ಇಲ್ಲಿ ಡಿಸಿಎಂ: ಅತ್ತ ಕೊರಟಗೆರೆಯಲ್ಲಿ ಪರಮೇಶ್ವರ್ ರಾಜಕೀಯ ಆಟವೇ ಬೇರೆ
ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಮೃದು ಸ್ವಭಾವದಿಂದಾಗಿ ಕಾಂಗ್ರೆಸ್ ಶಾಸಕರಿಗೆ ಸರಕಾರದಲ್ಲಿ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎನ್ನುವ ಕೂಗು ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಇದೆ. ಖುದ್ದು ಸಿಎಂ ಕುಮಾರಸ್ವಾಮಿಯವರೇ, ಪರಮೇಶ್ವರ್ ಸ್ವಲ್ಪ ಟಫ್ ಆಗಬೇಕು ಎನ್ನುವ ಮಾತನ್ನೂ ಹೇಳಿದ್ದರು.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಕೊರಟಗೆರೆ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಸಿಎಂ ಅಭ್ಯರ್ಥಿಯಾಗಿದ್ದ ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ, ಜೆಡಿಸ್ ಜೊತೆ ಕೈಜೋಡಿಸಿ ಸೋಲಿಸಿದ್ದು ಎಂದೆಲ್ಲಾ ಸುದ್ದಿಯಾಗಿತ್ತು, ಇದೆಲ್ಲಾ ಸುಳ್ಳು ಎಂದು ಪರಮೇಶ್ವರ್ ಸ್ಪಷ್ಟನೆ ನೀಡಲೂ ಹೋಗಿರಲಿಲ್ಲ.
ತುಮಕೂರು: ಜೆಡಿಎಸ್ಗೆ ಮುನ್ನಡೆ, ಪರಮೇಶ್ವರ್ಗೆ ಮುಖಭಂಗ
ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಕಳೆದ ಚುನಾವಣೆಯಲ್ಲಿ ತಮ್ಮನ್ನು ಯಾರು ಸೋಲಿಸಿದ್ದರೋ (ಸುಧಾಕರ್ ಲಾಲ್, ಜೆಡಿಎಸ್) ಅವರನ್ನು 7,619 ಮತಗಳ ಅಂತರದಿಂದ ಸೋಲಿಸಿ, ವಿಧಾನಸಭೆಗೆ ಆಯ್ಕೆಯಾಗಿ, ಸಮ್ಮಿಶ್ರ ಸರಕಾರದಲ್ಲಿ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿದ್ದು ಗೊತ್ತೇ ಇದೆ.
ಎರಡು ದಿನದ ಹಿಂದೆ ಹೊರಬಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದ ನಂತರ ಮತ್ತೆ ಕೊರಟಗೆರೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಹದಿನೈದು ಸದಸ್ಯರ ಕೊರಟಗೆರೆ ಪಟ್ಟಣ ಪಂಚಾಯತ್ ನಲ್ಲಿ ಜೆಡಿಎಸ್ ಎಂಟು ಸ್ಥಾನವನ್ನು ಗೆದ್ದಿದೆ. ತುಮಕೂರು ಮಹಾನಗರಪಾಲಿಕೆಯಲ್ಲೂ ಅತಂತ್ರ ಪರಿಸ್ಥಿತಿ.
ಸ್ಥಳೀಯ ಸಂಸ್ಥೆ ಫಲಿತಾಂಶ : ಯಾವ ಪಕ್ಷದ ಹಿಡಿತ ಎಷ್ಟು?
ಉಪಮುಖ್ಯಮಂತ್ರಿಯಾಗಿದ್ದರೂ, ತಮ್ಮ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಪರಮೇಶ್ವರ್ ವಿಫಲರಾಗಿದ್ದಾರೆ ಎನ್ನುವ ಮಾತಿನ ನಡುವೆ, ತನ್ನ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಪರಮೇಶ್ವರ್ ಮಾಸ್ಟರ್ ಪ್ಲ್ಯಾನ್ ಹಣೆಯುತ್ತಿದ್ದಾರೆಂದು ವರದಿಯಾಗಿದೆ. ಇಲ್ಲಿ, ಇವರು ಸಡ್ಡು ಹೊಡೆಯಬೇಕಾಗಿರುವುದು ಜೆಡಿಎಸ್ ಪಕ್ಶಕ್ಕೆ.
ಅತಂತ್ರ ಫಲಿತಾಂಶ ಬಂದಿರುವುದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ
ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ, ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಈಗ ತುಮಕೂರು ಮಹಾನಗರಪಾಲಿಕೆಯಲ್ಲಿ ಗದ್ದುಗೇರಬೇಕಿದ್ದರೆ, ಮೈತ್ರಿ ಮಾಡಿಕೊಳ್ಳದೇ ಬೇರೆ ದಾರಿಯಿಲ್ಲ. 35 ಸದಸ್ಯರನ್ನು ಹೊಂದಿರುವ ಪಾಲಿಕೆಯಲ್ಲಿ, ಬಿಜೆಪಿ 12, ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ 10 ಮತ್ತು ಪಕ್ಷೇತರರು ಮೂರು ಸ್ಥಾನದಲ್ಲಿ ಗೆದ್ದಿದ್ದಾರೆ. ಅತಂತ್ರ ಫಲಿತಾಂಶ ಬಂದಿರುವುದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆ.
