ತುಮಕೂರು ನಗರ ಬಿಜೆಪಿ ಟಿಕೆಟ್ ಜ್ಯೋತಿಗಣೇಶ್ ಗೆ, ಭಿನ್ನಮತ ಭುಗಿಲು
ತುಮಕೂರು, ಏಪ್ರಿಲ್ 16 : ತುಮಕೂರು ನಗರ ಕ್ಷೇತ್ರಕ್ಕೆ ಜಿ.ಬಿ.ಜ್ಯೋತಿಗಣೇಶ್ ಗೆ ಬಿಜೆಪಿ ಟಿಕೆಟ್ ಎಂಬುದು ನಿಕ್ಕಿಯಾಗಿದೆ. ಜಿಲ್ಲಾ ಬಿಜೆಪಿಯ ಸಾರಥ್ಯ ವಹಿಸಿದ್ದ ಅವರ ಬಗ್ಗೆ ಬಿಜೆಪಿಯೊಳಗೆ ಕೆಲವರ ಅಸಮಾಧಾನ ಇತ್ತು. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಅವರು ಸ್ಪರ್ಧಿಸಿದ್ದರು.
ಸೊಗಡು ಶಿವಣ್ಣಗೆ ಟಿಕೆಟ್ ಗೆ ಒತ್ತಾಯ, ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ
ಅದೇ ಕ್ಷೇತ್ರದಿಂದ ನಾಲ್ಕು ಬಾರಿ ಸತತವಾಗಿ ಬಿಜೆಪಿಯಿಂದ ಸ್ಪರ್ಧಿಸಿ, ಗೆದ್ದು, ಸಚಿವರೂ ಆಗಿದ್ದ ಸೊಗಡು ಶಿವಣ್ಣ, ಕಳೆದ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು. ಆ ನಂತರ ಕೆಜೆಪಿಯಲ್ಲಿದ್ದ ಜ್ಯೋತಿಗಣೇಶ್ ಅವರು ಬಿಜೆಪಿಗೆ ಬಂದು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದರು. ಈ ಕಾರಣಕ್ಕೆ ಸೊಗಡು ಶಿವಣ್ಣ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು.
ತಮ್ಮ ಮುಖಂಡನಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ, ಈಚೆಗಷ್ಟೇ ಸೊಗಡು ಶಿವಣ್ಣ ಬಣದ ಜಿಲ್ಲೆಯ ವಿವಿಧ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದರು. ಜ್ಯೋತಿಗಣೇಶ್ ಗೆ ಟಿಕೆಟ್ ಖಾತ್ರಿಯಾದ ಮೇಲೆ ಸೊಗಡು ಶಿವಣ್ಣ ತಮ್ಮ ಬೆಂಬಲಿಗರ ಸಭೆಯನ್ನು ಸೋಮವಾರ ನಡೆಸಿದ್ದು, ಮುಂದಿನ ತೀರ್ಮಾನ ಘೋಷಿಸುವ ಸಾಧ್ಯತೆ ಇದೆ.