಿದ್ದು ಹೇಗೆ? ಆರೋಪಿಗಳು ಶರಣಾದ ತಕ್ಷಣ ಅದರ ವಿಡಿಯೋ ಹಾಗೂ ಸುದ್ದಿ ಅಷ್ಟು ಬೇಗ ಆಗುವಂತೆ ನೋಡಿಕೊಳ್ಳುವುದರ ಹಿಂದೆ ಕೆಲವು ಪತ್ರಕರ್ತರೇ ಕೆಲಸ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪೊಲೀಸರು ಚೌಕಾಶಿ ದಂಧೆಗೆ ಇಳಿದಿದ್ದಾರೆ ಎಂಬ ಆರೋಪ
ರವಿಕುಮಾರ್ ಹತ್ಯೆ ಮಾಡುವ ಮುಂಚೆ ಖರೀದಿಸಿದ್ದ ಸಿಮ್ ಕಾರ್ಡ್, ಬ್ಯಾಗ್ ಇತ್ಯಾದಿ ವಸ್ತುಗಳ ಬಗ್ಗೆ ತನಿಖೆ ಮಾಡುತ್ತಾ ಸಾಗಿದ ಪೊಲೀಸರು ಅಲ್ಲೆಲ್ಲ ಮಾರಾಟಗಾರರನ್ನು ಬೆದರಿಸಿ, ಹಣ ವಸೂಲು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇನ್ನು ಹತ್ಯೆಗೆ ಸಂಬಂಧವೇ ಪಡದ ಕೆಲವರ ಹೆಸರನ್ನು ಸೇರಿಸಿ, ವಿಚಾರಣೆ ನೆಪದಲ್ಲಿ ಕರೆತಂದು ಹಿಂಸೆ ನೀಡುತ್ತಿದ್ದಾರೆ. ಆ ಮೂಲಕ ಚೌಕಾಶಿ ದಂಧೆಗೆ ಇಳಿದಿದ್ದಾರೆ ಎಂಬುದು ಆರೋಪ. ಸರಿ, ಇಂಥ ಆರೋಪಗಳು ಸಹಜವಾದದ್ದು ಅಂತಲೇ ಅಂದುಕೊಂಡರೂ ತನಿಖೆ ಸಾಗುತ್ತಿರುವ ಹಾದಿಯ ಬಗ್ಗೆ ಸಮಾಧಾನ ಇರಬೇಕಲ್ಲ, ಅದೂ ಇಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸ್ಥಳೀಯ ಪತ್ರಕರ್ತ.
ಪ್ರಕರಣಕ್ಕೆ ಸಂಬಂಧಪಡದವರನ್ನೂ ಹೆದರಿಸುತ್ತಿದ್ದಾರಂತೆ
ಈ ಹಿಂದೆ ತುಮಕೂರಿನಲ್ಲೇ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳಿಬ್ಬರು ಆರೋಪಿಗಳಿಗೆ ಕೆಲವು ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಅವರ ಪರವಾಗಿ ಸೂಚನೆಗಳನ್ನು ನೀಡುತ್ತಿದ್ದಾರೆ. ಹಾಗೆ ನೇರವಾಗಿ ಆರೋಪಿಗಳನ್ನು ಸಂಪರ್ಕಿಸದೆ ಕೆಲವು ಪತ್ರಕರ್ತರ ಮಧ್ಯಸ್ಥಿಕೆಯಲ್ಲೇ ಬೆಳವಣಿಗೆಗಳು ನಡೆಯುತ್ತಿವೆ. ಪೊಲೀಸ್ ಇಲಾಖೆಯಿಂದ ಮೇಲ್ನೋಟಕ್ಕೆ ತಂಡಗಳ ರಚನೆ ಮಾಡಿ, ಒಂಬತ್ತು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿರುವಂತೆ ತೋರಿಸುತ್ತಿದ್ದರೂ ಎಸ್ಪಿ ಗಮನಕ್ಕೆ ಬರದಂತೆ ಹಲವು ಬೆಳವಣಿಗೆಗಳು ಆಗುತ್ತಿವೆ. ಈ ಪ್ರಕರಣಕ್ಕೆ ಏನೇನೂ ಸಂಬಂಧ ಇರದ ಕೆಲವರನ್ನು ಹೆದರಿಸಿ ಹಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ತುಮಕೂರಿನ ಗಡ್ಡ ರವಿಯದು ನೂರಾರು ಕೋಟಿ ಸಾಮ್ರಾಜ್ಯವೆ? ಕೊಲೆಗೆ ಕಾರಣ?
ಆರೋಪಿಗಳ ನೆರವಿಗೆ ನಿಂತಿರುವವರು ಯಾರು?
ತುಮಕೂರು ಮಟ್ಟಿಗೆ ರವಿಕುಮಾರ್ ಹತ್ಯೆ ಪ್ರಕರಣ ಭಾರೀ ಸಂಚಲನ ಉಂಟು ಮಾಡಿರುವುದು ನಿಜ. ಆರಂಭದಲ್ಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ಊಹಾಪೋಹಗಳು ಹರಿದಾಡಿದ್ದವು. ಆದರೆ ದಿನ ಕಳೆದಂತೆ ಈ ಹತ್ಯೆ ಹಿಂದೆ ದೊಡ್ಡ ಕೈಗಳು ಕೆಲಸ ಮಾಡಿದಂತೆ ಅನಿಸುತ್ತಿದೆ. ಅದರಲ್ಲೂ ಹತ್ಯೆ ಮಾಡಿದ ರೀತಿ, ಆ ನಂತರದ ಬೆಳವಣಿಗೆಗಳು ಅನುಮಾನವನ್ನು ಪುಷ್ಟೀಕರಿಸುತ್ತಿವೆ. ಆರೋಪಿಗಳ ನೆರವಿಗೆ ನಿಂತಿದ್ದರೆ ಆ ಪೊಲೀಸ್ ಅಧಿಕಾರಿಗಳು ಹಾಗೂ ಪತ್ರಕರ್ತರು ಯಾರು ಎಂಬುದು ಕೂಡ ಬಯಲಾಗಬೇಕು. ಹಾಗೂ ಅವರ ಪಾತ್ರ ಏನು ಎಂಬುದು ತಿಳಿದುಬರಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ತುಮಕೂರು ಮಾಜಿ ಮೇಯರ್ ಗಡ್ಡರವಿ ಹಂತಕರು ಪೊಲೀಸರಿಗೆ ಶರಣು
ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದರು
ಸೆಪ್ಟೆಂಬರ್ 30ನೇ ತಾರೀಕು ತುಮಕೂರು ನಗರದ ಬಟವಾಡಿ ಸೇತುವೆ ಹತ್ತಿರ ಗಡ್ಡ ರವಿಕುಮಾರ್ ನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆ ನಂತರ ಹಂತಕರನ್ನು ಎನ್ ಕೌಂಟರ್ ಮಾಡಲು ಪೊಲೀಸ್ ಇಲಾಖೆ ಸಿದ್ಧವಾಗುತ್ತಿದೆ ಎಂಬ ಸುದ್ದಿ ಹರಡಿ, ಆರೋಪಿಗಳು ಇಬ್ಬರು ಗೌರಿಬಿದನೂರಿನಲ್ಲಿ ಶರಣಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ರೌಡಿ ನಿಗ್ರಹ ಪಡೆಯನ್ನು ರಚಿಸಿದ್ದು, ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತೆ ಆಗಿದೆ.