ಪರಮೇಶ್ವರ್ ಹೊಸ ತಂತ್ರಗಾರಿಕೆ
ಆದರೆ, ಪಕ್ಕದ ಕೊರಟಗೆರೆಯಲ್ಲಿ, ಇದೇ ಜೆಡಿಎಸ್ ಅನ್ನು ಗದ್ದುಗೆಯಿಂದ ದೂರವಿಡಲು ಪರಮೇಶ್ವರ್ ಹೊಸ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ತುಮಕೂರು ಜಿಲ್ಲೆಯ ಒಂದು ಮಹಾನಗರಪಾಲಿಕೆ, ಎರಡು ಪುರಸಭೆ ( ಮಧುಗಿರಿ, ಚಿಕ್ಕನಾಯಕನಹಳ್ಳಿ) ಮತ್ತು ಎರಡು ಪಟ್ಟಣ ಪಂಚಾಯತ್ ಗಳಲ್ಲಿ (ಗುಬ್ಬಿ, ಕೊರಟಗೆರೆ), ಮಧುಗಿರಿ ಒಂದನ್ನು ಬಿಟ್ಟು ಮಿಕ್ಕಾ ಎಲ್ಲಾ ಕಡೆ ಕಾಂಗ್ರೆಸ್ಸಿಗೆ ತೀವ್ರ ಹಿನ್ನಡೆಯಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆ : ಯಾವ ಪಕ್ಷಕ್ಕೆ ಎಷ್ಟು ಸೀಟು?
ಜೆಡಿಎಸ್ ಎಂಟು, ಕಾಂಗ್ರೆಸ್ ಐದು, ಬಿಜೆಪಿ ಒಂದು ಮತ್ತು ಒಬ್ಬರು ಪಕ್ಷೇತರರು
ಕೊರಟಗೆರೆ ಪಟ್ಟಣ ಪಂಚಾಯತ್ ನಲ್ಲಿ ಜೆಡಿಎಸ್ ಎಂಟು, ಕಾಂಗ್ರೆಸ್ ಐದು, ಬಿಜೆಪಿ ಒಂದು ಮತ್ತು ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಇಲ್ಲಿ ಜೆಡಿಎಸ್ ನಿರಾಯಾಸವಾಗಿ ಅಧಿಕಾರಕ್ಕೆ ಏರಬಹುದಾಗಿದ್ದರೂ, ಕ್ಷೇತ್ರದ ಶಾಸಕರು ಮತ್ತು ತುಮಕೂರು ಸಂಸದರು ಮತ ಚಲಾಯಿಸಬಹುದಾಗಿರುವುದರಿಂದ, ಅದರ ಲಾಭವನ್ನು ಪಡೆಯಲು ಪರಮೇಶ್ವರ್ ಮುಂದಾಗಿದ್ದಾರೆ.
ಬಿಜೆಪಿ ಮತ್ತು ಪಕ್ಷೇತರ ವಿಜೇತ ಅಭ್ಯರ್ಥಿ
ಕೊರಟಗೆರೆ ಶಾಸಕರೂ ಆಗಿರುವ ಪರಮೇಶ್ವರ್ ಮತ್ತು ತುಮಕೂರು ಸಂಸದ ಕಾಂಗ್ರೆಸ್ಸಿನ ಮುದ್ದಹನುಮೇಗೌಡ ಅವರ ಜೊತೆ ಬಿಜೆಪಿ ಮತ್ತು ಪಕ್ಷೇತರ ವಿಜೇತ ಅಭ್ಯರ್ಥಿಯನ್ನು ಕಾಂಗ್ರೆಸ್ಸಿಗೆ ಸೆಳೆದು, ಅಧಿಕಾರಕ್ಕೇರುವ ರಾಜಕೀಯ ಲೆಕ್ಕಾಚಾರ ಪರಮೇಶ್ವರ್ ಹಾಕಿಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ. ಒಂದು ವೇಳೆ, ಬಿಜೆಪಿ ಮತ್ತು ಪಕ್ಷೇತರರನ್ನು ಸೆಳೆಯಲು ಪರಮೇಶ್ವರ್ ಸಫಲರಾದರೆ, ಶಾಸಕ ಮತ್ತು ಸಂಸದರ ಬೆಂಬಲದೊಂದಿಗೆ, ಜೆಡಿಎಸ್ಸಿಗಿಂತ ಒಂದು ವೋಟು ಹೆಚ್ಚು ಕಾಂಗ್ರೆಸ್ಸಿಗೆ ಬರಲಿದೆ.
ಮೈತ್ರಿ ಎನ್ನುವುದಕ್ಕಿಂತ ಅನುಕೂಲ ರಾಜಕಾರಣ ಎನ್ನಬಹುದು
ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಹೊಂದಾಣಿಕೆ ನೋಡಿದರೆ, ಮೈತ್ರಿ ಎನ್ನುವುದಕ್ಕಿಂತ ಅನುಕೂಲ ರಾಜಕಾರಣ ಎನ್ನಬಹುದು, ಇದಕ್ಕೆ ತುಮಕೂರಿನ ರಾಜಕೀಯವೇ ಉದಾಹರಣೆ. ಆದರೆ, ಕೊರಟಗೆರೆಯಲ್ಲಿ ಪರಮೇಶ್ವರ್ ಅವರು ಉರುಳಿಸಲು ಮುಂದಾಗಿರುವ ರಾಜಕೀಯ ದಾಳ, ಸಮ್ಮಿಶ್ರ ಸರಕಾರದ ಭವಿಷ್ಯಕ್ಕೆ ಎಷ್ಟರ ಮಟ್ಟಿಗೆ ಪ್ರಭಾವ ಬೀಳಲಿದೆ ಎಂದು ಕಾದುನೋಡಬೇಕಿದೆ.